ಎಚ್ಕೆಇ ಸಂಸ್ಥೆ ಕೆಲವರಿಗಷ್ಟೆ ಚಿನ್ನದ ಮೊಟ್ಟೆ ಇಡುವ ಕೋಳಿ?

KannadaprabhaNewsNetwork |  
Published : Mar 11, 2024, 01:19 AM IST
ಫೋಟೋ- ಎಚ್ಕೆಇ ಸಂಸ್ಥೆ  ಆಫೀಸ್‌ | Kannada Prabha

ಸಾರಾಂಶ

ಮೂರು ವರ್ಷಕ್ಕೊಮ್ಮೆ ನಡೆಯುವ ಕಲ್ಯಾಣ ನಾಡಿನ ಪ್ರತಿಷ್ಠಿತ ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ)ಯ ಆಡಳಿತ ಮಂಡಳಿಗೆ ಮಾ.16ರಂದು ಚುನಾವಣೆ ನಿಗದಿಯಾಗಿದ್ದರಿಂದ ಚಟುವಟಿಕೆಗಳು ಬಿರುಸುಗೊಂಡಿವೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಮೂರು ವರ್ಷಕ್ಕೊಮ್ಮೆ ನಡೆಯುವ ಕಲ್ಯಾಣ ನಾಡಿನ ಪ್ರತಿಷ್ಠಿತ ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ)ಯ ಆಡಳಿತ ಮಂಡಳಿಗೆ ಮಾ.16ರಂದು ಚುನಾವಣೆ ನಿಗದಿಯಾಗಿದ್ದರಿಂದ ಚಟುವಟಿಕೆಗಳು ಬಿರುಸುಗೊಂಡಿವೆ.

ಮತದಾನದ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ, ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಆಕಾಂಕ್ಷಿಗಳು ಪೆನಲ್‌ ರಚಿಸಿಕೊಂಡಿದ್ದಾರೆ.

ಹಾಲಿ ಬಿಜೆಪಿ ಎಂಎಲ್‌ಸಿ , ಈಗಾಗಲೇ 2 ಬಾರಿ ಸಂಸ್ಥೆಯ ಅಧ್ಯಕ್ಷರಾಗಿದ್ದ, ಹಳೆಹುಲಿ ಶಶಿಲ್‌ ನಮೋಶಿ, ಹಾಲಿ ಅಧ್ಯಕ್ಷ ಡಾ. ಭೀಮಾಶಂಕರ ಬಿಲುಗಂದಿ ಪುತ್ರ ಸಂತೋಷ ಬಿಲಗುಂದಿ, ಮೂಳೆರೋಗ ತಜ್ಞ ಡಾ. ಶರಣಬಸವಪ್ಪ ಕಾಮರೆಡ್ಡಿ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳಾಗಿದ್ದು ಪ್ರತ್ಯೇಕ ಪ್ಯಾನೆಲ್‌ ರಚನೆಯಾಗಿವೆ. ಡಾ.ಸೂರ್ಯಕಾಂತ ಪಾಟೀಲ್‌ ಸ್ವತಂತ್ರರಾಗಿ ಅಧ್ಯಕ್ಷ ಹುದ್ದೆಗೆ ಕಣದಲ್ಲಿದ್ದಾರೆ. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಸೇರಿ 13 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಂಸ್ಥೆಯಲ್ಲಿ 1,450 ಸದಸ್ಯರಿದ್ದು, ಇ‍ರು ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದು ಮತ ಹಾಕಿ, ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ 13 ಆದ್ಯತೆ ಮತ ಚಲಾಯಿಸಲಿದ್ದಾರೆ.

