ಬಾಬು ಜಗಜೀವನ ರಾಮ್‌ ಬಡಾವಣೆಯ ವಸತಿ ಕಾಮಗಾರಿ ಕಳಪೆ: ನಂದೀಶ್‌

KannadaprabhaNewsNetwork | Published : Aug 4, 2024 1:19 AM

ಸಾರಾಂಶ

ಪುರಸಭೆಯ ೧೯ನೇ ವಾರ್ಡಿನ ಡಾ.ಬಾಬು ಜಗಜೀವನ್‌ ರಾಮ್‌ ಹೊಸ ಬಡಾವಣೆಯಲ್ಲಿ ನಿರ್ಮಾಣ ಹಂತದ ವಸತಿ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಗುಂಡ್ಲುಪೇಟೆ ಪಟ್ಟಣದ ನಿವಾಸಿ ನಂದೀಶ್ ಪುರಸಭೆ ಮುಖ್ಯಾಧಿಕಾರಿಗೆ ದೂರು ನೀಡಿದ್ದಾರೆ.

ಪುರಸಭೆ ಮುಖ್ಯಾಧಿಕಾರಿಗೆ ದೂರು ನೀಡಿದ ನಿವಾಸಿ ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪುರಸಭೆಯ ೧೯ನೇ ವಾರ್ಡಿನ ಡಾ.ಬಾಬು ಜಗಜೀವನ್‌ ರಾಮ್‌ ಹೊಸ ಬಡಾವಣೆಯಲ್ಲಿ ನಿರ್ಮಾಣ ಹಂತದ ವಸತಿ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಪಟ್ಟಣದ ನಿವಾಸಿ ನಂದೀಶ್ ಪುರಸಭೆ ಮುಖ್ಯಾಧಿಕಾರಿಗೆ ದೂರು ನೀಡಿದ್ದಾರೆ.ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ ನಿರ್ಮಾಣ ಮಾಡುತ್ತಿರುವ ಮನೆಗಳನ್ನು ಅತ್ಯಂತ ಕಳಪೆ ಗುಣ ಮಟ್ಟದಲ್ಲಿ ಮನೆ ಕಟ್ಟುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಗುಣ ಮಟ್ಟದ ಕಾಮಗಾರಿ ನಡೆಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ದೂರಿನ ಸಾರಾಂಶ: ಸುಮಾರು ನಾಲ್ಕು ವರ್ಷಗಳಿಂದಲೂ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿವೇಶನದ ಮಾಲೀಕರೇ ಮನೆ ನಿರ್ಮಾಣಕ್ಕೆ ಬೇಕಾದ ಬಾಗಿಲು ಮತ್ತು ಕಿಟಕಿಗಳನ್ನು ಹಾಗೂ ವಿದ್ಯುತ್ ಸಂಪರ್ಕದ ವ್ಯವಸ್ಥೆಯನ್ನು ಮಾಡಿಸಿಕೊಳ್ಳಬೇಕು. ಮನೆ ನಿರ್ಮಾಣದ ಕಾಮಗಾರಿಗೆ ಹೆಚ್ಚಿನ ಗುಣಮಟ್ಟ ಬೇಕು ಎಂದರೆ ಅದಕ್ಕೆ ಹೆಚ್ಚುವರಿ ಸಿಮೆಂಟನ್ನು ನಿವೇಶನದ ಮಾಲೀಕರೇ ಕೊಡಬೇಕು. ಹೀಗೆ ಹಲವಾರು ಷರತ್ತುಗಳನ್ನು ಹಾಕಿ ಕೊಳಚೆ ನಿರ್ಮೂಲನ ಮಂಡಳಿಯಿಂದ ಗುತ್ತಿಗೆ ಪಡೆದ ವ್ಯಕ್ತಿ ಮನೆಯ ಕಾಮಗಾರಿಯನ್ನು ಅತ್ಯಂತ ಕಳಪೆಯಿಂದ ಮಾಡಿದ್ದಾರೆ. ಮನೆ ನಿರ್ಮಾಣದ ವಿಚಾರವಾಗಿ ಮಾತನಾಡಲು ಸಂಬಂಧಿಸಿದ ಇಂಜಿನಿಯರ್ ಸಂಪರ್ಕಕ್ಕೆ ಸಿಗುತ್ತಿಲ್ಲ ಹಾಗೂ ನಿವೇಶನದ ಮಾಲೀಕರು ಮತ್ತು ಗುತ್ತಿಗೆದಾರರ ಮಧ್ಯೆ ಮಧ್ಯವರ್ತಿಗಳನ್ನು ಬಿಟ್ಟು ಕೆಲಸ ಮಾಡಿಸುತ್ತಿದ್ದಾರೆ.

ಈಗಾಗಲೇ ಅರ್ಧಂಬರ್ಧ ಮನೆ ಕೆಲಸ ನಡೆದಿದ್ದು, ಸ್ಥಗಿತಗೊಂಡ ಕಟ್ಟಡಗಳು ಮಳೆ ಮತ್ತು ಬಿಸಿಲಿನಿಂದ ಶಿಥಿಲಾವಸ್ಥೆಗೆ ಬಂದಿದೆ

ಗುಂಡ್ಲುಪೇಟೆ ಡಾ.ಬಾಬು ಜಗಜೀವನರಾಂ ಹೊಸ ಬಡಾವಣೆಯಲ್ಲಿ ಕಟ್ಟುತ್ತಿರುವ ವಸತಿ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ದೂರು ಬಂದಿದೆ. ಈ ಸಂಬಂಧ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಗೆ ಪತ್ರ ಬರೆದಿದ್ದು, ಸ್ಥಳ ಪರಿಶೀಲನೆ ನಡೆಸಿ ಎಂದು ಹೇಳಿದ್ದೇನೆ.

-ಕೆ.ಪಿ.ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ ಗುಂಡ್ಲುಪೇಟೆ

Share this article