ಜನಸ್ನೇಹದೆಡೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸರು!

KannadaprabhaNewsNetwork | Published : Nov 18, 2023 1:00 AM

ಸಾರಾಂಶ

ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮೀಷನರೇಟ್ ನಲ್ಲಿ ಹೊಸತೊಂದು ಅಧ್ಯಾಯ ಶುರುವಾಗಿದೆ. ಪೊಲೀಸರೇ ಜನರ ಬಳಿ ತೆರಳಿ ಅವರ ದುಃಖ ದುಮ್ಮಾನ‌ ಕೇಳಿ, ಸಾಧ್ಯವಾದರೆ ಅಲ್ಲಿಯೇ ಬಗೆಹರಿಸಿ, ಇಲ್ಲವೇ ಕಾನೂನು ನೆರವನ್ನು ನೀಡುವ ನಿಟ್ಟಿನಲ್ಲಿ ಜನಸ್ನೇಹಿ ಪೊಲೀಸಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

"ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮೀಷನರೇಟ್ " ನಲ್ಲಿ ಹೊಸತೊಂದು ಅಧ್ಯಾಯ ಶುರುವಾಗಿದೆ. ಪೊಲೀಸರೇ ಜನರ ಬಳಿ ತೆರಳಿ ಅವರ ದುಃಖ ದುಮ್ಮಾನ‌ ಕೇಳಿ, ಸಾಧ್ಯವಾದರೆ ಅಲ್ಲಿಯೇ ಬಗೆಹರಿಸಿ, ಇಲ್ಲವೇ ಕಾನೂನು ನೆರವನ್ನು ನೀಡುವ ನಿಟ್ಟಿನಲ್ಲಿ "ಜನಸ್ನೇಹಿ ಪೊಲೀಸಿಂಗ್ " ವ್ಯವಸ್ಥೆ ಜಾರಿಗೆ ತರಲಾಗಿದೆ!

ಪೊಲೀಸ್ ಎಂದರೆ ಭಯವಲ್ಲ, ಅದೊಂದು ಅಭಯ. ಆರಕ್ಷಕರೆಂದರೆ ಈ ಸಮಾಜದ ರಕ್ಷಕರು. ಸಮಾಜದಲ್ಲಿ ಕಾನೂನನ್ನು ಜಾರಿಗೊಳಿಸುವ ಒಂದು ಅಂಗ. ಜನಸಾಮಾನ್ಯರಿಗೆ ಬಲು ಹತ್ತಿರವಾಗುವ ನಿಟ್ಟಿನಲ್ಲಿ ಈ ಹೊಸ ಪ್ರಯತ್ನಕ್ಕೆ ಪೊಲೀಸರು ಕೈ ಹಾಕಿದ್ದಾರೆ.

ಸಮಾಜದಲ್ಲಿ ಕೊನೆಯ ವ್ಯಕ್ತಿಯಿಂದ ಮೊದಲ್ಗೊಂಡು ಎಲ್ಲ ಸ್ತರದ ಜನರು ಗೌರವಯುತವಾದ ಜೀವನ ನಡೆಸುವಂತೆ ಇರುವ ಕಾನೂನನ್ನು ಜಾರಿಗೊಳಿಸಿ, ಜನರಿಗೊಂದು ನಂಬಿಕೆಯ ಸೆಲೆಯನ್ನು ಹುಟ್ಟುಹಾಕುವುದೇ ಈ "ಜನಸ್ನೇಹಿ ಪೊಲೀಸ್ " ಗುರಿಯಾಗಿದೆ.

ಮನವರಿಕೆ ಕಾರ್ಯ:

ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಿಗೆ ಹೋಗುವ ಹಿರಿಯ ಅಧಿಕಾರಿಗಳು ಪೊಲೀಸ್‌ ವ್ಯವಸ್ಥೆಯ ಬಗ್ಗೆ ಮನವರಿಕೆ ಮಾಡುತ್ತಾರೆ. ಹಾದಿ-ಬೀದಿಯಲ್ಲಿ ನಿಂತಿರುವ ಜನರನ್ನು ಒಂದೆಡೆ ಸೇರಿಸಿ ಪೊಲೀಸರೊಂದಿಗೆ ಸಾರ್ವಜನಿಕರು ಹೇಗೆ ಸಹಕಾರಿ ಆಗಬೇಕು ಎನ್ನುವುದನ್ನು ಮನದಟ್ಟು ಮಾಡುತ್ತಿದ್ದಾರೆ. ಸಮಾಜದಲ್ಲಿ ವಿದ್ರೋಹಿ ಕೃತ್ಯದಲ್ಲಿ ತೊಡಗಿದವರ ಬಗ್ಗೆ ನಿಗಾ ಇಡಲು, ಪುಂಡ-ಪೋಕರಿಗಳ ಬಗ್ಗೆ ಮಾಹಿತಿ ನೀಡುವ ಕುರಿತೂ ತಿಳುವಳಿಕೆ ನೀಡುತ್ತಿದ್ದಾರೆ.

