ಗಜೇಂದ್ರಗಡ : ಬೋರ್‌ವೆಲ್‌ ಕೊರೆಸಲು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಗೃಹಲಕ್ಷ್ಮೀ ಹಣ

KannadaprabhaNewsNetwork |  
Published : Dec 16, 2024, 12:46 AM ISTUpdated : Dec 16, 2024, 10:13 AM IST
ಬೋರ್‌ವೆಲ್‌  | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮೀ ಯೋಜನೆ ಹಣವನ್ನು ಮಹಿಳೆಯರು ಕುಟುಂಬದ ಹಲವು ಸಮಸ್ಯೆ ಪರಿಹಾರಕ್ಕೆ ಬಳಸಿ ಅಚ್ಚರಿ ಮೂಡಿಸಿರುವ ಮಧ್ಯೆ ಇದೀಗ ಪಟ್ಟಣದ ಕುಟುಂಬವೊಂದು ಗೃಹಲಕ್ಷ್ಮೀ ಹಣದಿಂದ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸುವ ಮೂಲಕ ಮತ್ತೊಂದು ಅಚ್ಚರಿಗೆ ಕಾರಣವಾಗಿದೆ.

 ಗಜೇಂದ್ರಗಡ : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮೀ ಯೋಜನೆ ಹಣವನ್ನು ಮಹಿಳೆಯರು ಕುಟುಂಬದ ಹಲವು ಸಮಸ್ಯೆ ಪರಿಹಾರಕ್ಕೆ ಬಳಸಿ ಅಚ್ಚರಿ ಮೂಡಿಸಿರುವ ಮಧ್ಯೆ ಇದೀಗ ಪಟ್ಟಣದ ಕುಟುಂಬವೊಂದು ಗೃಹಲಕ್ಷ್ಮೀ ಹಣದಿಂದ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸುವ ಮೂಲಕ ಮತ್ತೊಂದು ಅಚ್ಚರಿಗೆ ಕಾರಣವಾಗಿದೆ.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮಾಲ್ದಾರ್‌ ಕುಟುಂಬದ ಅತ್ತೆ ಮಾಬುಬೀ-ಸೊಸೆ ರೋಷನ್‌ಬೇಗಂ ಇಬ್ಬರೂ ಗೃಹಲಕ್ಷ್ಮೀ ಯೋಜನೆಯಿಂದ ಬಂದ ಒಟ್ಟು ₹44 ಸಾವಿರ ಹಣವನ್ನು ತಮ್ಮ 3 ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಲು ನೀಡಿದ್ದಾರೆ. ಮಾಬುಬೀ ಮಗನಿಗೆ ಹಣ ನೀಡಿದ್ದು ಕೊಳವೆ ಬಾವಿ ಕೊರೆಸಲು ಒಟ್ಟು ₹60 ಸಾವಿರ ಖರ್ಚಾಗಿದೆ. ಉಳಿದ ಹಣವನ್ನು ಮಾಬುಬೀ ಅವರ ಮಗ ಭರಿಸಿದ್ದಾರೆ. 

ಕೊಳವೆ ಬಾವಿಯಲ್ಲಿ ಒಂದೂವರೆ ಇಂಚು ನೀರು ಸಿಕ್ಕಿದ್ದು, ಸಿದ್ದರಾಮಯ್ಯ ನೀಡಿದ ಗೃಹಲಕ್ಷೀ ಯೋಜನೆ ಅನುಕೂಲವಾಗಿದೆ ಎಂದು ಮಾಲ್ದಾರ್‌ ಕುಟುಂಬ ಸಂತಸ ವ್ಯಕ್ತಪಡಿಸಿದೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದೆ.

ಅತ್ತೆ-ಸೊಸೆ ಕಾರ್ಯಕ್ಕೆ ಹೆಬ್ಬಾಳಕರ್‌ ಶ್ಲಾಘನೆ:

ಬೆಳಗಾವಿ: ಗೃಹಲಕ್ಷ್ಮೀ ಯೋಜನೆ ಹಣ ನೀಡುವ ಮೂಲಕ ಸರ್ಕಾರ ಅತ್ತೆ-ಸೊಸೆಯರ ಮಧ್ಯೆ ಜಗಳ ತಂದಿಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದ ವಿಪಕ್ಷಗಳಿಗೆ ಗದಗದ ಅತ್ತೆ-ಸೊಸೆ ಗೃಹಲಕ್ಷ್ಮೀ ಹಣ ಕೂಡಿಟ್ಟು ಕೊಳವೆಬಾವಿ ಕೊರೆಯಿಸಿ ತಕ್ಕ ಉತ್ತರ ನೀಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿರುಗೇಟು ನೀಡಿದ್ದಾರೆ.

ಭಾನುವಾರ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗದಗ ಜಿಲ್ಲೆಯ ಗಜೇಂದ್ರಗಡದ ಅತ್ತೆ, ಸೊಸೆ ಕಾರ್ಯ ನೋಡಿ ತುಂಬಾ ಖುಷಿ ಆಯಿತು. ಇವರು ಎಲ್ಲರಿಗೂ ಮಾದರಿ ಆಗಿದ್ದಾರೆ. ಗೃಹಲಕ್ಷ್ಮೀ ಹಣ ಅತ್ತೆಗೋ, ಸೊಸೆಗೋ ಎಂದು ವಿಪಕ್ಷದವರು ಜಗಳ ಹಚ್ಚೋ ಕೆಲ್ಸ ಮಾಡುತ್ತಿದ್ದರು. ಈ ಅತ್ತೆ, ಸೊಸೆ ಮಾದರಿಯಾಗಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.ಕೋಟ್‌:

ಗಜೇಂದ್ರಗಡದ ಅತ್ತೆ - ಸೊಸೆ ಇಬ್ಬರೂ ಗೃಹಲಕ್ಷ್ಮೀ ಹಣ ಉಳಿಸಿ ಅದರಲ್ಲಿ ಬೋರ್‌ವೆಲ್ ಕೊರೆಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

-ಸಿದ್ದರಾಮಯ್ಯ, ಮುಖ್ಯಮಂತ್ರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳಿಂದ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ
ಭಾರತದ ಭವಿಷ್ಯ ವರ್ಗ ಕೋಣೆಯಲ್ಲಿದೆ