ಬರಗಾಲದಲ್ಲಿ ರೈತರ ನೆರವಿಗೆ ಧಾವಿಸದ ಸರ್ಕಾರ: ನಿಖಿಲ್

KannadaprabhaNewsNetwork | Updated : Apr 15 2024, 12:47 PM IST

ಸಾರಾಂಶ

ಮಂಡ್ಯ ಜಿಲ್ಲೆಗೆ ಎಚ್.ಡಿ.ಕುಮಾರಸ್ವಾಮಿ ಅವರ ಕೊಡುಗೆ ಏನು ಎಂದು ಪ್ರಶ್ನಿಸುವ ಕಾಂಗ್ರೆಸ್ ನಾಯಕರು, ಮೆಡಿಕಲ್ ಕಾಲೇಜು, ಎಸ್ ಪಿಟಿಸಿ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ಕಟ್ಟಡ ಹಾಗೂ 48 ಸೇತುವೆಗಳ ನಿರ್ಮಾಣ ಕಾರ್ಯಗಳನ್ನು ನೋಡಲಿ ಎಂದು ಸವಾಲು ನಿಖಿಲ್ ಹಾಕಿದರು.

 ಮಳವಳ್ಳಿ :  ಬರಗಾಲದಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸದ ಸರ್ಕಾರ ಚುನಾವಣೆ ಗುಂಗಿನಲ್ಲಿ ಮುಳುಗಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ದೂರಿದರು.

ತಾಲೂಕಿನ ಬೋಪ್ಪೇಗೌಡನಪುರ(ಬಿಜಿಪುರ) ಹೋಬಳಿಯ ಹೊಸಹಳ್ಳಿ, ಬೆಳಕವಾಡಿ, ಬಿಜಿಪುರ, ಸರಗೂರು, ಪೂರಿಗಾಲಿ ಹಾಗೂ ಕಿರುಗಾವಲು ಹೋಬಳಿಯ ಕಿರುಗಾವಲು, ಮಿಕ್ಕೆರೆ, ಅಣಸಾಲೆ, ಭೀಮನಹಳ್ಳಿ, ಹಿಟ್ಟನಹಳ್ಳಿಕೊಪ್ಪಲು, ಮುದ್ದೇಗೌಡನದೊಡ್ಡಿ, ದುಗ್ಗನಹಳ್ಳಿ, ಹಂಚೀಪುರ, ತಳಗವಾದಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ರಾಜ್ಯದಲ್ಲಿ ಇದುವರೆಗೂ 800 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಕಿಂಚಿತ್ತು ಕಾಳಜಿ ತೋರಿಸುತ್ತಿಲ್ಲ. 5 ಗ್ಯಾರಂಟಿಗಳು ತಾತ್ಕಾಲಿಕ ಮಾತ್ರ,ಅವು ಶಾಶ್ವತವಲ್ಲವೆಂದು ಅವರದೇ ಪಕ್ಷದ ನಾಯಕರು ಸಮಾವೇಶದಲ್ಲಿ ಹೇಳಿದ್ದಾರೆ. ಮತ್ತೊಂದೆಡೆ ಸಂಸದರಿಗೆ ಮತ ಹಾಕದಿದ್ದರೆ ಗ್ಯಾರಂಟಿ ಸೌಲಭ್ಯ ಕೊಡುವುದಿಲ್ಲ ಎಂದು ಹೆಣ್ಣು ಮಕ್ಕಳನ್ನು ಹೆದರಿಸಿ ಮತ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.

ಮಂಡ್ಯ ಜಿಲ್ಲೆಗೆ ಎಚ್.ಡಿ.ಕುಮಾರಸ್ವಾಮಿ ಅವರ ಕೊಡುಗೆ ಏನು ಎಂದು ಪ್ರಶ್ನಿಸುವ ಕಾಂಗ್ರೆಸ್ ನಾಯಕರು, ಮೆಡಿಕಲ್ ಕಾಲೇಜು, ಎಸ್ ಪಿಟಿಸಿ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ಕಟ್ಟಡ ಹಾಗೂ 48 ಸೇತುವೆಗಳ ನಿರ್ಮಾಣ ಕಾರ್ಯಗಳನ್ನು ನೋಡಲಿ ಎಂದು ಸವಾಲು ಹಾಕಿದರು.

ಜೆಡಿಎಸ್ ಎಸ್ ಸಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಕೆ.ಅನ್ನದಾನಿ ಮಾತನಾಡಿದರು. ಕುಮಾರಣ್ಣ ಜಿಲ್ಲೆಯ ರೈತರ 76 ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ರೈತರ ಏಳ್ಗೆ, ಬಡವರ ಉದ್ಧಾರಕ್ಕಾಗಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡ ಜಿ.ಮುನಿರಾಜು ಮಾತನಾಡಿ, ಜಿಲ್ಲೆಯ ಹಾಗೂ ರಾಷ್ಟ್ರದ ಅಭಿವೃದ್ಧಿಗಾಗಿ ಮೈತ್ರಿ ಕೂಟದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಬೃಹತ್ ಹೂವಿನ ಹಾರ ಹಾಕಿ ಸ್ವಾಗತಿಸಿದರು.

ಜೆಡಿಎಸ್ ಯುವ ಘಟಕದ ಜಿಲ್ಲಾ ಅಧ್ಯಕ್ಷ ಬಿ.ರವಿ ಕಂಸಾಗರ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ವಿ.ಎಂ.ವಿಶ್ವನಾಥ್, ಜೆಡಿಎಸ್, ಬಿಜೆಪಿ, ಗ್ರಾಪಂ ಸದಸ್ಯರು ಇದ್ದರು.

Share this article