ಹಿರೇಬೆಣಕಲ್ ಬೆಟ್ಟ ಶೀಘ್ರವೇ ಯುನೆಸ್ಕೋ ತಾಣಗಳ ಪಟ್ಟಿಗೆ

KannadaprabhaNewsNetwork | Published : Dec 3, 2024 12:32 AM

ಸಾರಾಂಶ

ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಬೆಟ್ಟಗಳ ಮೇಲಿರುವ ಮಹಾ ಶಿಲಾಯುಗ ಕಾಲದ ಕಲ್ಗೋರಿಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಪಟ್ಟಿಗೆ ಸೇರುವುದು ನಿಶ್ಚಿತ.

ಕರ್ನಾಟಕದ ಅದ್ಭುತಗಳಲ್ಲೊಂದಾದ ಹಿರೇಬೆಣಕಲ್ ತಾಣಕ್ಕೆ ವಿದ್ಯಾರ್ಥಿಗಳ ಪ್ರವಾಸ

ಕನ್ನಡಪ್ರಭ ಗುರುತಿಸಿದ ಹಿರೇಬೆಣಕಲ್ ಈಗ ಪ್ರಸಿದ್ಧಿಯಾಗುವತ್ತ ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಬೆಟ್ಟಗಳ ಮೇಲಿರುವ ಮಹಾ ಶಿಲಾಯುಗ ಕಾಲದ ಕಲ್ಗೋರಿಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಪಟ್ಟಿಗೆ ಸೇರುವುದು ನಿಶ್ಚಿತ ಎಂದು ಇತಿಹಾಸ ತಜ್ಞ ಶರಣಪ್ಪ ಉಮಚಗಿ ಹೇಳಿದರು.

ಕುಷ್ಟಗಿ ಪಟ್ಟಣದ ಎಸ್ ವಿ ಸಿ ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ಆಯೋಜಿಸಿದ್ದ ಐತಿಹಾಸಿಕ ಶೈಕ್ಷಣಿಕ ಕ್ಷೇತ್ರ ಭೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸುಮಾರು 4,600 ವರ್ಷಗಳಷ್ಟು ಹಳೆಯದಾದ ಕಲ್ಗೋರಿಗಳು ಹಿರೇ ಬೆಣಕಲ್ ಬೆಟ್ಟದ ಮೇಲೆ ಸಿಕ್ಕಿವೆ. ಇವು ಈಜಿಪ್ಟ್ ದೇಶದ ಪಿರಾಮಿಡ್ ಕಾಲಕ್ಕಿಂತಲೂ ಪುರಾತನವಾದವು. 1934-35ರ ಸುಮಾರಿಗೆ ಸಂಶೋಧಕ ಲಿಯೋನಾರ್ಡೋ ಮನ್ ಕಲ್ಗೋರಿಗಳ ಕುರಿತು ಬೆಳಕು ಚೆಲ್ಲಿದರು. 1999ರ ಸುಮಾರಿಗೆ ಪುರಾತತ್ವ ತಜ್ಞ ಅ. ಸುಂದರ್ ಆಳವಾದ ಅಧ್ಯಯನ ನಡೆಸಿ ಇತಿಹಾಸದಲ್ಲಿ ಹೂತು ಹೋಗಿದ್ದ ಸತ್ಯವನ್ನು ಹೊರ ಜಗತ್ತಿಗೆ ಪರಿಚಯಿಸಿದ್ದಾರೆ. ದೇಶದ ನಾಲ್ಕೈದು ರಾಜ್ಯಗಳಲ್ಲಿ ಕಲ್ಗೋರಿಗಳು ಸಿಕ್ಕಿವೆ. ಆದರೆ ಒಂದೇ ಸ್ಥಳದಲ್ಲಿ ಸುಮಾರು 500 ಕಲ್ಗೋರಿಗಳು ಸಿಕ್ಕಿರುವುದು ಹಿರೇ ಬೆಣಕಲ್ ಗ್ರಾಮದಲ್ಲಿ ಮಾತ್ರ ಎಂದರು.

ಇನ್ನೆರಡೇ ವರ್ಷಗಳಲ್ಲಿ ಹಿರೇ ಬೆಣಕಲ್ ಯುನೆಸ್ಕೋ ಪಟ್ಟಿಗೆ ಸೇರುವುದರಲ್ಲಿ ಸಂದೇಹವೇ ಇಲ್ಲ. ಇದು ಕೊಪ್ಪಳ ಜಿಲ್ಲೆಯನ್ನು ಪ್ರಪಂಚದಲ್ಲಿಯೇ ವಿಶಿಷ್ಟ ಸ್ಥಾನಕ್ಕೆ ಏರಿಸಲಿದೆ. ಲಭ್ಯ ದಾಖಲೆಗಳ ಪ್ರಕಾರ ಸುಮಾರು 600 ಕಲ್ಗೋರಿಗಳು ಬೆಟ್ಟದ ಮೇಲೆ ಸಂಶೋಧಿಸಲ್ಪಟ್ಟಿವೆ. ಅವುಗಳಲ್ಲಿ ಸುಮಾರು ನೂರಕ್ಕಿಂತಲೂ ಹೆಚ್ಚು ಕಲ್ಗೋರಿಗಳು ನಶಿಸಿಹೋಗಿವೆ. ಮೂರೇರ್ ಜನಾಂಗದವರು ಉತ್ತರ ಭಾರತದಿಂದ ವಲಸೆ ಬಂದು ಇಲ್ಲಿ ನೆಲೆ ನಿಂತರು. ಅವರು ವಿಶಿಷ್ಟ ರೀತಿಯಲ್ಲಿ ಚಿಕ್ಕ ಮಕ್ಕಳಿಗೆ, ಮಧ್ಯ ವಯಸ್ಕರಿಗೆ ಹಾಗೂ ವಯಸ್ಸಾದವರಿಗೆ ಕಲ್ಗೋರಿಗಳನ್ನು ನಿರ್ಮಿಸಿದರು ಎಂದರು.

ಇತ್ತೀಚಿನ ಸಂಶೋಧನೆಗಳ ಪ್ರಕಾರ ತಾವರೆಗೆರೆ ಸುತ್ತಮುತ್ತಲು ಮಹಾ ಶಿಲಾಯುಗ ಕಾಲದ ಸುಮಾರು 4000 ವರ್ಷಗಳಿಗಿಂತಲೂ ಪುರಾತನವಾದ ಅವಶೇಷಗಳು ದೊರಕಿವೆ. ಅವುಗಳ ಕುರಿತು ಸಂಶೋಧನೆ ನಡೆದಿದೆ. ಇದು ತಾವರೆಗೆರೆ ಹಾಗೂ ಕೊಪ್ಪಳಕ್ಕೆ ಅಂತಾರಾಷ್ಟ್ರೀಯ ಮಟ್ಟದ ಹೆಸರನ್ನು ತಂದು ಕೊಡಲಿದೆ.

ಕೊಪ್ಪಳ ಜಿಲ್ಲೆಯ ಬೆಟ್ಟಗಳ ಸಾಲಿನಲ್ಲಿ ಮಹಾಶಿಲಾಯುಗ ಕಾಲದ ಅನೇಕ ಸತ್ಯಗಳು ಹುದುಗಿ ಹೋಗಿವೆ. ಅವುಗಳ ಸಂಶೋಧನೆ ಇಂದಿನ ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇತಿಹಾಸ ಅಧ್ಯಯನ ಮಾಡಿ ಸಂಶೋಧನೆ ಕೈಗೊಂಡು ಸತ್ಯವನ್ನು ಶೋಧಿಸಬೇಕು ಎಂದು ಕರೆ ನೀಡಿದರು.

ಅವರು ವಿದ್ಯಾರ್ಥಿಗಳನ್ನು ಬೆಟ್ಟಕ್ಕೆ ಕರೆದುಕೊಂಡು ಹೋಗಿ ಕಲ್ಗೋರಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಗಂಗಾವತಿ ಹಾಗೂ ಬೆಣಕಲ್ ನಾಮಗಳ ಹಿಂದಿನ ಇತಿಹಾಸವನ್ನು ವಿವರಿಸಿ ಹೇಳಿದರು.

ಶಿಕ್ಷಕರಾದ ಯೂಸುಫ್ ಖಾನ್ ಬಾದಾಮಿ, ಮೇಘ ಕುಲಕರ್ಣಿ, ಸವಿತಾ ಪಾಟೀಲ್, ಅವಿನಾಶ್ ಹಾಗೂ ನಿಂಗಪ್ಪ ಕಂಚಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಪ್ರವಾಸ:ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಘೋಷಣೆ ಮಾಡಿದ ಕರ್ನಾಟಕದ ಏಳು ಅದ್ಬುತಗಳಲ್ಲಿ ಮೊದಲ ಸ್ಥಾನದ ಪಡೆದಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಹಿನ್ನೆಲೆ ಹೊಂದಿರುವ ‘ಹಿರೇಬೆಣಕಲ್‌ ಶಿಲಾ ಸಮಾಧಿ’ಗಳ ತಾಣಕ್ಕೆ ಈಗ ಶಾಲಾ ವಿದ್ಯಾರ್ಥಿಗಳ ಪ್ರವಾಸ ಆಯೋಜನೆ ಮಾಡಲಾಗುತ್ತಿದೆ.

ಕುಷ್ಟಗಿ ಪಟ್ಟಣದ ಎಸ್.ವಿ.ಸಿ. ಶಾಲೆಯ ವಿದ್ಯಾರ್ಥಿಗಳು ಭೇಟಿ ನೀಡಿ, ಕಲ್ಗೊರಿಗಳನ್ನು ಕಂಡು ಬೆರಗಾಗಿದ್ದಾರೆ.

Share this article