ಎಚ್ಕೆಇ ಉಳಿಸಿ ಎಂಬ ಕೂಗು: ಆದರೆ ಇದೇ ಸಂಸ್ಥೆಯ ಮತದಾರರು ಕೆಲವರು ಸಂಸ್ಥೆಯ ಚುನಾವಣೆಯ ಈ ಸಂದರ್ಭದಲ್ಲಿ ಸಂಸ್ಥೆ ಸಾಗಬೇಕಿದ್ದ, ಇಂದು ಸಾಗುತ್ತಿರುವ ದಾರಿ ಕುರಿತಂತೆ ಧ್ವನಿ ಎತ್ತಿರೋದರಿಂದ ಈ ಬಾರಿ ಚುನಾವಣೆಯಲ್ಲಿ ಸಾಕಷ್ಟು ಸಂಚಲನ ಮೂಡಿದೆ. ಕಳೆದ 2 ತಿಂಗಳಿಂದ ಸಂಸ್ಥೆಯನ್ನು ಉಳಿಸೋಣವೆಂದು ಹೋರಾಟಗಾರ ಚಂದ್ರಶೇಖರ ಹಿರೇಮಠ ನಡೆಸುತ್ತಿರುವ ಏಕಾಂಗಿ ಹೋರಾಟ ಗಮನ ಸೆಳೆದಿದೆ.

ಕಳೆದ ಡಿಸೆಂಬರ್‌ನಿಂದಲೇ ಮತದಾರ ಸದಸ್ಯರೆಲ್ಲರಿಗೂ ಪತ್ರ ಬರೆಯುತ್ತ ಸಂಸ್ಥೆಯ ಆಗುಹೋಗು, ಸಾಗುತ್ತಿರುವ ದಾರಿಯ ಕುರಿತಂತೆ ಅವರ ಗಮನ ಸೆಳೆಯೋದಲ್ಲದೆ ಪ್ರಾಮಾಣಿಕರಿಗೆ ಮತ ಹಾಕುವ ಜರೂರತ್ತು ಹಿಂದೆಂದಿಗಿಂತಲೂ ಹೆಚ್ಚಿದೆ ಎಂಬುದನ್ನು ಸಾರುತ್ತಿರೋದು ಒಳ್ಳೆಯ ಬೆಳವಣಿಗೆಯಾದರೂ ಇದು ಕೆಲವರಿಗೆ ನುಂಗಲಾರದ ತುತ್ತಾಗಿದೆ.

ನಿರೀಕ್ಷಿತ ಬೆಳವಣಿಗೆ ಕಾಣದ ಎಚ್‌ಕೆಇ ಸಂಸ್ಥೆ: ಕಲಬುರಗಿಯ ಆಗಿನ ವಿಭಾಗೀಯ ಆಯುಕ್ತ ಜಿಎಂ ನಾಗರಾಜರಾವ್‌ ಅಧ್ಯಕ್ಷರಾಗಿ, ಶಿಕ್ಷಣ ತಜ್ಞ ಹಾಗೂ ಅಂದಿ ಸಂಸದರಾಗಿದ್ದ ಮಹಾದೇವಪ್ಪ ರಾಂಪೂರೆ ಕಾರ್ಯದರ್ಶಿಯಾಗಿ 1958ರಲ್ಲಿ ಎಲ್ಲರಿಗೂ ಗುಣಮಟ್ಟದ ವಿಜ್ಞಾನ- ತಂತ್ರಜ್ಞಾನದ ಶಿಕ್ಷಣ ನೀಡುವ ಕನಸಿನೊಂದಿಗೆ ತಲೆ ಎತ್ತಿರುವ ಎಚ್ಕೆಇ ಸಂಸ್ಥೆಯಡಿ ಇಂದು ಮೆಡಿಕಲ್‌, ಇಂಜಿನಿಯರಿಂಗ್‌, ಡೆಂಟಲ್‌, ಲಾ, ನರ್ಸಿಂಗ್‌, ಫಾರ್ಮಸಿ, ಪದವಿ, ವಿವಿಧ ಪ್ರೌಢ ಶಾಲೆಗಳು ಸರಿದಂತೆ 60 ಹೆಚ್ಚು ಸಂಸ್ಥೆಗಳಿವೆ.

