ಕೃಷ್ಣ ಎನ್. ಲಮಾಣಿ
ಹೊಸಪೇಟೆ: ವಿಶ್ವವಿಖ್ಯಾತ ಮೈಸೂರು ದಸರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ನೆಲವೇ ಪ್ರೇರಣೆಯಾಗಿದೆ. ಇಂದಿಗೂ ದಸರೆಯ ಕುರುಹು ಹಂಪಿಯ ನೆಲದಲ್ಲಿ ದೊರೆಯುತ್ತದೆ. ವಿಜಯನಗರ ಆಳರಸರ ಕಾಲದ ದಸರಾ ವೈಭವ ಈಗ ಮೈಸೂರಿನಲ್ಲಿ ನಡೆಯುತ್ತಿದೆ.ಹಂಪಿ ಮಹಾನವಮಿ ದಿಬ್ಬ ಹಂಪಿಯಲ್ಲಿ ನಡೆಯುತ್ತಿದ್ದ ನವರಾತ್ರಿ ಉತ್ಸವದ ಕುರುಹು ಆಗಿದೆ. ಸುಮಾರು 12 ಮೀಟರ್ ಎತ್ತರದ ಮಹಾನವಮಿ ದಿಬ್ಬವನ್ನು ದಸರಾ ದಿಬ್ಬ ಎಂದು ಕರೆಯಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ ಆಳರಸರ ಕಾಲದಲ್ಲಿ ನವರಾತ್ರಿ ಉತ್ಸವವನ್ನು ಈ ವೇದಿಕೆಯಲ್ಲೇ ನಡೆಸಲಾಗುತ್ತಿತ್ತು ಎಂದು ಆಗಿನ ವಿದೇಶಿ ರಾಯಭಾರಿಗಳು, ಪ್ರವಾಸಿಗರು ತಮ್ಮ ಪ್ರವಾಸ ಕಥನಗಳಲ್ಲಿ ಉಲ್ಲೇಖಿಸಿದ್ದಾರೆ.
ವಿಜಯನಗರ ಆಳರಸರ ಕಾಲದಲ್ಲಿ ಮಾಂಡಲೀಕರಾಗಿದ್ದ ಮೈಸೂರು ಅರಸರು, ಈ ಸಾಮ್ರಾಜ್ಯ ಪತನಗೊಂಡ ಬಳಿಕ ಮೈಸೂರಿನಲ್ಲಿ ನವರಾತ್ರಿ ಉತ್ಸವವನ್ನು ಪ್ರಾರಂಭಿಸಿದ್ದಾರೆ ಎಂಬುದು ಅಧ್ಯಯನಗಳಿಂದ ತಿಳಿದು ಬರುತ್ತದೆ.ವಿಜಯನಗರ ಸಾಮ್ರಾಜ್ಯದ ಆರಂಭಿಕ ಕಾಲದಿಂದಲೇ ನವರಾತ್ರಿ ಉತ್ಸವವನ್ನು ನಡೆಸಲಾಗುತ್ತಿತ್ತು. ಶ್ರೀಕೃಷ್ಣದೇವರಾಯನ ಕಾಲದಲ್ಲಿ ಈ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಮಹಾನವಮಿ ದಿಬ್ಬ ಹಾಗೂ ಹಜಾರರಾಮ ದೇಗುಲದ ಮೇಲೆ ಆಚರಣೆಯ ಕುರುಹುಗಳ್ಳುಳ್ಳ ಚಿತ್ರಗಳನ್ನು ಕೆತ್ತನೆ ಮಾಡಲಾಗಿದೆ. ಇನ್ನು ಅಕ್ಕ-ತಂಗಿಯರ ಗುಡ್ಡದ ಬಳಿಯ ಜಡೇಶಂಕರ್ ಹೆಬ್ಬಾಗಿಲಿನ ಮೇಲೆ ವಜ್ರಮುಷ್ಠಿ ಕಾಳಗದ ಕುರುಹುಗಳನ್ನು ಕೆತ್ತನೆ ಮಾಡಲಾಗಿದೆ.
