ಸರ್ಕಾರದಿಂದಲೆ ಬಾವಿ ನಿರ್ಮಿಸುತ್ತೇವೆ: ಸಚಿವ ವೈದ್ಯ

KannadaprabhaNewsNetwork |  
Published : Feb 19, 2024, 01:38 AM IST
ಸಚಿವ ವೈದ್ಯ ಗೌರಿ ನಾಯ್ಕ ಅವರೊಂದಿಗೆ ಮಾತುಕತೆ ನಡೆಸಿದರು | Kannada Prabha

ಸಾರಾಂಶ

₹ ೭.೭೯ ಲಕ್ಷ ಕೋಟಿ ಕೋಟ್ಯಂತರ ಬಜೆಟ್ ಮಂಡಿಸಿ,ಇಟ್ಟುಕೊಂಡು ಅಂಗನವಾಡಿಯಲ್ಲಿ ಇಲ್ಲ ಎಂದರೆ ನಾವು ಮಾಡುತ್ತಿರುವ ರಾಜಕಾರಣ ಸರಿಯಿಲ್ಲ ಎಂದು ಅರ್ಥ

ಶಿರಸಿ: ಇಲ್ಲಿನ ಗಣೇಶನಗರದ ಅಂಗನವಾಡಿ ನಂಬರ್ ೬ರಲ್ಲಿ ಗೌರಿ ನಾಯ್ಕ ಬಾವಿ ತೋಡುತ್ತಿರುವ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಭೇಟಿ ನೀಡಿ, ಬಾವಿ ತೋಡುವುದನ್ನು ಸ್ಥಗಿತಗೊಳಿಸಿ ಎಂದು ವಿನಂತಿಸಿದಲ್ಲದೇ, ಸರ್ಕಾರದಿಂದ ಬಾವಿ ನಿರ್ಮಾಣ ಮಾಡುವ ಭರವಸೆ ನೀಡಿದರು.

ಗಣೇಶನಗರದ ಅಂಗನವಾಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಮಾಹಿತಿ ತಿಳಿದು, ಹಿಂಭಾಗದಲ್ಲಿ ಸ್ವಇಚ್ಛೆಯಿಂದ ಇಳಿ ವಯಸ್ಸಿನ ಗೌರಿ ಅವರು ಬಾವಿ ತೋಡುತ್ತಿರುವುದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿ ಕೆಲವರು ಬೆಂಬಲ ವ್ಯಕ್ತಪಡಿಸಿದರೆ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಬಾವಿ ತೋಡುತ್ತಿರುವುದನ್ನು ನಿಲ್ಲಿಸುವಂತೆ ಗೌರಿ ಅವರ ಬಳಿ ವಿನಂತಿಸಿದ್ದರು. ಆದರೆ ಛಲ ಬಿಡದೇ ಗೌರಿ ಅವರು ಸುಮಾರು ೨೫ ಅಡಿ ಬಾವಿ ತೋಡಿದ್ದಾರೆ.

ಸಚಿವ ವೈದ್ಯ ವಿನಂತಿ: ಭಾನುವಾರ ಮಧ್ಯಾಹ್ನ ಅಂಗನವಾಡಿಗೆ ಭೇಟಿ ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಗೌರ ಅವರನ್ನು ವಿಚಾರಿಸಿದ್ದಲ್ಲದೇ, ಅಂಗನವಾಡಿಗೆ ನೀರಿನ ವ್ಯವಸ್ಥೆಗೆ ಬಾವಿ ತೋಡಲು ಕ್ರಮ ಕೈಗೊಳ್ಳುತ್ತೇನೆ. ಇಲ್ಲಿಗೆ ಸ್ಥಗಿತಗೊಳಿಸುವಂತೆ ವಿನಂತಿಸಿದರು.

ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಚಿವ ಮಂಕಾಳ ವೈದ್ಯ, ನನ್ನ ಜಿಲ್ಲೆಯಲ್ಲಿ ಅಂಗನವಾಡಿ, ಶಾಲೆ, ಸಾಮಾನ್ಯ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗಬಾರದೆಂದು ಕಳೆದ ೮ ತಿಂಗಳಿನಿಂದ ಕಷ್ಟಪಡುತ್ತಿದ್ದೇನೆ. ನೀರಿನ ಕೊರತೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೂ ಖಡಕ್ ಆದೇಶ ನೀಡಿದ್ದೇನೆ. ಆದರೆ ಮಹಿಳೆಯೊಬ್ಬಳು ಸ್ವ ಆಸಕ್ತಿಯಿಂದ ಬಾವಿ ತೋಡಿರುವುದನ್ನು ನಾವೆಲ್ಲರೂ ಅಭಿನಂದಿಸಲೇಬೇಕು. ಬಾವಿ ತೋಡಬಹುದು ಎಂಬುದನ್ನು ತೋರಿಸಿಕೊಂಡಿದ್ದಾರೆ. ₹ ೭.೭೯ ಲಕ್ಷ ಕೋಟಿ ಕೋಟ್ಯಂತರ ಬಜೆಟ್ ಮಂಡಿಸಿ,ಇಟ್ಟುಕೊಂಡು ಅಂಗನವಾಡಿಯಲ್ಲಿ ಇಲ್ಲ ಎಂದರೆ ನಾವು ಮಾಡುತ್ತಿರುವ ರಾಜಕಾರಣ ಸರಿಯಿಲ್ಲ ಎಂದು ಅರ್ಥವಾಗುತ್ತದೆ. ಆದ್ದರಿಂದ ಮಹಿಳೆಯ ಬಳಿ ಮನವಿ ಮಾಡಿದ್ದೇನೆ. ವಯಸ್ಸಾಗಿದೆ. ಉಳಿದವರಿಗೆ ಮಾದರಿಯಾಗಬೇಕು ಎಂದು ಹೇಳಿದ್ದೇನೆ. ಬಾವಿ ಪೂರ್ಣಗೊಳಿಸುವ ಕೆಲಸ ನಾನು ಮಾಡುತ್ತೇನೆ ಎಂದರು.

ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಹುತ್ಗಾರ ಗ್ರಾಪಂ ಅಧ್ಯಕ್ಷ ಶ್ರೀಧರ ನಾಯ್ಕ, ಉಪಾಧ್ಯಕ್ಷೆ ಶೋಭಾ ನಾಯ್ಕ ಮತ್ತಿತರರು ಇದ್ದರು.

ಕದಂಬೋತ್ಸವಕ್ಕೆ ಹಣ ಇದೆ: ಕದಂಬೋತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿ ಆಗಮಿಸಿ, ಉದ್ಘಾಟಿಸಬೇಕು ಎಂಬುದು ನಮ್ಮ ಆಸೆ. ಈ ಕಾರಣಕ್ಕೆ ಮಾ. ೫ ಮತ್ತು ೬ರಂದು ಇಟ್ಟುಕೊಂಡಿದ್ದೇವೆ. ಹಣ ಇಲ್ಲದೇ ಕಾರ್ಯಕ್ರಮ ಸ್ಥಗಿತಗೊಳಿಸುವುದಿಲ್ಲ. ಒಂದು ವೇಳೆ ಚುನಾವಣೆ ನೀತಿ ಸಂಹಿತೆ ಜಾರಿಗೊಂಡರೆ ಚುನಾವಣಾ ನಂತರ ಕದಂಬೋತ್ಸವ ಆಚರಿಸುತ್ತೇವೆ ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೃಜನಶೀಲತೆಗೆ ಸಾಹಿತ್ಯ ಹುಣ್ಣಿಮೆ ಪ್ರೇರಕ: ಮಂಜುನಾಥ
ಉಚಿತ ಆರೋಗ್ಯ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಿ: ಅಶೋಕ್