ಕನ್ನಡಪ್ರಭ ವಾರ್ತೆ ದಾಬಸ್ಪೇಟೆ
ಹೌದು! ಕಳೆದ ಹತ್ತು ದಿನಗಳಿಂದ ಸೋಂಪುರ ಹೋಬಳಿಯ ವೀರಸಾಗರ ಗ್ರಾಮದ ಬಳಿಯ ದಟ್ಟಡವಿಯಲ್ಲಿ ಬೆಂಕಿ ಕಾಣಿಸುತ್ತಿದ್ದು, ಸಾವಿರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಭಸ್ಮವಾಗಿದೆ. ಅಪರೂಪದ ಸಸ್ಯ ರಾಶಿಯನ್ನು ಹೊಂದಿರುವ ಈ ಭಾಗದಲ್ಲಿ ಅರಣ್ಯ ನಾಶವಾಗುತ್ತಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೋಟ್ಯಂತರ ರು. ವ್ಯರ್ಥ:ಸರ್ಕಾರ ಪ್ರತಿ ವರ್ಷ ಅರಣ್ಯದಲ್ಲಿ ಸಸಿ ನೆಡಲು ಕೋಟ್ಯಂತರ ರು. ವ್ಯಯಿಸುತ್ತಿದೆ. ಆದರೆ ಈ ಬಾರಿ ನೆಟ್ಟ ಗಿಡಗಳು ಬಿಸಿಲಿನ ಝಳಕ್ಕೆ ನೀರಿಲ್ಲದೆ ಒಣಗಿ ಹೋಗಿವೆ. ಈ ನಡುವೆ ಈ ಬೆಂಕಿಯ ಹಾವಳಿ ಅರಣ್ಯನಾಶಕ್ಕೆ ಮತ್ತೊಂದು ರೀತಿಯ ಆತಂಕಕ್ಕೆ ಕಾರಣವಾಗಿದೆ.
ಬೇಸಿಗೆಯಲ್ಲಿ ಬೆಂಕಿ ಬೀಳದಂತೆ ತಡೆಯಲು ರಸ್ತೆ ಪಕ್ಕ ಹಾಗೂ ಹೊಸದಾಗಿ ಗಿಡ ನೆಟ್ಟಿರುವ ಬಳಿ ಬೆಂಕಿ ಅರಣ್ಯಕ್ಕೆ ತಾಗದಂತೆ ಫೈರ್ ಲೈನ್ ಮಾಡಲಾಗಿದೆ. ಆದರೆ ಇಲ್ಲಿ ಅಧಿಕಾರಿಗಳು ಓಡಾಡುವ ಜಾಗವನ್ನು ಹೊರತು ಪಡಿಸಿ ಇನ್ನುಳಿದ ಜಾಗದಲ್ಲಿ ಫೈರ್ ಲೈನ್ ಮಾಡದೇ ಇರುವುದೇ ಬೆಂಕಿ ಬೀಳಲು ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ದಟ್ಟ ಅರಣ್ಯದೊಳಗೆ ಕರಡಿ, ಚಿರತೆ ಸೇರಿದಂತೆ ಅನೇಕ ಕಾಡು ಪ್ರಾಣಿಗಳು ವಾಸಿಸುವ ಕಾರಣ ಯಾರೊಬ್ಬರೂ ಓಡಾಡುವುದಿಲ್ಲ, ಬೆಂಕಿ ಬಿದ್ದರೆ ರಸ್ತೆ ಪಕ್ಕದಿಂದ ಹೋಗಬೇಕು. ಆದರೆ ಅರಣ್ಯದ ಮಧ್ಯ ಭಾಗದಲ್ಲಿ ಬೆಂಕಿ ಹತ್ತಿಕೊಂಡು ಭಸ್ಮವಾಗಿರುವುದು ಅರಣ್ಯ ಇಲಾಖೆಯವರೇ ಹೊಸದಾಗಿ ಸಸಿಗಳನ್ನು ನೆಡಲು ಟೆಂಡರ್ ಕರೆಯಲು ಈ ರೀತಿ ಅರಣ್ಯ ನಾಶ ಮಾಡುತ್ತಾರೆಂದು ವೀರಸಾಗರ ಗ್ರಾಮಸ್ಥರು ಆರೋಪಿಸಿದ್ದಾರೆ.
‘ದಟ್ಟಡವಿಯಲ್ಲಿ ಅನೇಕ ಪ್ರಾಣಿ, ಪಕ್ಷಿಗಳಿವೆ. ಅರಣ್ಯಕ್ಕೆ ಬೆಂಕಿ ಬಿದ್ದಿರುವ ಕಾರಣ ಅವೆಲ್ಲವೂ ಕಾಡಂಚಿನ ಗ್ರಾಮಗಳತ್ತ ನುಗ್ಗಿ ಬರುತ್ತಿವೆ. ಅರಣ್ಯ ಇಲಾಖೆ ನೇಮಿಸಿರುವ ರೇಂಜರ್ ಸತೀಶ್ ಕಾಡಿನೊಳಗೆ ಒಮ್ಮೆಯೂ ಪ್ರವೇಶಿಸಿ ಪರಿಶೀಲನೆ ನಡೆಸುವುದಿಲ್ಲ. ವಾಚರ್ ಗಳು ಇದ್ದರೂ ಪ್ರಯೋಜನವಿಲ್ಲ. ಆದ್ದರಿಂದ ಇವರ ವಿರುದ್ಧ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಪರಿಸರ ಸಂರಕ್ಷಿಸಬೇಕು.’
-ಸುನಿಲ್, ಎಸಿಎಫ್