ಪ್ರಧಾನಿಯಿಂದ ಹಿಂದೂ, ಮುಸ್ಲೀಂ ಭೇಧ-ಭಾವ: ಅಂಜಲಿ ನಿಂಬಾಳ್ಕರ್

KannadaprabhaNewsNetwork | Published : Apr 14, 2024 1:46 AM

ಬಿಜೆಪಿಯವರದ್ದು ಬರೀ ಸುಳ್ಳು ಪ್ರಚಾರವಾಗಿದೆ. ಬಿಜೆಪಿಯವರು ಜಾತಿ ಜಾತಿ ಮಧ್ಯೆ ಬೆಂಕಿ ಹಚ್ಚಿ ರಾಜಕೀಯವಾಗಿ ಬೆಳೆಯುತ್ತಿದ್ದಾರೆ ಎಂದು, ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ಹೇಳಿದರು.

ಕನ್ನಡಪ್ರಭ ವಾರ್ತೆ ಭಟ್ಕಳ

ದೇಶದ ಪ್ರಧಾನ ಮಂತ್ರಿ ಪುಲ್ವಾಮಾದಲ್ಲಿ ದಾಳಿ ನಡೆಸಿ ಹಿಂದೂ ಮುಸ್ಲಿಂ ಮಾಡಲು ಹೊರಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಅಟ್ಯಾಕ್ ಮಾಡಲು ಬಂದಿದ್ದಾರೆ ಎಂದು ಬಂಧಿಸಿ ಹಿಂದೂ ಮುಸ್ಲಿಂ ಮಾಡುತ್ತಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಆರೋಪಿಸಿದರು.

ಹೆಬಳೆಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಇಂದಿರಾ ಗಾಂಧಿಯವರು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಏಕಾಂಗಿಯಾಗಿ ಪಾಕಿಸ್ತಾನದೊಂದಿಗೆ ಯುದ್ದ ಮಾಡಿ ಭಾರತವನ್ನು ಗೆಲ್ಲಿಸಿದ್ದಾರೆ ಎನ್ನುವುದನ್ನು ಬಿಜೆಪಿಯವರು ತಿಳಿದುಕೊಳ್ಳಬೇಕು. ಬಿಜೆಪಿಯವರದ್ದು ಬರೀ ಸುಳ್ಳು ಪ್ರಚಾರವಾಗಿದೆ. ಬಿಜೆಪಿಯವರು ಜಾತಿ ಜಾತಿ ಮಧ್ಯೆ ಬೆಂಕಿ ಹಚ್ಚಿ ರಾಜಕೀಯವಾಗಿ ಬೆಳೆಯುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ಯಾವುದೇ ರೀತಿಯ ಜಾತಿ, ಧರ್ಮ ಭೇದವಿಲ್ಲ. ಎಲ್ಲ ಜಾತಿ ಜನಾಂಗದವರಿಗೆ ನ್ಯಾಯ ಕೊಡುವ ಪಕ್ಷವಾಗಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದ ಅವರು ಬಿಜೆಪಿಯವರ ಸುಳ್ಳು ನಂಬಬೇಡಿ ಎಂದರು. ಅಂಜಲಿ ನಿಂಬಾಳ್ಕರರಿಗೆ ಉಡಿತುಂಬಿದ ಕಾರ್ಯಕರ್ತೆಯರು

ಕನ್ನಡಪ್ರಭ ವಾರ್ತೆ ಭಟ್ಕಳ

ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಬೆಳಕೆಯಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಉಡಿ ತುಂಬಿ ಬಹುಮತದಿಂದ ಗೆದ್ದು ಬರುವಂತೆ ಹಾರೈಸಿದರು. ಅಂಜಲಿ ನಿಂಬಾಳ್ಕರ ಅವರಿಗೆ ಉಡಿ ತುಂಬುವ ಸಂದರ್ಭದಲ್ಲಿ ಸಚಿವ ಮಂಕಾಳ ವೈದ್ಯ ಅವರ ಪತ್ನಿ ಪುಷ್ಪಲತಾ ವೈದ್ಯ, ಪುತ್ರಿ ಬೀನಾ ವೈದ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ, ಪ್ರಮುಖರಾದ ಜಯಲಕ್ಷ್ಮೀ ಗೊಂಡ, ಮೀನಾಕ್ಷಿ ನಾಯ್ಕ, ನಾಗವೇಣಿ ಗೊಂಡ ಸೇರಿದಂತೆ ಹಲವು ಮಹಿಳಾ ಪ್ರಮುಖರು, ಕಾರ್ಯಕರ್ತರಿದ್ದರು.

ಸೋಡಿಗದ್ದೆ ದೇವಿ ದರ್ಶನ ಪಡೆದ ಅಂಜಲಿ ನಿಂಬಾಳ್ಕರ್

ಕನ್ನಡಪ್ರಭ ವಾರ್ತೆ ಭಟ್ಕಳ

ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರು ಶನಿವಾರ ಪ್ರಸಿದ್ಧ ಕ್ಷೇತ್ರವಾದ ಸೋಡಿಗದ್ದೆ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಮಹಾಸತಿ ದೇವಿಯ ದರ್ಶನ ಪಡೆದರು.

ದರ್ಶನದ ಸಂದರ್ಭದಲ್ಲಿ ಶುಭ ಸಂಕೇತ ಎನ್ನುವಂತೆ ಮಹಾಸತಿ ದೇವಿ ತಲೆ ಮೇಲಿದ್ದ ಸಿಂಗಾರ ಪ್ರಸಾದ ಕೆಳಗೆ ಬಿದ್ದಿದೆ. ಅರ್ಚಕರು ಶುಭವಾಗಲಿ ಎಂದು ಹಾರೈಸಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಅವರ ಜೊತೆಗಿದ್ದವರಿಗೆ ತೀರ್ಥ ಪ್ರಸಾದ ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ, ಮಂಕಾಳ ವೈದ್ಯ ಪತ್ನಿ ಪುಷ್ಪಲತಾ ವೈದ್ಯ, ಪುತ್ರಿ ಬೀನಾ ವೈದ್ಯ ಮುಂತಾದವರಿದ್ದರು. ಅಂಜಲಿ ನಿಂಬಾಳ್ಕರ್ ಅವರು ಸೋಡಿಗದ್ದೆ ಮಹಾಸತಿ ದೇವಸ್ಥಾನದ ಇತಿಹಾಸ ಕೇಳಿ ತಿಳಿದುಕೊಂಡರು.