ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಫ.ಗು. ಹಳಕಟ್ಟಿ ಸಾಧನೆ ಜಗತ್ತಿಗೆ ಮಾದರಿ: ಹೇಮಲತಾ ನಾಯಕ

KannadaprabhaNewsNetwork | Published : Jul 3, 2024 12:22 AM

ಸಾರಾಂಶ

ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಫ.ಗು.ಹಳಕಟ್ಟಿ ಅವರ ಸಾಧನೆ ಜಗತ್ತಿಗೆ ಮಾದರಿಯಾಗಿದೆ.

ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ । ವಿಧಾನಪರಿಷತ್ ಸದಸ್ಯೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಫ.ಗು.ಹಳಕಟ್ಟಿ ಅವರ ಸಾಧನೆ ಜಗತ್ತಿಗೆ ಮಾದರಿಯಾಗಿದೆ ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ಸಂಗ್ರಹಿಸಿ, ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ದಾಖಲೆ ಉಳಿಸುವಂತೆ, ವಚನಗಳ ಮಹತ್ವವನ್ನು ಜಗತ್ತಿಗೆ ಸಾರುವ ಕೆಲಸವನ್ನು ಫ.ಗು. ಹಳಕಟ್ಟಿಯವರು ಮಾಡಿದ್ದಾರೆ. ವಿಜಯಪುರದಲ್ಲಿ ಬಿಎಲ್‌ಡಿಇ ವಿಶ್ವವಿದ್ಯಾಲಯ ಸ್ಥಾಪಿಸುವುದರ ಮೂಲಕ ಅತ್ಯುನ್ನತ ಶಿಕ್ಷಣ ಸಂಸ್ಥೆಗೆ ಬುನಾದಿ ಹಾಕಿದರು. ಬ್ಯಾಂಕುಗಳನ್ನು ಸ್ಥಾಪಿಸಿದರು. ಹಳಕಟ್ಟಿಯವರ ಸ್ಮರಣೀಯ ಸಾಧನೆಗಾಗಿ ವಿಜಯಪುರದಲ್ಲಿ ಅವರ ಸ್ಮಾರಕ ನಿರ್ಮಿಸಲಾಗಿದೆ. ಅವರ ಸಾಧನೆಯನ್ನು ಶಾಶ್ವತವಾಗಿ ಉಳಿಸುವ ಸಲುವಾಗಿ ಸರ್ಕಾರ ಅವರ ಜನ್ಮದಿನಾಚರಣೆಯನ್ನು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನಾಗಿ ಆಚರಿಸುತ್ತಿದೆ. ಅವರ ಕಾರ್ಯವನ್ನು ಅರ್ಥಪೂರ್ಣವಾಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದಕ್ಕಾಗಿ ನಾವೆಲ್ಲರೂ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಅದರ ಸತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಮಾತನಾಡಿ, ಫ.ಗು. ಹಳಕಟ್ಟಿಯವರು ಸಾಹಿತಿಗಳು ಮಾತ್ರವಲ್ಲದೆ, ಸಮಾಜಮುಖಿ ಕೆಲಸ ಮಾಡಿದ್ದಾರೆ. ಶಿಕ್ಷಣ-ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಅವರ ಸಾಧನೆ ನಮಗೆಲ್ಲರಿಗೂ ಸ್ಪೂರ್ತಿಯಾಗಬೇಕು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಚನ ಸಾಹಿತ್ಯದೆಡೆಗೆ ಆಕರ್ಷಿತರಾಗಿ ಅವುಗಳನ್ನು ಸಂರಕ್ಷಿಸುವ ಕಾರ್ಯ ಮಾಡಿದರು. ವಚನಗಳನ್ನು ರಕ್ಷಿಸುವ ಸಲುವಾಗಿಯೇ ತಮ್ಮ ಮನೆಯನ್ನು ಮಾರಿದ ನಿಸ್ವಾರ್ಥ ಸಾಧಕ ಹಳಕಟ್ಟಿಯವರು ಎಂದು ಹೇಳಿದರು.

