ಹೂವಿನಹಡಗಲಿ: ಹರ ಹರ ಮಹಾದೇವ ಎಂಬ ನಾಮಸ್ಮರಣೆಯೊಂದಿಗೆ ನಾಡಿನ ಐತಿಹಾಸಿಕ ಸುಪ್ರಸಿದ್ಧ ಸುಕ್ಷೇತ್ರ ಕುರುವತ್ತಿ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವವು ಲಕ್ಷಾಂತರ ಭಕ್ತಗಣದ ಮಧ್ಯೆ ಭಾನುವಾರ ಸಂಜೆ ಸಂಭ್ರಮ, ಸಡಗರದಿಂದ ಜರುಗಿತು.
ರಥೋತ್ಸವವು ತೇರು ಬೀದಿಯಿಂದ ಲಕ್ಷಾಂತರ ಭಕ್ತರ ಹರ್ಷೋದ್ಗಾರದ ಮಧ್ಯೆ ಆರಂಭವಾಗಿ ಬನ್ನಿಮರದಡಿ ಇರುವ ಪಾದಗಟ್ಟೆಯವರೆಗೂ ಎಳೆಯಲಾಯಿತು. ಬಳಿಕ ಸ್ವಸ್ಥಾನಕ್ಕೆ ಬಂದುನಿಂತಿತು.
ಭಾರಿ ಗಾತ್ರದ ನಾನಾ ಬಗೆಯ ಹೂಮಾಲೆಗಳ ಹಾಗೂ ತಳಿರು ತೋರಣಗಳಿಂದ ತೇರನ್ನು ಅಲಂಕಾರಗೊಳಿಸಲಾಗಿತ್ತು. ಸಮಾಳ, ನಂದಿಕೋಲು, ಹಲಗೆ, ಡೊಳ್ಳು ಸೇರಿದಂತೆ ವಿವಿಧ ಮಂಗಳ ವಾದ್ಯಗಳ ನಿನಾದ ರಥೋತ್ಸವ ಸಂಭ್ರಮಕ್ಕೆ ಮೆರುಗು ನೀಡಿದವು.ಸುಗ್ಗಿಯ ಕಾಲ ಮುಗಿದ ಬಳಿಕ ರೈತರು ಬದುಕಿನಲ್ಲಿ ಬಿಡುವು ಮಾಡಿಕೊಂಡ ಸಮಯದಲ್ಲಿ ಆರಂಭವಾಗುವ ಕುರುವತ್ತಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ಅಪಾರ ಪ್ರಮಾಣದಲ್ಲಿ ರೈತರು, ಎಂಟು ಎತ್ತಿನ ಹಳಿ ಬಂಡಿ, ಸವಾರಿ ಕೋಲಿನ ಬ೦ಡಿ ಎತ್ತುಗಳಿಗೆ ನಾನಾ ಬಣ್ಣದ ಜೂಲಾ, ಗೆಜ್ಜೆ ಸರಗಳಿಂದ ಅಲಂಕಾರ ಮಾಡಲಾಗಿತ್ತು. ಸ್ವಾಮಿಯ ಕೃಪೆಗೆ ಪಾತ್ರರಾಗಲು ಜಾತ್ರೆಗೆ ಭಕ್ತರು ವಿವಿಧ ಬಗೆಯ ಹರಕೆಗಳಾದ ಎತ್ತಿನ ಮೆರವಣಿಗೆ, ದೀಡ್ ನಮಸ್ಕಾರ ಹಾಕಿದರು. ರಾಣಿಬೆನ್ನೂರು, ದಾವಣಗೆರೆ ಸೇರಿದಂತೆ ವಿವಿಧ ಕಡೆಯ ಭಕ್ತರು ಜಾತ್ರೆಯ ಪರಿಷೆಯ ಭಕ್ತರಿಗೆ ಅನ್ನದಾಸೋಹ ಆಯೋಜಿಸಿದ್ದರು.
ಜಾತ್ರೆಯಲ್ಲಿ ನಡೆಯುತ್ತಿದ್ದ ಜೂಜಾಟ, ಪಿಕ್ ಪಾಕೆಟ್ ಸೇರಿದಂತೆ ಇತರ ಅಕ್ರಮ ಚಟುವಟಿಕೆಗಳ ತಡೆಗೆ ಪೊಲೀಸ್ ಇಲಾಖೆ ಕಣ್ಣಾವಲು ಇಟ್ಟಿತ್ತು. ಜತೆಗೆ ತೇರು ಎಳೆಯುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.
ದೀಪಾಲಂಕಾರ: ಕುರುವತ್ತಿ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿಗೆ ಮೂರ್ತಿಗೆ ಬೆಳ್ಳಿ ಆಭರಣಗಳನ್ನು ತೊಡಿಸಲಾಗಿತ್ತು. ಜತೆಗೆ ಹತ್ತಾರು ಬಗೆಯ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಮುಂದಿರುವ ಸಿಂಹಾಸನ ಕಟ್ಟೆ ಹಾಗೂ ಮುಖ್ಯ ದ್ವಾರಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ಅಗತ್ಯ ನೀರಿನ ಪೂರೈಕೆ: ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆ ಭಕ್ತರಿಗಾಗಿ 8 ಕಡೆಗಳಲ್ಲಿ ಸ್ಟ್ಯಾಂಡ್ ಪೋಸ್ಟ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಪೂರೈಕೆ ಹಾಗೂ 2 ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದ್ದು, 2 ಕಡೆಗೆ ಜಾನುವಾರು ತೊಟ್ಟಿ ನಿರ್ಮಿಸಿ ನೀರಿನ ತೊಂದರೆ ಆಗದಂತೆ ನಿಗಾ ವಹಿಸಿದ್ದಾರೆ.