ಸಮಾಜದ ಎಲ್ಲಾ ವರ್ಗದವರಿಗೂ ಉನ್ನತ ಶಿಕ್ಷಣ ಕೈಗೆಟುವಂತಾಗಬೇಕೆಂಬ ನಾಗರಾಜರಾವ್‌ ಹಾಗೂ ರಾಂಪೂರೆ ಕನಸಿನ ಕೂಸಾಗಿ ಜನ್ಮತಳೆದ ಸಂಸ್ಥೆ ಕಳೆದ ಆರೂವರೆ ದಶಕದಲ್ಲಿ ಹಿಂದುಳಿದ ಹೈ-ಕ ನೆಲದಲ್ಲಿ ಮಾಡಿದ ಸಾಧನೆ ಅಪಾರ. ದಿ.ವೀರೇಂದ್ರ ಪಾಟೀಲ್‌, ನಿಂಜಲಿಂಗಪ್ಪ, ಚಂದ್ರಶೇಖರ ಪಾಟೀಲ್‌ ಮಹಾಗಾಂವ್‌, ವರ್ತಕ- ರೈತ ಕುಟುಂಬಗಳು ಸೇರಿಕೊಂಡು ಎಚ್ಕೆಇ ಸಂಸ್ಥೆಗೆ ನೀಡಿದ್ದ ಬಂಬಲ ಅಪಾರ. ಹೀಗಾಗಿ ಸಂಸ್ಥೆ ಆಗೆಲ್ಲಾ ಬೆಳೆಯುತ್ತ ಸಾಗಿತ್ತು.

ಆದರೆ ಕಳೆದ 3 ದಶಕದಲ್ಲಿ ಸಂಸ್ಥೆಯ ಆಡಳಿತ ಹಲವು ಅಪಸವ್ಯಗಳೊಂದಿಗೆ ಅಧೋಗತಿಯತ್ತ ಸಾಗಿದೆ, ಸಂಸ್ಥೆ ಬೆಳೆಸಬೇಕೆಂಬ ವಿಚಾರದಲ್ಲಿ ಅಧಿಕಾರದಲ್ಲಿದ್ದವರ ನಿರಾಸಕ್ತಿ, ತಮ್ಮದೇ ಮೂಗಿನ ನೇರ ಚಿಂತನೆ, ಸಂಸ್ಥೆ ಬೆಳೆಸೋಣವೆಂಬ ಹಂಬಲವೂ ಕಾಣದ ಆಡಳಿತ ವರ್ಗದಿಂದಾಗಿ ಸಂಸ್ಥೆ ಇಂದು ಕೆಲವೇ ಕುಟುಂಬಗಳ ಪಾಲಿನ ಚಿನ್ನದ ಮೊಟ್ಟೆಯ ಕೋಳಿಯಾಗಿ ಪರಿವರ್ತಿತವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮಹಾದೇವಪ್ಪ ರಾಂಪೂರೆ ಕನಸು ಛಿದ್ರ: ಮೆಡಿಕಲ್‌, ಇಂಜಿನಿಯರಿಂಗ್‌ ಕಾಲೇಜಿನಿಂದ ಬರುವ ಅಪಾರ ಆದಾಯದ ಮೇಲೆಯೇ ಕಣ್ಣಿಟ್ಟುಕೊಂಡು ಚುನಾವಣೆ ಕುಸ್ತಿಗಿಳಿಯುವವರೇ ಅಧಿಕ, ಸಿಕ್ಕಷ್ಟು ಶಿವಾಯನಮಃ ಎಂಬ ಚಿಂತನೆಯವರೇ ಹೆಚ್ಚುತ್ತಿರೋದರಿಂದ ಸಂಸ್ಥೆಯ ಪ್ರಗತಿ ವಿಚಾರ ಹಿಂಬದಿ ಸ್ಥಾನ ಪಡೆದುಕೊಂಡಿದೆ. ಸಂಸ್ಥೆ ಸ್ಥಾಪಿಸಿದ ಮಹಾದೇವಪ್ಪ ರಾಂಪೂರೆಯವರ ಉದ್ದೇಶ ಇದಾಗಿರಲಿಲ್ಲ, ಹಿಂದುಳಿದ ಹೈ- ಕ ನೆಲದಲ್ಲಿ ಶಿಕ್ಷಣ ಕ್ರಾಂತಿ ಮಾಡುತ್ತ ಬಡವರು, ರೈತರು, ಜನ ಸಾಮಾನ್ಯೆಲ್ಲರ ಮನೆ ಮನಗಳಲ್ಲಿ ಶಿಕ್ಷಣ ದೀಪ ಬೆಳಗಿಸಬೇಕೆಂಬ ಅವರ ಉದ್ದೇಶವಿಂದು ಮಣ್ಣು ಪಾಲಾಗಿದೆ. ಇತ್ತೀಚೆಗೆ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿಯಲು ಇರುವ ಚುನಾವಣೆಗಳು ನಡೆಯುವ ಪರಿಯನ್ನು ಗಮನಿಸಿದರೆ ಸಾಕು, ಎಚ್ಕೆಇ ಅದ್ಯಾವ ದಿಕ್ಕಿನತ್ತ ಮುಖ ಮಾಡಿದೆ ಎಂಬುದು ಯಾರಾದರೂ ತಿಳಿಯಬಗುದಾಗಿದೆ.