ವಿಜಯನಗರ ಆಳರಸರ ಕಾಲದಲ್ಲಿ ಒಂಬತ್ತು ದಿನಗಳವರೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಸೈನ್ಯದ ಸಮರಾಭ್ಯಾಸ ನಡೆಯುತ್ತಿತ್ತು. ಆನೆ, ಕುದುರೆ, ಕಾಲ್ದಳಗಳ ಮೆರವಣಿಗೆ ನಡೆಸಲಾಗುತ್ತಿತ್ತು. ಮಹಾನವಮಿ ದಿಬ್ಬದ ವೇದಿಕೆಯ ಮೇಲೆ ಮಹಾರಾಜ ಹಾಗೂ ರಾಜಮನೆತನದವರು ವಿರಾಜಮಾನರಾಗುತ್ತಿದ್ದರು. ಮಾಂಡಲೀಕ ಅರಸರು ಕಪ್ಪ ಕಾಣಿಕೆಯನ್ನು ಸಲ್ಲಿಸುತ್ತಿದ್ದರು. ಈ ಉತ್ಸವವನ್ನು ವಿಜಯನಗರದ ಆಳರಸರ ಕಾಲದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಈಗಿನ ಹಂಪಿ ಕನ್ನಡ ವಿವಿಯ ಬಳಿ ಇರುವ ಅಳ್ಳಿಕೆರೆಯಲ್ಲಿ ಸ್ನಾನ ಮಾಡಿದ ಬಳಿಕ ಸೈನಿಕರು ಹಾಗೂ ದಂಡನಾಯಕರು ತಮ್ಮ ದಳಗಳೊಂದಿಗೆ ಒಂಬತ್ತನೇ ದಿನ ಮೆರವಣಿಗೆ ನಡೆಸುತ್ತಿದ್ದರು. ಕನ್ನಡ ವಿಶ್ವವಿದ್ಯಾಲಯದ ಸಮೀಪದಲ್ಲೇ ಇರುವ ಮಂಟಪವೊಂದರ ಬಳಿ ಮಹಾರಾಜ ವಿರಾಜಮಾನರಾಗಿ ಬನ್ನಿ ಸಂಪ್ರದಾಯದಲ್ಲಿ ಭಾಗಿಯಾಗುತ್ತಿದ್ದರು ಎಂದು ಇತಿಹಾಸಕಾರರು ಹೇಳುತ್ತಾರೆ.ಮಹಾನವಮಿ ದಿಬ್ಬದ ವೇದಿಕೆಯ ಮೇಲೆ ವರ್ಣ ರಂಜಿತವಾದ ಅಲಂಕೃತವಾಗಿದ್ದ ಕಂಬಸಾಲುಗಳುಳ್ಳ ಹಜಾರವಿತ್ತೆಂದು ಹೇಳಲಾಗುತ್ತದೆ. ಇಡೀ ರಾಜಮನೆತನ ಸಂಭ್ರಮದಲ್ಲಿ ಭಾಗವಹಿಸುತ್ತಿತ್ತು. ರಾಜರು ಪ್ರಜೆಗಳೊಂದಿಗೆ ದಸರಾ ಹಬ್ಬವನ್ನು ಆಚರಣೆ ಮಾಡುತ್ತಿದ್ದುದು ವಿಶೇಷವಾಗಿತ್ತು. ವಿಜಯನಗರ ಸಾಮ್ರಾಜ್ಯ ಪತನದ ನಂತರ ಅಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ.
ಐತಿಹಾಸಿಕ ಮೈಸೂರು ದಸರೆಗೆ ಹಂಪಿಯ ಆಳರಸರ ಕಾಲದಲ್ಲಿನ ನವರಾತ್ರಿ ಉತ್ಸವವೇ ಪ್ರೇರಣೆಯಾಗಿದೆ. ಆಗಿನ ವಿದೇಶಿ ಪ್ರವಾಸಿಗರು ಹಾಗೂ ರಾಯಭಾರಿಗಳು ಹಂಪಿ ನವರಾತ್ರಿ ಉತ್ಸವದ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನುತ್ತಾರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ವಿರೂಪಾಕ್ಷಿ ಪೂಜಾರಹಳ್ಳಿ.