ಕೊಪ್ಪಳದ ವಿಶ್ವಗುರು ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಶಿವಕುಮಾರ ಕುಕನೂರು ಮಾತನಾಡಿ, ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು 25ನೇ ವಯಸ್ಸಿನಲ್ಲಿ ವಚನ ಸಾಹಿತ್ಯದೆಡೆಗೆ ಆಕರ್ಷಿತರಾಗಿ ವಚನ ಸಂರಕ್ಷಿಸಲು ಮುಂದಾದರು. ಅವರ ಈ ಕಾರ್ಯ ಅವರ ಕೊನೆಯವರೆಗೂ ನಡೆಯಿತು. ಹಳಕಟ್ಟಿಯವರು ಒಟ್ಟು 23,000 ವಚನ ಸಂಗ್ರಹಿಸಿ, ಅವುಗಳ ಸಮಗ್ರ ಪುಸ್ತಕವನ್ನಾಗಿ ಮಾಡಿ ವಚನ ಸಾಹಿತ್ಯ ಪುಸ್ತಕ ಪ್ರಕಟಿಸಿದರು. ಒಂದು ವಿವಿ 100 ವರ್ಷಗಳ ಮಾಡುವಂತಹ ಕೆಲಸವನ್ನು ಹಳಕಟ್ಟಿಯವರು ಒಬ್ಬರೇ ಸಾಧಿಸಿದರು. ನವಕರ್ನಾಟಕ ಪತ್ರಿಕೆ ಆರಂಭಿಸಿದರು. ಕರ್ನಾಟಕ ಏಕೀಕರಣ ಚಳವಳಿಗೆ ಈ ಪತ್ರಿಕೆಯು ಬುನಾದಿಯಾಗಿ ಕಾರ್ಯನಿರ್ವಹಿಸಿತು. 1926ರಲ್ಲಿ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು ಎಂದರು.ತಮ್ಮ ವೈಯಕ್ತಿಕ ಬದುಕು ತೀವ್ರ ಬಡತನದಲ್ಲಿದ್ದಾಗಲೂ, ಕೌಟುಂಬಿಕ ಜೀವನದಲ್ಲಿ ಅನೇಕ ನೋವು ಉಂಡರೂ ವಚನ ಸಾಹಿತ್ಯದ ಬಗ್ಗೆ ಅವರಿಗೆ ಕಿಂಚಿತ್ತೂ ಆಕರ್ಷಣೆ ಕಡಿಮೆಯಾಗಿರಲಿಲ್ಲ. ಅವರ ಮಗನ ಸಾವಿನ ನೋವಿನಲ್ಲೂ ವಚನ ಸಾಹಿತ್ಯದ ಕುರಿತ ಪುಸ್ತಕ ಪ್ರಕಟಿಸುವ ಬಗ್ಗೆ ಯೋಚಿಸುತ್ತಿದ್ದರು. ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ಬಗ್ಗೆ ಅವರಿಗೆ ಅತೀವ ಆಸಕ್ತಿಯಿತ್ತು. ಇಡೀ ಜಗತ್ತಿಗೆ ನಮ್ಮ ನಾಡಿನ ವಚನ ಸಾಹಿತ್ಯವನ್ನು ಪರಿಚಯಿಸುವ ದೃಷ್ಠಿಯಿಂದ ಇಂಗ್ಲೀಷಿನಲ್ಲಿ 100 ವಚನಗಳನ್ನು ತರ್ಜುಮೆ ಮಾಡುವ ಕಾರ್ಯ ಆರಂಭಿಸಿದ್ದರು. ಇಂದಿನ ಮಕ್ಕಳು, ಯುವ ಜನತೆ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಅವುಗಳನ್ನು ವಿಶ್ಲೇಷಿಸಿ, ಅವುಗಳ ಸಾರವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಡಾ. ಸಂಗಮೇಶ ಕಲಾಲ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಸಾಹಿತಿ ಸಾವಿತ್ರಿ ಮುಜಂದಾರ ನಿರೂಪಿಸಿದರು. ಗಂಗಾವತಿಯ ರಿಜ್ವಾನ ಮುದ್ದಾಬಳ್ಳಿ ಹಾಗೂ ಸಂಗಡಿಗರು ನಾಡಗೀತೆ ಹಾಗೂ ವಚನ ಗೀತೆ ಪ್ರಸ್ತುತ ಪಡಿಸಿದರು.

Share this article