ಗದಗ: ಶ್ರವಣ ಎಂದರೆ ಕೇಳು, ಮನನ ಮಾಡಿಕೊಳ್ಳುವದು. ಆದರೆ ಕೆಲವು ಮುಗ್ದ ಮಕ್ಕಳು ಬಾಲ್ಯದಲ್ಲಿಯೇ ಕೇಳುವ ಮಾತನಾಡುವ ಸಾಮರ್ಥ್ಯ ಕಳೆದುಕೊಂಡು ಮೌನಿಗಳಾಗುತ್ತಾರೆ. ಇಂಥಹ ಮಕ್ಕಳಿಗೆ ಪ್ರೇರಣೆ ಹಾಗೂ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳಿಗೆ ಸ್ಪೂರ್ತಿ ತುಂಬಬೇಕೆಂದು ರೋಟರಿ ಕ್ಲಬ್ನ ಡಿಸ್ಟ್ರೀಕ್ಟ್ ಅಸಿಸ್ಟಂಟ್ ಗೌರ್ನರ್ ಶರಣಬಸಪ್ಪ ಗುಡಿಮನಿ ಹೇಳಿದರು.
ಬಾಲ್ಯವೆಂದರೆ ಆಟಪಾಠಗಳನ್ನು ಮಿತ್ರರೊಡನೆ ಕಳೆಯಬೇಕು. ಆದರೆ ಈ ಮಕ್ಕಳು ಯಾವುದೇ ತಪ್ಪು ಮಾಡದೇ ಇಂತಹ ನೋವು ಅನುಭವಿಸಬೇಕಾಗುತ್ತದೆ, ನಾವು ಇಂತಹ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಲಕ್ಷ್ಮೇಶ್ವರದ ಕಿವುಡ ಮೂಗರ ಶಾಲೆಗೆ ರೋಟರಿ ಕ್ಲಬ್ ನೀಡಿದ ದೊಡ್ಡ ಮೊತ್ತದ ಕೊಡುಗೆಯನ್ನು ಸ್ಮರಿಸಿದರು.
ಕ್ಲಬ್ ಅಧ್ಯಕ್ಷ ವಿಜಯಕುಮಾರ ಹಿರೇಮಠ ಮಾತನಾಡಿ, ಶ್ರವಣ ಹಾಗೂ ಮಾತಿನ ವಿಕಲತೆ ಇರುವ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ನಾವು ಶ್ರಮಿಸಬೇಕೆಂದರು.ಕ್ಲಬ್ ಕಾರ್ಯದರ್ಶಿ ಸಂತೋಷ ತೋಟಗಂಟಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಇಂಥಹ ಮಕ್ಕಳು ಸಮಾಜದಲ್ಲಿ ಪ್ರತಿನಿತ್ಯ ಕ್ಲಿಷ್ಟಕರ ಸಮಸ್ಯೆಗಳನ್ನು ಎದುರಿಸುತ್ತಾರೆ. ವೈಜ್ಞಾನಿಕವಾಗಿ ಈ ಮಕ್ಕಳಿಗೆ ಸೌಲಭ್ಯ ಒದಗಿಸುವ ಕಾರ್ಯ ನಡೆಯಬೇಕಿದೆ ಎಂದರು.