ಬಳ್ಳಾರಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಬಿಜೆಪಿಗೆ ಮರುಸೇರ್ಪಡೆಯಿಂದ ಬಳ್ಳಾರಿ ಭಾಗದಲ್ಲಿ ಕಾಂಗ್ರೆಸ್ಗೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಜಿಲ್ಲಾ ಸಚಿವ ಬಿ. ನಾಗೇಂದ್ರ ತಿಳಿಸಿದರು.
ಶೆಟ್ಟರ್ ಅವರನ್ನು ಪಕ್ಷ ಸರಿಯಾಗಿ ನಡೆಸಿಕೊಂಡಿತ್ತು. ಸೋತರೂ ಎಂಎಲ್ಸಿ ಮಾಡಿತ್ತು. ಡಿ.ಕೆ. ಶಿವಕುಮಾರ್ ಅವರ ಮುಂದೆ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದಿದ್ದ ಶೆಟ್ಟರ್ ಅವರು ದಿಢೀರ್ ಈ ನಿರ್ಧಾರ ಯಾಕೆ ತೆಗೆದುಕೊಂಡರೋ ಗೊತ್ತಿಲ್ಲ. ಬಿಜೆಪಿಯವರಿಗೆ ನಮ್ಮ ಪಕ್ಷದವರ ಮೇಲೆ ಯಾಕೆ ಪ್ರೀತಿಯೋ ತಿಳಿಯದು.
ಶೆಟ್ಟರ್ ಬಿಜೆಪಿ ಸೇರ್ಪಡೆಯನ್ನು ಮೋದಿ ಅಲೆ ಎನ್ನುತ್ತಿದ್ದಾರೆ. ಅದೇನೂ ಇಲ್ಲ. ಶೆಟ್ಟರ್ ಯಾವ ಒತ್ತಡಕ್ಕೆ ಅಲ್ಲಿಗೆ ಹೋಗಿದ್ದರೂ ಗೊತ್ತಾಗುತ್ತಿಲ್ಲ ಎಂದರು.₹30 ಕೋಟಿಯಲ್ಲಿ ಪದವಿ ಕಾಲೇಜು: ಸುಮಾರು ₹30 ಕೋಟಿ ವೆಚ್ಚದಲ್ಲಿ ನಗರದ ವಾಲ್ಮೀಕಿ ಭವನದ ಬಳಿ 3 ಎಕರೆ ಪ್ರದೇಶದಲ್ಲಿ ಸರ್ಕಾರಿ ಮಹಿಳಾ ಪದವಿ ಕಾಲೇಜು ಸ್ಥಾಪನೆ ಮಾಡಲಾಗುವುದು. ರಾಜ್ಯ ಸರ್ಕಾರ ₹25 ಕೋಟಿ ನೀಡಲಿದ್ದು, ಇನ್ನುಳಿದ ₹5 ಕೋಟಿಯನ್ನು ಜಿಲ್ಲಾ ಖನಿಜ ನಿಧಿಯಿಂದ ಪಡೆಯಲಾಗುವುದು ಎಂದರು.
ನಗರ ಶಾಸಕ ನಾರಾ ಭರತ್ ರೆಡ್ಡಿ, ಮೇಯರ್ ಬಿ. ಶ್ವೇತಾ, ಉಪಮೇಯರ್ ಜಾನಕಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸುದ್ದಿಗೋಷ್ಠಿಯಲ್ಲಿದ್ದರು.