ಪರಿಸರದ ವಿರುದ್ಧವಾಗಿ ನಡೆದರೆ ಬದುಕು ಸಂಕಷ್ಟ: ಅಭಿನವ ಚನ್ನಬಸವ ಶ್ರೀ

KannadaprabhaNewsNetwork | Published : Jul 1, 2024 1:50 AM

ಸಾರಾಂಶ

ಸಾಗರ ತಾಲೂಕಿನ ಚಿಲುಮೆಮಠ ಬ್ರಹ್ಮನ ಕೆರೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸಾಗರ

ಹೆಚ್ಚು ಬೆಳೆ ಬೆಳೆಯಬೇಕು ಎನ್ನುವ ಧಾವಂತದಲ್ಲಿ ಭೂಮಿಗೆ ವಿಷಕಾರಿ ರಾಸಾಯನಿಕ ಉಣಿಸುವ ಮನುಷ್ಯನ ಪ್ರವೃತ್ತಿ ಆತಂಕಕಾರಿ ಬೆಳವಣಿಗೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

ತಾಲೂಕಿನ ಓತಗೋಡು ಗ್ರಾಮದಲ್ಲಿ ಸ್ವಾನ್ ಎಂಡ್ ಮ್ಯಾನ್ ಸಂಸ್ಥೆ ಯೇಸುಪ್ರಕಾಶ್ ಸ್ಮರಣಾರ್ಥ ಪುನಶ್ಚೇತನಗೊಳಿಸಿರುವ ಚಿಲುಮೆಮಠ ಬ್ರಹ್ಮನ ಕೆರೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀ, ಭೂಮಿಗೆ ವಿಷಕಾರಿ ರಾಸಾಯನಿಕ ಬಳಕೆ ಮಾಡುತ್ತಿರುವುದರಿಂದ ನಾವು ತಿನ್ನುವ ಆಹಾರವೂ ವಿಷಯಕಾರಿಯಗುತ್ತಿದೆ. ಪರಿಸರದ ವಿರುದ್ಧವಾಗಿ ನಡೆದರೆ ಮನುಷ್ಯನ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ. ಜಲಮೂಲಗಳ ರಕ್ಷಣೆಗೆ ನಾವು ಆಸಕ್ತಿ ತೋರಿಸದೆ ಇರುವ ಕಾರಣ ಮಲೆನಾಡಿನಲ್ಲಿ ನೀರಿನ ಸಮಸ್ಯೆ ಎದುರಿಸುವಂತೆ ಆಗಿದೆ. ಪರಿಸರವನ್ನು ನಾವು ರಕ್ಷಣೆ ಮಾಡಿದರೆ ಪರಿಸರ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದರು.

ಕಳೆದ ಕೆಲವು ವರ್ಷಗಳಿಂದ ಸಾಗರ, ಹೊಸನಗರ ಭಾಗದಲ್ಲಿ ಸ್ವಾನ್ ಎಂಡ್ ಮ್ಯಾನ್ ಹಾಗೂ ಸಾರಾ ಸಂಸ್ಥೆಯು ಸರ್ಕಾರದ ಸಹಾಯವಿಲ್ಲದೆ ಕೆರೆಗಳನ್ನು ಪುನಶ್ಚೇತನಗೊಳಿಸಲು ಮುಂದಾಗಿರುವುದು ಅನುಕರಣೀಯ ಕೆಲಸವಾಗಿದೆ. ಇಂತಹ ಕಾರ್ಯಕ್ಕೆ ಮುಂದಾಗುವ ಸಂಘ ಸಂಸ್ಥೆಗಳಿಗೆ ನೆರವು ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ರಂಗ ಕಲಾವಿದರಾಗಿ, ಪರಿಸರದ ಬಗ್ಗೆ ಅಪಾರ ಆಸಕ್ತಿ ಹಾಗೂ ಕೆರೆ ಪುನಶ್ಚೇತನಕ್ಕೆ ತಮ್ಮದೇ ಕೊಡುಗೆ ನೀಡಿದ್ದ ಯೇಸುಪ್ರಕಾಶ್ ಅಕಾಲಿಕವಾಗಿ ಮೃತಪಟ್ಟಿದ್ದಾರೆ. ಅವರ ಹೆಸರಿನಲ್ಲಿ ಓತಗೋಡು ಗ್ರಾಮದ ಬ್ರಹ್ಮನ ಕೆರೆ ಪುನಶ್ಚೇತನಗೊಳಿಸಿರುವುದು ಶ್ಲಾಘನೀಯ ಸಂಗತಿ ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ್ ಕೆಂಚಪ್ಪನವರ್, ಪ್ರಮುಖರಾದ ಅಖಿಲೇಶ್ ಚಿಪ್ಳಿ, ಕೃಷ್ಣಮೂರ್ತಿ ಬಿಳಿಗಲ್ಲೂರು, ನಂದಾ ಗೊಜನೂರು, ಅಕ್ಷರ ಎಲ್.ವಿ., ಮಧುನಿಷಾ, ಆರ್.ವಿ.ಮಂಜುನಾಥ್, ನಟರಾಜ್, ಧನುಷ್ ಇನ್ನಿತರರು ಇದ್ದರು.

Share this article