ಕಲ್ಯಾಣ ನಾಡಿನ ಗಣ್ಯ ಪರಿವಾರವೆಂದು ಗುರುತಿಸಿಕೊಂಡವರೇ ಸಿಂಹಪಾಲು ಈ ಸಂಸ್ಥೆಗೆ ಸದಸ್ಯರಾಗಿದ್ದರೂ ಸಹ ಗುಂಡು- ತುಂಡಿನ ಅಬ್ಬರ, ಹಣದ ಕಂತೆ, ಬಂಗಾರ, ವಜ್ರಗಳ ಆಮಿಶದ ಕರಿ ನೆರಳಲ್ಲೇ ಚುನಾವಣೆಗಳು ಸಾಗಿರೋದು ದುರಾದೃಷ್ಟ. ಸಂಸ್ಥೆಯ ಸದಸ್ಯರಿಗೆ ಸಂಸ್ಥೆಯಿಂದ ನೆರವು ಸಿಗಬೇಕು ಎಂಬುದರಲ್ಲಿ ದೂಸ್ರಾ ಮಾತಿಲ್ಲ, ಆದರೆ ಸಂಸ್ಥೆಯ ನೂರಕ್ಕೆ ನೂರು ನೆರವು ಅವರಿಗೆ ಬಿಟ್ಟರೆ ಅನ್ಯರಿಗೆ ಯಾರಿಗ ಸಿಗಲೇಬಾರದು ಎಂಬುದು ಸ್ವಾರ್ಥವಲ್ಲದೆ ಮತ್ತೇನು?

ವೈದ್ಯ ವಿದ್ಯಾಲಯದೊಂದಿಗೆ ಇಲ್ಲಿದ್ದ ಸಂಸ್ಥೆಯ ಬಸವೇಶ್ವರ ಆಸ್ಪತ್ರೆ ಇಂದು ಜನರಿಗೆ ಸೂಕ್ತ ವೈದ್ಯಕೀಯ ಸೇವೆ ನೀಡುವುದರಿಂದ ವಿಮುಖವಾಗಿದೆ, ಇನ್ನು ವೈದ್ಯಕೀಯ, ಇಂಜಿನಿಯರಿಗ್‌, ದಂತವೈದ್ಯ, ಪದವಿ, ಪಾಲಿಟೆಕ್ನಿಕ್‌ದಂತಹ ಕಾಲೇಜುಗಳಲ್ಲಿಯೂ ಈ ನೆಲದ ಕಡು ಬಡವರಿಗೆ ಕಮ್ಮಿ ಶುಲ್ಕದಲ್ಲಿ ಉನ್ನತ ಶಿಕ್ಷಣ ಗಗನ ಕುಸುಮವಾಗಿದೆ.ಎಚ್‌ಕೆಇ ಸಂಸ್ಥೆಗೆ ಮಾ.16ರಂದು ಚುನಾವಣೆ ನಿಗದಿಯಾಗಿದೆ, ಅಂದು ಮತದಾನ ನಡೆದು ಅಂದೇ ಮತ ಎಣಿಕೆಯೂ ಮಾಡುತ್ತೇವೆ. ರಾತ್ರಿಯೊಳಗೆ ಫಲಿತಾಂಶ ಪ್ರಕಟಮಾಡುತ್ತೇವೆ.

- ಡಾ. ಪಿ.ಎಸ್‌. ಶಂಕರ್‌, ಚುನಾವಣಾಧಿಕಾರಿಗಳು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಸ್ಕಾಂ ಸೇವೆ ಅಸ್ತವ್ಯಸ್ತ: 12311 ಕೇಸ್‌ಗಳು ದಾಖಲು
ಮಳೆ ದಿನ ಕಳೆದರೂ ನಗರವಿನ್ನೂ ಅಸ್ತವ್ಯಸ್ತ