ನರಗುಂದ: 5 ವರ್ಷದೊಳಗಿನ ಪ್ರತಿ ಮಗುವಿಗೆ ಮಾ. 6ರವರೆಗೆ ಪೋಲಿಯೋ ಅಭಿಯಾನ ಜರುಗಲಿದೆ. ಮಗುವಿಗೆ ಎರಡು ಪೋಲಿಯೋ ಹನಿ ಹಾಕಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳಗೊಂಡು ಸದೃಢಗೊಳ್ಳುತ್ತದೆ. ಜಗತ್ತಿನಲ್ಲಿ ಭಾರತ ಪೋಲಿಯೋ ಮುಕ್ತ ದೇಶವಾಗಿದ್ದು, ನಮಗೆಲ್ಲ ಹೆಮ್ಮೆ ತಂದಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ರೇಣುಕಾ ಕೊರವನವರ ಹೇಳಿದರು.
ತಾಲೂಕಿನಲ್ಲಿ 10,218 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಲಸಿಕೆ ಹಾಕಲು 79 ತಂಡಗಳು ಕಾರ್ಯನಿರ್ವಹಿಸುತ್ತಿವೆ. ಜನರು ನಿರ್ಲಕ್ಷ್ಯ ಮಾಡದೇ ಸಹಕಾರ ಕೊಟ್ಟು ತಮ್ಮ ಮನೆಯಲ್ಲಿನ ಮಕ್ಕಳಿಗೆ ಲಸಿಕೆ ಹಾಕಿಸಬೇಕು. 1995ರಲ್ಲಿ ಪೋಲಿಯೋ ಪ್ರಕರಣಗಳು ಕಂಡುಬರುತ್ತಿದ್ದ ಕಾರಣ ಪಲ್ಸ್ ಪೋಲಿಯೋ ಅಭಿಯಾನ ತೀವ್ರಗೊಳಿಸಲಾಯಿತು. 2011ರಲ್ಲಿ ದೇಶದೊಳಗೆ ಪೋಲಿಯೋ ಪ್ರಕರಣಗಳು ಕಂಡುಬರದ ಕಾರಣ 2014ರಲ್ಲಿಯೇ ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿ ಘೋಷಣೆ ಮಾಡಲಾಗಿದೆ. ಆದರೂ ಜನತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳಿದರು.
ನಮ್ಮ ದೇಶವು ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರೂ ಕೂಡ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಅಪ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಅರಬ್ ದೇಶಗಳಲ್ಲಿ ಪೋಲಿಯೋ ಪ್ರಕರಣಗಳು ಕಂಡು ಬರುತ್ತಿದ್ದು, ಅಲ್ಲಿಂದ ಇಲ್ಲಿಗೆ ಪ್ರಯಾಣಿಕರು ಪ್ರಯಾಣ ಮಾಡುವುದರಿಂದ ಈ ಪೋಲಿಯೋ ಪ್ರಕರಣಗಳು ಬರುವ ಸಾಧ್ಯತೆ ಇದೆ. ಈ ಕಾರಣದಿಂದ ಪಲ್ಸ್ ಪೋಲಿಯೋ ಅಭಿಯಾನವನ್ನು ಮುಂದುವರೆಸಲಾಗುತ್ತಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.ಚಿಕ್ಕಮಕ್ಕಳ ತಜ್ಞ ಡಾ. ಪ್ರವೀಣ ಮೇಟಿ ಮಾತನಾಡಿ, ಈ ಹಿಂದೆ ಪೋಲಿಯೋ ರೋಗಕ್ಕೆ ಬಹಳ ಜನ ಅಂಗವಿಕಲರಾಗಿದ್ದಾರೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪ್ರತಿ ಮಗುವಿಗೂ ಪಾಲಕರು ಪೋಲಿಯೋ ಹನಿ ಹಾಕಿಸಬೇಕು. ಪ್ರತಿ ಮಗು ಸದೃಢವಾಗಿದ್ದರೆ, ಭಾರತ ಸದೃಢವಾದಂತೆ, ಪ್ರತಿ ಮಗುವಿನ ಆರೋಗ್ಯದ ಹಿಂದೆ ಭಾರತದ ಶಕ್ತಿ ಅಡಗಿದೆ ಎಂದು ಹೇಳಿದರು.ಪುರಸಭೆ ಸದಸ್ಯೆ ರಾಜೇಶ್ವರಿ ಹವಾಲ್ದಾರ, ಶಾಂತವ್ವ ವಡ್ಡಿಗೇರಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ .ವ್ಹಿ. ಕೊಣ್ಣೂರ, ಡಾ. ವಿನೋದ ಜಾಧವ, ಪುಷ್ಪಾ ಪಾಟೀಲ, ಶಿವಬಸಪ್ಪ ನಾಶಿ, ಡಾ.ಪಿ.ಕೆ. ಮೇಟಿ, ರಾಜು ಡಂಬಳ, ಸಿ .ಎಫ್ .ಕುಂಬಾರ, ಎಂ.ಪಿ. ಶಿಗ್ಗಾಂವಕರ, ಎಸ್. ಬಿ. ಹನ್ನೂರ, ರೇಖಾ ಹಿರೆಹೊಳಿ, ಎಸ್.ಬಿ. ಕುರಹಟ್ಟಿ, ಎನ್. ಎಲ್ ಮಡಿವಾಳಕರ, ಬಸವರಾಜ ಕೌಜಗೇರಿ, ನಾಗರಾಜ ಗಾಣಗೇರ, ಭಾರತಿ ಮಾರಿಹಾಳ, ಮಕ್ತುಮ ಮಸೂತಿಮನಿ, ಭರತ ಇಟಿಗಟ್ಟಿ, ಬಿ ಕೆ. ಪಾಟೀಲ, ಪ್ರವೀಣ ಕುಲಕರ್ಣಿ, ಮಾಂತೇಶ ಪಲ್ಲೇದ, ಹನಮವ್ವ ಹಳೇಮನಿ, ಓಣಿಯ ಹಿರಿಯರು, ತಾಯಂದಿರು, ಸಾರ್ವಜನಿಕರು ಮತ್ತು ಮಕ್ಕಳು ಇದ್ದರು.