ತಮ್ಮ ಹೇಳಿಕೆ ಒಂದು ಸಂಘಟನೆಯೊಂದರ ವ್ಯಕ್ತಿಗೆ ಸೀಮಿತ: ಶಾಸಕ ಕೆ.ಎಂ.ಉದಯ್

KannadaprabhaNewsNetwork | Published : Jun 16, 2025 2:45 AM

ಹೋರಾಟ ಮಾಡುವುದು ಪ್ರತಿಯೊಬ್ಬರ ಹಕ್ಕು. ನ್ಯಾಯಯುತವಾಗಿ ಮಾಡಲಿ. ನಾನು ಗೆಜ್ಜಲಗೆರೆ ಗ್ರಾಮಸ್ಥರ ಹೋರಾಟದ ಬಗ್ಗೆ ಮಾತನಾಡಿಲ್ಲ. ಏನೇ ಸಮಸ್ಯೆ ಇದ್ದರೂ ಚರ್ಚೆ ಮಾಡೋಣ. ಆಗು ಹೋಗುಗಳ ಬಗ್ಗೆ ಅಧ್ಯಯನ ಮಾಡೋಣ. ಯಾರು ನನ್ನ ಹೇಳಿಕೆಯನ್ನು ಕೆಲವರು ಮಿಸ್ ಗೈಡ್ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಅಭಿವೃದ್ಧಿಗೆ ವಿರೋಧ ಮಾಡುವವರು ರೋಲ್ ಕಾಲ್ ಗಿರಾಕಿಗಳು. ಎಂಜಲು ಕಾಸಿಗೆ ಕೈಯೊಡ್ಡುತ್ತಿದ್ದಾರೆ ಎಂಬ ತಮ್ಮ ಹೇಳಿಕೆ ಸಂಘಟನೆಯೊಂದರ ವ್ಯಕ್ತಿಗೆ ಸೀಮಿತವಾಗಿದೆ ಹೊರತು ರೈತಸಂಘ, ಸಾರ್ವಜನಿಕರು ಹಾಗೂ ಗೆಜ್ಜಲಗೆರೆ ಗ್ರಾಮಸ್ಥರ ಕುರಿತು ಮಾತನಾಡಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಸ್ಪಷ್ಟನೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ರೈತರು, ಜನರು, ಬಡವರ ಕೆಲಸ ಮಾಡಲು ಬಂದಿದ್ದೇವೆ. ಪ್ರತಿಭಟನೆ ವಿಚಾರ ಬಂದಾಗ ಒಬ್ಬ ವ್ಯಕ್ತಿ ಕುರಿತು ಹೇಳಿಕೆ ನೀಡಿದ್ದೇನೆ ಹೊರತು ರೈತರು, ಸಾರ್ವಜನಿಕರ ವಿರುದ್ಧ ಹೇಳಿಕೆ ಕೊಟ್ಟಿಲ್ಲ ಎಂದರು.

ಹೋರಾಟ ಮಾಡುವುದು ಪ್ರತಿಯೊಬ್ಬರ ಹಕ್ಕು. ನ್ಯಾಯಯುತವಾಗಿ ಮಾಡಲಿ. ನಾನು ಗೆಜ್ಜಲಗೆರೆ ಗ್ರಾಮಸ್ಥರ ಹೋರಾಟದ ಬಗ್ಗೆ ಮಾತನಾಡಿಲ್ಲ. ಏನೇ ಸಮಸ್ಯೆ ಇದ್ದರೂ ಚರ್ಚೆ ಮಾಡೋಣ. ಆಗು ಹೋಗುಗಳ ಬಗ್ಗೆ ಅಧ್ಯಯನ ಮಾಡೋಣ. ಯಾರು ನನ್ನ ಹೇಳಿಕೆಯನ್ನು ಕೆಲವರು ಮಿಸ್ ಗೈಡ್ ಮಾಡಿದ್ದಾರೆ ಎಂದರು.

ತಾಲೂಕಿಗೆ ಒಳ್ಳೆಯದನ್ನು ಮಾಡಲು ಬಂದಿದ್ದೇನೆ. ರೋಲ್ ಕಾಲ್ ಗಿರಾಗಿ ಯಾರು ಎಂಬುದು ಮಾಧ್ಯಮವದರಿಗೂ ಗೊತ್ತು. ಈ ವಿಚಾರವಾಗಿ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳ ಬಳಿಯೂ ಈ ವಿಚಾರವಾಗಿ ಮಾಧ್ಯಮಗಳು ಪ್ರಸ್ತಾಪಿಸಿವೆ. ಸಿಎಂ ಕೂಡ ಇದರ ಬಗ್ಗೆ ನನ್ನ ಬಳಿ ಸ್ಪಷ್ಟನೆ ಕೇಳಿದ್ದಾರೆ ಎಂದರು.

