ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಆಲಿಸಿದ ಕೃಷಿ ಸಚಿವ ಚಲುವರಾಯಸ್ವಾಮಿ ಅವರ ಉತ್ತರಕ್ಕೆ ತೃಪ್ತರಾಗದ ಧರಣಿ ನಿರತರು ಸಚಿವರು ತೆರಳುವ ವೇಳೆ ಕಾರಿಗೆ ಘೇರಾವ್ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಬ್ಯಾರಿಕೇಡ್ ಮೂಲಕ ಅವರನ್ನು ತಡೆದರು. ಇದರಿಂದ ತೀವ್ರ ಆಕ್ರೋಶಗೊಂಡು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಾಗ ಮುನ್ನೂರಕ್ಕೂ ಹೆಚ್ಚಿನ ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಬಸ್ಗಳಲ್ಲಿ ಮೈಸೂರು ರಸ್ತೆ ನಗರ ಸಶಸ್ತ್ರ ಮೀಸಲು ಪಡೆ ಮೈದಾನಕ್ಕೆ ಕರೆದೊಯ್ದರು. ಈ ಹಂತದಲ್ಲಿ ವಾಗ್ವಾದ, ತಳ್ಳಾಟ ನೂಕಾಟ ಉಂಟಾಯಿತು. ಸಂಜೆ ರೈತರನ್ನು ಬಿಡುಗಡೆ ಮಾಡಲಾಯಿತು.
ರೈತ ಮುಖಂಡ ಬೀರಪ್ಪ ದೇಶನೂರು ಮಾತನಾಡಿ, ಬರಗಾಲ ಹಿನ್ನೆಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕು, ಸಹಕಾರ ಸಂಘ ಸೇರಿ ಖಾಸಗಿ ಸಂಘಗಳಲ್ಲಿನ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ತಕ್ಷಣವೇ ಪ್ರತಿ ಎಕರೆಗೆ ₹ 25ಸಾವಿರ ಪರಿಹಾರ ಘೋಷಿಸಬೇಕು. ದನಕರುಗಳಿಗೆ ಮೇವು ಬ್ಯಾಂಕ್ ತೆರೆಯಬೇಕು. ಭತ್ತ, ರಾಗಿ, ಮೆಕ್ಕೆಜೋಳಕ್ಕೆ ಕ್ವಿಂಟಲ್ಗೆ ₹500 ಪ್ರೋತ್ಸಾಹಧನ ನೀಡಬೇಕು. ಹಗಲು 10 ಗಂಟೆ ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್ ಒದಗಿಸಬೇಕು ಎಂದು ಆಗ್ರಹಿಸಿದರು.ಸಚಿವರ ಎದುರು ಕಣ್ಣೀರು ಹಾಕಿದ ಮಹದೇವಮ್ಮ ಹುಯಿಲಗೋಳ, ರೈತರ ಆತ್ಮಹತ್ಯೆ ತಡೆಯಲು ಸರ್ಕಾರ ಕ್ರಮವಹಿಸಬೇಕು. ಕೇವಲ ಭರವಸೆ ನೀಡಿ ಕೈಕಟ್ಟಬಾರದು ಎಂದರು.
ಈ ಉತ್ತರದಿಂದ ಸಮಾಧಾನವಾಗದ ರೈತರು ಹಿಂದೆಯೂ ಇದೇ ರೀತಿ ಭರವಸೆ ನೀಡಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿಲ್ಲ ಎಂದರು. ಸಚಿವರು ಹೊರಟಾಗ ಅವರ ಕಾರಿಗೆ ಮುತ್ತಿಗೆ ಹಾಕಲು ಮುಂದಾದರು. ಪೊಲೀಸರು ಬ್ಯಾರಿಕೇಡ್ ಮೂಲಕ ತಡೆದಾಗ ವಾಗ್ವಾದ ನಡೆಯಿತು. ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ರೈತರನ್ನು ವಶಕ್ಕೆ ಪಡೆದರು.