ಕನ್ನಡಪ್ರಭ ವಾರ್ತೆ ಮಡಿಕೇರಿ ಜೇನುಕುರುಬರ ಮನೆತನದ ಕಕ್ಕೇರಿ ಕುಟುಂಬಸ್ಥರು ತಿತಿಮತಿ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿದ 5 ದಿನ ದಿನಗಳ ಕ್ರೀಡೋತ್ಸವಕ್ಕೆ ಸಂಭ್ರಮದ ತೆರೆ ಕಂಡಿದೆ. ಜೇನು ಕುರುಬ ಯುವಕರ ಅಭಿವೃದ್ಧಿ ಸಂಘ ನೇತೃತ್ವದಲ್ಲಿ ಆಯೋಜಿಸಿದ 5ನೇ ವರ್ಷದ ಕ್ರೀಡೋತ್ಸವದಲ್ಲಿ ಕ್ರಿಕೆಟ್ ಪಂದ್ಯಾವಳಿ, ಹಗ್ಗ ಜಗ್ಗಾಟ, ಕಪ್ಪೆ ಜಿಗಿತ, ಮ್ಯೂಸಿಕಲ್ ಚೇರ್ ಸೇರಿದಂತೆ ಮಹಿಳೆಯರು, ಪುರುಷರು, ಮಕ್ಕಳಿಗೆ ಹಲವಾರು ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೈಸೂರು ಜಿಲ್ಲಾ ಜೇನುಕರುಬರ ಸಂಘದ ಅಧ್ಯಕ್ಷ ಜಿ.ಟಿ. ರಾಜಪ್ಪ ಮಾತನಾಡಿ ಜೇನು ಕುರುಬ ಸಮುದಾಯದ ಬಾಂಧವರು ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ನೆಲೆಸಿದ್ದು ತಮ್ಮದೇ ಆದ ವೃತ್ತಿ ಜೀವನದೊಂದಿಗೆ ಮುನ್ನಡೆಯುತ್ತಿದ್ದಾರೆ. ಹಲವು ವರ್ಷಗಳಿಂದಲೂ ಕಾಡಂಚಿನಲ್ಲಿ ಮೂಲಸೌಕರ್ಯ ವಂಚಿತರಾಗಿ ಬದುಕು ಸಾಗಿಸುತ್ತಿರುವ ಜೇನು ಕುರುಬರನ್ನು ಸರ್ಕಾರ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಬೇಕಾಗಿದೆ ಎಂದರು. ಸಮಾರೋಪ ಸಮಾರಂಭದಲ್ಲಿ ನಾಣಚ್ಚಿ ಗದ್ದೆ ಹಾಡಿಯ ರಮೇಶ್ ಕಲಾತಂಡದವರಿಂದ ಆದಿವಾಸಿ ಸಂಸ್ಕೃತಿಯ ಸಂಗೀತ ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆಯಿತು. ಆದಿವಾಸಿ ಮುಖಂಡ ಜೆ.ಕೆ ಅಪ್ಪಾಜಿ, ಕರ್ನಾಟಕ ಕುರುಬರ ಸಂಘದ ರಾಜ್ಯ ಅಧ್ಯಕ್ಷೆ ಪ್ರಭಾವತಿ, ಮೈಸೂರು ಜಿಲ್ಲಾ ಜೇನು ಕುರುಬರ ಸಂಘದ ಉಪಾಧ್ಯಕ್ಷ ಬಸವಣ್ಣ, ಜಿಲ್ಲಾ ಕಾರ್ಯದರ್ಶಿ ಚಂದ್ರು, ತಾಲೂಕು ಅಧ್ಯಕ್ಷ ಸಿದ್ದು, ಉಪಾಧ್ಯಕ್ಷ ಬಸವಣ್ಣ, ಜೇನು ಕುರುಬ ಯುವಕರ ಅಭಿವೃದ್ದಿ ಸಂಘದ ಉಪಾಧ್ಯಕ್ಷ ಮನು, ಕಾರ್ಯದರ್ಶಿ ಜೆ.ಟಿ. ಅಯ್ಯಪ್ಪ, ಖಜಾಂಜಿ ಶಿವು, ಜೇನು ಕುರುಬ ಯುವಕರ ಅಭಿವೃದ್ದಿ ಸಂಘದ ಅಧ್ಯಕ್ಷ ಜೆ.ಬಿ ಸತೀಶ್, ಗ್ರಾಪಂ ಸದಸ್ಯರುಗಳಾದ ಅಪ್ಪಣ್ಣ, ಅಪ್ರೊಜ್, ಕಕ್ಕೇರಿ ಜೇನು ಕುರುಬ ಮನೆತನದ ರಮೇಶ್, ಕುಮಾರ್, ಅಜೇಯ್, ನಿತಿನ್, ಅದಿವಾಸಿ ಮುಖಂಡರಾದ ಹರೀಶ್, ಮೋಹನ್ ಪೂಜಾರಿ, ಶ್ಯಾಮ್, ಅಪ್ಪಣ್ಣ ಮತ್ತಿತರರು ಇದ್ದರು.