ಪೊಲೀಸರೆಂದರೆ ಈ ಸಮಾಜದಲ್ಲಿ ಒಂದು ಅವ್ಯಕ್ತವಾದ ಮೂಗುಮುರಿಯುವ ಮನಸ್ಥಿತಿ ಈ ಸಮಾಜದಲ್ಲಿದೆ. ಪೊಲೀಸರ ಬಗ್ಗೆ ಇರುವ ಭಾವನೆಗಳೇ ಬೇರೆ. ಅಂಥಹ ಬೇರೂರಿರುವ ಭಾವನೆಗಳ ತೊಳೆಯುವ, ಸಾರ್ವಜನಿಕರಲ್ಲಿ, ಅಸಹಾಯಕರಲ್ಲಿ, ತುಳಿತಕ್ಕೊಳಗಾದವರಲ್ಲಿ ಒಂದು ಸುಭದ್ರ ರಕ್ಷಣೆಯ ಭಾವನೆಯನ್ನು ತರುವುದರಿಂದ ಹಿಡಿದು, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಧೃಢ ಭಾವವನ್ನು ಎಲ್ಲರಲ್ಲಿ ತರುವ ನಿಟ್ಟಿನಲ್ಲಿ ಈ "ಜನಸ್ನೇಹಿ ಪೊಲೀಸ್ ವ್ಯವಸ್ಥೆ " ಜಾರಿಯಾಗಿದೆ.

ಶಾಲಾ ಮಕ್ಕಳು, ದುಡಿಯುವ ವರ್ಗ, ಅಸಂಘಟಿತ ಕಾರ್ಮಿಕರು ಹಾಗೂ ವಯೋವೃದ್ದರಿಗೂ ಸಹ ಅವರ ಮನಸ್ಸಿಗೆ ನಮ್ಮವರೊಬ್ಬರಿದ್ದಾರೆ ಎಂಬ ಭಾವವನ್ನು ತರುವುದೇ ಇದರ ಹಿಂದಿನ ಉದ್ದೇಶವಾಗಿದೆ. ನೊಂದವರಿಗೆ ನಮ್ಮವರೊಬ್ಬರಿದ್ದಾರೆ ಎಂಬ ಭರವಸೆ ಹುಟ್ಟಿಸುವ ವ್ಯವಸ್ಥೆ ನಡೆದಿದೆ. ಆದುದರಿಂದ ಪೊಲೀಸರು ಸಾರ್ವಜನಿಕರ ಮನೆ - ಮನಗಳ ಬಳಿಗೆ ಹೋಗಿ ಅವರ ಸುಖ ದುಃಖ ಆಲಿಸುವಂತಹ, ಸಮಸ್ಯೆಗಳನ್ನು ಬಗೆಹರಿಸುವಂತಹ ಕಾರ್ಯವೇ ಈ ಹೊಸ ವ್ಯವಸ್ಥೆಯಿಂದ ಆಗುತ್ತಿದೆ.

ಜನತೆಯ ಸಹಕಾರ:

ಕೇವಲ ಸಮವಸ್ತ್ರಧಾರಿಗಳು ಈ ಸಮಾಜದಲ್ಲಿನ ವಿವಿಧ ಘಟನೆ, ನಡವಳಿಕೆಗಳನ್ನು ಹತೋಟಿಗೆ ತರಲಾದೀತೆ? ಸಾಧ್ಯವೇ ಇಲ್ಲ. ಇದು ಸಾಧ್ಯವಾಗಬೇಕೆಂದರೆ ಈ ಸಮಾಜದ ಜನರೂ ಸಹ ಸೈನಿಕರಾಗಿ ಸಮಾಜವನ್ನು ರಕ್ಷಿಸಬೇಕೆಂದು ಹೇಳುತ್ತಾರೆ. ಅಂದರೆ ಜನಸ್ನೇಹಿಯಾಗಿ ನಾವಾದರೆ, ಈ ವ್ಯವಸ್ಥೆಯನ್ನು ಕಾಪಾಡಲಿಕ್ಕಾದರೂ ನಮ್ಮ ಸಮಾಜ ಪೊಲೀಸರೊಂದಿಗೆ ಸಹಕಾರ ಕೊಡುವುದು ಸೂಕ್ತವೇ ಆಗಿದೆ.

ಈ ಸಮಾಜದಲ್ಲಿ ಸಾರ್ವಜನಿಕರ ಸಹಕಾರವಿಲ್ಲದೆ ಕೇವಲ ಪೊಲೀಸರಿಂದ ಯಾವ ಸಾಧನೆಯೂ ನಡೆಯುವುದಿಲ್ಲ. ಆದುದರಿಂದ ಹುಬ್ಬಳ್ಳಿ-ಧಾರವಾಡ ಮಹಾನಗರದ ಜನತೆ ಈ ವ್ಯವಸ್ಥೆಯ ಬಗ್ಗೆ ಕೈ ಜೋಡಿಸುತ್ತಾರೆ ಎಂದು ನಾವು ನಂಬಿದ್ದೇವೆ ಎನ್ನುತ್ತಾರೆ ಡಿಸಿಪಿ ರವೀಶ್‌.

Share this article