ನಾನು ವ್ಯಕ್ತಿ ಕುರಿತು ಹೇಳಿಕೆ ನೀಡಿದ್ದೇನೆ ಹೊರತು ರೈತರು, ಗೆಜ್ಜಲಗೆರೆ ಗ್ರಾಮಸ್ಥರು, ಹೋರಾಟಗಾರರು, ಸಂಘಟನೆಗಳು, ಗ್ರಾಮಸ್ಥರಲ್ಲಿ ಕ್ಷಮೆ ಕೇಳುವ ಪ್ರಶ್ನೆಯೇ ಬರುವುದಿಲ್ಲ ಎಂದರು.

ಮದ್ದೂರು ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ, ಸೋಮನಹಳ್ಳಿ, ಗೊರವನಹಳ್ಳಿ ಗ್ರಾಪಂಗಳು ಸೇರ್ಪಡೆ ವಿರೋಧಿಸಿ ಮಂಗಳವಾರ ಹೋರಾಟಗಾರರು ಬೃಹತ್ ಪ್ರತಿಭಟನೆ ಕುರಿತು ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಆದರೆ, ಇದನ್ನು ನನ್ನ ವೈಯಕ್ತಿಕ ಲಾಭಕ್ಕಾಗಿ ಮಾಡುತ್ತಿಲ್ಲ ಎಂದರು.

ಗ್ರಾಮಸ್ಥರು, ಹೋರಾಟಗಾರರು ಈ ಬಗ್ಗೆ ಚರ್ಚೆಗೆ ಬರಲಿ ಸಾಧಕ- ಬಾಧಕಗಳು, ಒಳ್ಳೆಯದಾಗುವ ಬಗ್ಗೆ ತಿಳಿಸುತ್ತೇನೆ. ಕೆಲ ಗ್ರಾಪಂನಲ್ಲಿ ಇದಕ್ಕೆ ಬೆಂಬಲ ನೀಡಿವೆ. ಇನ್ನು ಸಾಕಷ್ಟು ಕಾಲಾವಕಾಶವಿದೆ. ಏನೇ ಆದರೂ ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮಾಡುವುದು ಶತಸಿದ್ಧ ಎಂದು ಉತ್ತರಿಸಿದರು.

ನಮ್ಮನ್ನು ನಗರಸಭೆಗೆ ಸೇರಿಸುವಂತೆ ಹೆಮ್ಮನಹಳ್ಳಿ, ಚನ್ನಸಂದ್ರ, ವೈದ್ಯನಾಥಪುರ, ಮಾರಕಾಡುದೊಡ್ಡಿ, ಆಲೂರು, ಉಪ್ಪಿನಕೆರೆ ಸುತ್ತಾಮುತ್ತಲ ಗ್ರಾಮಸ್ಥರು ಬೇಡಿಕೆ ಹಾಕುತ್ತಿದ್ದಾರೆ. ಒಂದು ವೇಳೆ ಬೇಡವೇ ಬೇಡ ಎಂದರೆ ಮತ್ತೊಂದು ಅಭಿಪ್ರಾಯ ಬದಲಾಗಬಹುದು. ಯಾರೇ ಆದರೂ ಗೊಂದಲಗಳಿಗೆ ಕಿವಿಗೊಡಬಾರದು. ನೇರವಾಗಿ ನನ್ನನ್ನು ಕೇಳಿ ಈ ಬಗ್ಗೆ ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ತಾಲೂಕಿನಲ್ಲೂ ಸಾಧನಾ ಸಮಾವೇಶ:

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾಗಿದೆ. ಈಗಾಗಲೇ ಕೆಲವು ತಾಲೂಕುಗಳಲ್ಲಿ ಸಾಧನಾ ಸಮಾವೇಶ ಮಾಡಿದ್ದಾರೆ. ನಮ್ಮ ತಾಲೂಕಿಗೂ ಸಾವಿರಾರು ಕೋಟಿ ರು. ಅನುದಾನ ತಂದು ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿಯೂ ಜೂನ್ ಅಂತ್ಯದಲ್ಲಿ ಸಮಾವೇಶ ಮಾಡಬೇಕಿತ್ತು. ಆದರೆ, ಪೂರ್ವ ಸಿದ್ಧತೆಗಳು ಆಗಿಲ್ಲ ಎಂದರು.

ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸಮಾವೇಶದ ಸ್ಥಳ ನಿಗದಿ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮನ್ಮುಲ್ ನಿರ್ದೇಶಕ ಹರೀಶ್ ಕುಮಾರ್, ಪುರಸಭೆ ಸದಸ್ಯ ಎಂ.ಬಿ.ಸಚಿನ್ ಇದ್ದರು.