ಅರಣ್ಯ ಸಂರಕ್ಷಣೆ ಮಾಡದಿದ್ದರೆ ಸಂಕಷ್ಟ

KannadaprabhaNewsNetwork | Published : Jul 8, 2024 12:33 AM

ಸಾರಾಂಶ

ಸಮಾಜದಲ್ಲಿರುವ ಪ್ರತಿಯೊಬ್ಬರು ತಾವು ನೆಟ್ಟಿರುವ ಗಿಡಗಳನ್ನು ಪೋಷಿಸುವ ಕಾರ್ಯ ಮಾಡಬೇಕಾಗಿದೆ

ಲಕ್ಷ್ಮೇಶ್ವರ: ನಮ್ಮ ಸುತ್ತಲಿನ ಪ್ರಕೃತಿ, ಪರಿಸರ ಸಂರಕ್ಷಣೆ ಮಾಡುವ ಜತೆಗೆ ಪರಿಸರ ಬೆಳೆಸಿ ಸಂರಕ್ಷಿಸುವ ಸ್ವಯಂ ಪ್ರೇರಿತ ಕಾರ್ಯವಾಗಬೇಕು. ಪರಿಸರ ರಕ್ಷಣೆ ಎಂಬುದು ಕೇವಲ ಒಂದು ದಿನದ ಘೋಷಣೆ-ಆಚರಣೆಯಾಗಬಾರದು ಎಂದು ಹರಿಹರದ ಮಹಾತಪಸ್ವಿ ಸೇವಾ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರವೀಣ ಅಚ್ಚಿ ಹೇಳಿದರು. ಪಟ್ಟಣದ ಭಾನುವಾರ ಜಿ.ಎಫ್. ಉಪನಾಳ ಟ್ರಸ್ಟ್‌ ನ ಶಾಂತಿಧಾಮ ವೃದ್ಧಾಶ್ರಮದಲ್ಲಿ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.

ಸಮಾಜದಲ್ಲಿರುವ ಪ್ರತಿಯೊಬ್ಬರು ತಾವು ನೆಟ್ಟಿರುವ ಗಿಡಗಳನ್ನು ಪೋಷಿಸುವ ಕಾರ್ಯ ಮಾಡಬೇಕಾಗಿದೆ. ಆಮ್ಲಜನಕ ನೀಡುವ ಗಿಡ ಮರಗಳಿಂದ ನಾವೆಲ್ಲರೂ ಉಸಿರಾಡುತ್ತಿದ್ದೇವೆ, ನಿರಂತರವಾಗಿ ಪರಿಸರದ ಮೇಲೆ ಅನಾಚಾರ ನಡೆಯುತ್ತಿದ್ದರೆ, ಮುಂದಿನ ದಿನಗಳಲ್ಲಿ ಗಾಳಿಯನ್ನು ಸಹ ನಾವು ಹಣಕ್ಕೆ ಕೊಳ್ಳಬೇಕಾಗುವಂತಹ ಪರಿಸ್ಥಿತಿ ನಿರ್ಮಾಣವಾಗುವ ದಿನಗಳು ದೂರವಿಲ್ಲ, ಅದಕ್ಕಾಗಿ ಎಲ್ಲರೂ ಗಿಡಮರ ಉಳಿಸಿ ಬೆಳೆಸುವ ಕಾರ್ಯ ಮಾಡುವ ನಿಟ್ಟಿನಲ್ಲಿ ಪ್ರತಿಷ್ಠಾನದ ಸಂಸ್ಥಾಪಕರಾಗಿರುವ ಪೂಜ್ಯ ಕವಿಗುರುರಾಜ ಗುರೂಜಿ ಎಲ್ಲೆಡೆ ಗಿಡಮರಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.

ಕೇಂದ್ರ ಕಚೇರಿಯ ನಿರ್ದೇಶಕಿ ಸಂಗೀತಾ ಧರ್ಮಾಯತ ಮಾತನಾಡಿ, ಪರಿಸರದಲ್ಲಿ ಗಿಡಮರಗಳ ಅವಶ್ಯಕತೆ ಎಷ್ಟಿದೆ ಎನ್ನುವುದು ಈ ವರ್ಷದ ಬಿಸಿಲಿನ ತಾಪಮಾನ ನೋಡಿದಾಗ ಅರಿವಾಗುತ್ತದೆ. ಒಬ್ಬಬ್ಬರು ಒಂದೊಂದು ಸಸಿ ನೆಟ್ಟು ಬೆಳೆಸಿದರೆ ನಮ್ಮ ಪರಿಸರ ಪರಿಶುದ್ಧವಾಗುವದರ ಜತೆಗೆ ಎಲ್ಲೆಡೆ ಹಸಿರುಮಯ ವಾತಾವರಣ ಕಂಡು ಬರಲಿದೆ ಎಂದು ಹೇಳಿದರು.

ಈ ಸಂದರ್ಭಲ್ಲಿ ವೃದ್ದಾಶ್ರಮ ಟ್ರಸ್ಟ್ ಅಧ್ಯಕ್ಷ ಪ್ರಕಾಶ ಉಪನಾಳ, ಉಪಾಧ್ಯಕ್ಷ ಡಿ.ಎಂ. ಪೂಜಾರ, ಮಂಜುಳಾ ಮುಳಗುಂದ, ಲಾವಣ್ಯ ಬಿಂಕದಕಟ್ಟಿ, ವಿಜಯ ಹೊಳ್ಳಿಯವರಮಠ, ವೀರಭದ್ರಗೌಡ್ರ ಪಾಟೀಲ, ಚಂದ್ರು ಚಾವಡಿ, ರಮೇಶ ಉಪನಾಳ, ಚನ್ನಪ್ಪ ಧರ್ಮಾಯತ ಇದ್ದರು.

Share this article