ಹಾವೇರಿ: ಶಿಕ್ಷಕನ ಬೋಧನೆಯಿಂದ ಕಲಿತ ಮಕ್ಕಳು ಜೀವನದಲ್ಲಿ ಯಶಸ್ಸು ಕಂಡಲ್ಲಿ ಅದೇ ಶಿಕ್ಷಕನಿಗೆ ಸಲ್ಲುವ ಗೌರವ ಎಂದು ಡಿಡಿಪಿಐ ಸುರೇಶ ಹುಗ್ಗಿ ಹೇಳಿದರು.ನಗರದ ವೈಭವಲಕ್ಷ್ಮೀ ಪಾರ್ಕ್ ಹತ್ತಿರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವಯೋನಿವೃತ್ತಿ ಹೊಂದಿದ ಬಸವರಾಜ ಕಟ್ಟಿಮನಿ ಅವರಿಗೆ ಸನ್ಮಾನ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಚಟುವಟಿಕೆಯಿಂದ ಕೂಡಿದ್ದರೆ ಅವರ ಆಯಸ್ಸುಗಟ್ಟಿಯಾಗಿರುತ್ತದೆ. ಪ್ರತಿಯೊಬ್ಬ ಶಿಕ್ಷಕರು ಮಕ್ಕಳೊಂದಿಗೆ ಬೆರೆತು ತಮಗೆ ನೀಡಲಾದ ಜವಾಬ್ದಾರಿಗಳನ್ನು ನಿಷ್ಠೆಯಿಂದ ಮಾಡಬೇಕು. ಮಕ್ಕಳನ್ನು ಪ್ರಜ್ಞಾವಂತರನ್ನಾಗಿ ಮಾಡಿದಲ್ಲಿ ಶಿಕ್ಷಕ ವೃತ್ತಿಯ ಸೇವೆ ಸಾರ್ಥಕವಾಗುತ್ತದೆ ಎಂದರು.ವಯೋ ನಿವೃತ್ತಿ ಹೊಂದಿದ ಶಿಕ್ಷಕ ಬಸವರಾಜ ಕಟ್ಟಿಮನಿ ಮಾತನಾಡಿ, ಜೀವನದುದ್ದಕ್ಕೂ ಉತ್ತಮ ಸೇವೆ ಸಲ್ಲಿಸಿದರೆ ಕೊನೆಯಲ್ಲಿ ಉತ್ತಮವಾದ ಗೌರವ ಪಡೆಯಲು ಸಾಧ್ಯವಿದೆ. ಅವಕಾಶವಿದ್ದಾಗ ನಾವು ಉತ್ತಮ ಕೆಲಸಗಳನ್ನು ಮಾಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ.ಬಿ.ಎಂ. ಬೇವಿನಮರದ ಮಾತನಾಡಿ, ಉತ್ತಮ ಸಿಬ್ಬಂದಿಯಿದ್ದಲ್ಲಿ ಉತ್ತಮ ಶಾಲೆಯ ವಾತಾವರಣ ನಿರ್ಮಾಣ ಮಾಡಲು ಸಾಧ್ಯ. ಮಕ್ಕಳ ಮನಸ್ಸುಗಳನ್ನು ಬೆಳೆಸುವಲ್ಲಿ ಶಿಕ್ಷಕ, ಪಾಲಕ ಹಾಗೂ ಸಮುದಾಯದ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದರು.ಇದೇ ಸಂದರ್ಭದಲ್ಲಿ ಕನ್ನಡದಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆದ ಇಬ್ಬರು ವಿದ್ಯಾರ್ಥಿನಿಯರಿಗೆ ತಲಾ ೫೦೦೦ರೂ.,ಗಳನ್ನು ಹಾಗೂ ಉನ್ನತ ಶ್ರೇಣಿ ಪಡೆದ ೧೧ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ನೀಡಿದರು. ಬಿಆರ್ಸಿ ಎಂ.ಎಸ್.ಗುಂಡಪಲ್ಲಿ, ಈರಪ್ಪ ಲಮಾಣಿ, ಎಸ್.ಸಿ. ಕಲ್ಮನಿ, ಬಿ.ಎಚ್. ಕಮಲಾ, ಎ.ಸಿ. ಸಂಗೊಳ್ಳಿ, ಎಸ್ಡಿಎಂಸಿ ಅಲ್ಲಾಭಕ್ಷ ತಿಮ್ಮಾಪುರ, ಅಶೋಕ ದುಮ್ಮಾಳ ಮಾತನಾಡಿದರು.ಶಿಕ್ಷಕರಾದ ಎಸ್.ಎಸ್. ನಡುವಿನಮಠ ಸ್ವಾಗತಿಸಿ, ನಿರ್ವಹಿಸಿದರು. ವೇದಿಕೆಯಲ್ಲಿ ವೈದ್ಯರಾದ ಡಾ.ರವಿ ಮಲ್ಲಾಡದ ಮತ್ತು ಡಾ. ಗಿರೀಶ ಮಲ್ಲಾಡದ ದಂಪತಿಗಳು, ಎಸ್ಡಿಎಂಸಿ ಅಧ್ಯಕ್ಷ ಖಲಂದರ್ ಪೀರಸಾಬನವರ, ನೌಕರರ ಸಂಘದ ಜೆ.ಆರ್. ಯಲವದಹಳ್ಳಿ, ಶಿಕ್ಷಕರಾದ ಐ.ಎಂ. ಹಂಚಿನಮನಿ, ಬಿ.ಎಚ್. ಬಾಗಬಾನ, ರಹಮಾನ್ಖಾನ್, ಫರ್ಜಾನಾ ಶಬನಂ, ಸೀಮಾಕೌಸರ್ ಮೇಡ್ಲೇರಿ, ಪಿ.ಜಿ.ಬಿರಾದಾರ, ಸತ್ಯಪ್ರಿಯಾ ಅರ್ಕಸಾಲಿ, ನಿಂಗಪ್ಪ ಮಾಳಗಿ, ಸರಸ್ವತಿ ದೊಡ್ಡಮನಿ ಇದ್ದರು.