ನನ್ನ ಕಾರನ್ನೇ ಕದ್ದವರು ನನ್ನನ್ನು ಬಿಟ್ಟಾರೆಯೇ ?
ಕನ್ನಡಪ್ರಭ ವಾರ್ತೆ ಕೊಪ್ಪಳ
ನನ್ನ ಕಾರು ಕಳ್ಳತನವಾಗಿದ್ದು, ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ಮನೆ ಮುಂದಿನ ಕಾರು ಕದ್ದು ಒಯ್ದವರು ನನ್ನ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಹೀಗಾಗಿ, ನನಗೆ ಜೀವ ಭಯವಿದೆ ಎಂದು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಹಲಿಗೇರಿ ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ಅಳಲು ತೊಡಿಕೊಂಡರು.
ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಮಾಡಿರುವ ಅವಿಶ್ವಾಸದ ವಿರುದ್ಧ ಈಗಾಗಲೇ ನಾನು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯವೂ ವಿಚಾರಣೆ ಕೈಗೆತ್ತಿಕೊಂಡಿದೆ. ನಾನು ನ್ಯಾಯಾಲಯದ ತೀರ್ಪಿಗೆ ಬದ್ಧವಾಗಿರುತ್ತೇನೆ. ನನ್ನ ಬಳಿ ಒಂದು ಕೀ ಇತ್ತು. ಅದು ಈಗಲೂ ನನ್ನ ಬಳಿಯೇ ಇದೆ. ಇನ್ನೊಂದು ಕೀ ಬೆಂಗಳೂರಿನ ಕಚೇರಿಯಲ್ಲಿತ್ತು. ಅದನ್ನು ತೆಗೆದುಕೊಂಡು ಬಂದು ಕಾರು ಒಯ್ಯದಿರಬಹುದು ಎಂಬ ಅನುಮಾನವಿದೆ ಎಂದರು.
ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷನಾಗಿ ಇದ್ದರೂ ನನ್ನ ವಿರುದ್ಧ ನಿಯಮ ಬಾಹಿರವಾಗಿ ಹೋಟೆಲ್ ನಲ್ಲಿ ಅವಿಶ್ವಾಸ ಮಂಡಿಸಲಾಗಿದೆ. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಸಭೆ ನಡೆಸಿ ಕಾನೂನು ಬಾಹಿರವಾಗಿ ಅವಿಶ್ವಾಸ ಮಂಡಿಸಿದ್ದಾರೆ. ಬೈಲಾ ಪ್ರಕಾರ ಅವಿಶ್ವಾಸ ಮಂಡಿಸಲು ಅವಕಾಶವೇ ಇಲ್ಲ. 3800 ಪ್ರತಿನಿಧಿಗಳಿಂದ ಆಯ್ಕೆಯಾಗಿರುವ ನನ್ನನ್ನು ಕೆಲವೇ ಕೆಲವರು ಸೇರಿ ಅವಿಶ್ವಾಸ ಮಂಡಿಸಿದ್ದಾರೆ. ಇದಕ್ಕಾಗಿ ನಾನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದೇನೆ. ಇದಲ್ಲದೆ ಕಚೇರಿಯಲ್ಲಿ ಭಯದ ವಾತಾವರಣ ಇದ್ದ ಕಾರಣ ನಾನು ಕಚೇರಿಗೆ ಹೋಗಿಲ್ಲ. ಈ ಕುರಿತು ಬೆಂಗಳೂರ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸಿದ್ದೇನೆ ಎಂದರು.
ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರಲ್ಲಿ ನಾನು ವಿನಂತಿ ಮಾಡಿಕೊಳ್ಳುತ್ತೇನೆ. ಸಂಘದ ಇತಿಹಾಸದಲ್ಲಿಯೇ ಇದು ಕೆಟ್ಟ ಬೆಳವಣಿಗೆ. ಇದರಿಂದ ಯಾರು ಸಹ ಆತಂಕಕ್ಕೆ ಒಳಗಾಗುವುದು ಬೇಡ. ಕೆಲವೇ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದರು.