ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರೈತರು, ವರ್ತಕರು, ಎಪಿಎಂಸಿ ಅವಲಂಬಿತರು ಎಲ್ಲರ ಸಲಹೆಗಳಿಗೆ ಮಾನ್ಯತೆ ನೀಡಿ, ಸಮನ್ವಯತೆಯಿಂದ ಜನಪರ, ರೈತಪರವಾದ ಎಪಿಎಂಸಿ ವಿಧೇಯಕ- 2023 ಅನ್ನು ಜಾರಿಗೆ ತರಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ್ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ದಿ) (ತಿದ್ದುಪಡಿ) ವಿಧೇಯಕ-2023 ಅನ್ನು ಪರಿಶೀಲಿಸಿ ಸದನಕ್ಕೆ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ಪರಿಶೀಲನಾ ಸಮಿತಿ ನಡೆಸಿದ ರೈತರು, ವರ್ತಕರು, ದಲಾಲರು ಮತ್ತು ಹಮಾಲರ ಪ್ರತಿನಿಧಿಗಳಿಂದ ಸಲಹೆಯನ್ನು ಸ್ವೀಕರಿಸುವ ಸಭೆಯಲ್ಲಿ ಅವರು ಮಾತನಾಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ವಿಧೇಯಕ- 2023ಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ. ಆದರೆ, ವಿಧಾನ ಪರಿಷತ್ತಿನಲ್ಲಿ ರೈತರು, ವರ್ತಕರು ಸೇರಿದಂತೆ ಇದಕ್ಕೆ ಸಂಬಂಧಿಸಿದವರಿಂದ ಸಲಹೆಗಳನ್ನು ಪಡೆಯುವಂತೆ ಸೂಚಿಸಿರುವ ಹಿನ್ನಲೆ ಸಭೆಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಕೋಲಾರದಲ್ಲಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ರೈತ ಸಂಘದವರು, ವರ್ತಕರು, ಅಕ್ಕಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು, ಎಪಿಎಂಸಿ ಮಾಜಿ ಪದಾಧಿಕಾರಿಗಳು, ಎಪಿಎಂಸಿ ಅವಲಂಬಿತ ದಲಾಲಿಗಳ ಸಂಘ, ಪೇಟೆ ಕಾರ್ಯಕರ್ತರು, ಹಮಾಲಿ, ತೂಕದವರ ಸಂಘಗಳ ಪದಾಧಿಕಾರಿಗಳ ಸಲಹೆಗಳನ್ನು ಸ್ವೀಕರಿಸಲಾಗಿದೆ. ಅವರ ಸಲಹೆಗಳಿಗೆ ಮಾನ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಎಪಿಎಂಸಿಯಲ್ಲಿ 16 ಸಾವಿರ ಕೋಟಿ ಆಸ್ತಿ ಇದ್ದು 8 ಸಾವಿರ ಎಕರೆಯಷ್ಟು ಜಮೀನು ಇದೆ. ಇದನ್ನು ಉಳಿಸಿಕೊಂಡು ಪುನರ್ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದು. ಸಭೆಯಲ್ಲಿ ಕೇಳಿಬಂದ ಎಪಿಎಂಸಿ ಅಧಿಕಾರ ವಿಕೇಂದ್ರೀಕರಣ, ಸೆಸ್ ಕಡಿತಗೊಳಿಸುವುದು, ಆಸ್ತಿ ತೆರಿಗೆ ಇತರೆ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಹೊಸ ಕಾಯ್ದೆ ಜಾರಿಗೆ ತರಲಾಗುವುದು ಎಂದರು.ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿ, ಪ್ರಸ್ತುತ ಎಪಿಎಂಸಿ ಕಾಯ್ದೆಯ ಪ್ರಕಾರ ರೈತ ಎಲ್ಲಿ ಬೇಕಾದರೂ ತನ್ನ ಉತ್ಪನ್ನ ಮಾರಾಟ ಮಾಡಬಹುದು. ಈ ನೀತಿಯಿಂದ ಎಪಿಎಂಸಿ ವಿನಾಶದ ಅಂಚಿಗೆ ಬರುವುದು. ಮಲ್ಟಿ ನ್ಯಾಷನಲ್ ಕಂಪೆನಿಗಳು ನೇರವಾಗಿ ರೈತರಿಂದ ಖರೀದಿಗೆ ಮುಂದಾದರೆ ಅವರು ಹೇಳುವ ತಳಿ, ಗುಣಮಟ್ಟ, ಮಾನದಂಡಗಳನ್ನು ಪಾಲಿಸಬೇಕು. ಒಂದುವೇಳೆ ಅದರಲ್ಲಿ ಸೋತರೆ ತಿರಸ್ಕರಿಸಲಾಗುತ್ತದೆ. ಹೊಸ ತಳಿಗಳಿಂದ ಹಳೇ ತಳಿ ನಾಶವಾಗುತ್ತದೆ. ರೈತರು-ಗ್ರಾಹಕರು ಕಾರ್ಪೋರೇಟ್ ಹಿಡಿತಕ್ಕೆ ಒಳಗಾಗುತ್ತಾರೆ. ಎಪಿಎಂಸಿ ಆದಾಯ ನಿಲ್ಲುತ್ತದೆ. ಇದರಿಂದ ಅವಲಂಬಿತ ದಲಾಲರು, ಹಮಾಲರು, ಲಗೇಜ್ ವಾಹನ ಇವರಿಗೆ ಅನ್ಯಾಯ ಆಗುತ್ತದೆ. ಆದ್ದರಿಂದ ಪ್ರಸ್ತುತದ ಕಾಯ್ದೆ ರದ್ದುಪಡಿಸಬೇಕು. ಟೆಂಡರ್ ವ್ಯವಸ್ಥೆ, ಆನ್ಲೈನ್ ಟ್ರೇಡಿಂಗ್ ವ್ಯವಸ್ಥೆಯೊಂದಿಗೆ ಹಳೆ ಕಾಯ್ದೆಗೆ ಅಗತ್ಯ ಸುಧಾರಣೆಗಳನ್ನು ತಂದು ಜಾರಿಗೆ ತರಬೇಕೆಂದು ಮನವಿ ಮಾಡಿದರು.
ಕೃಷಿಕ ಎಚ್.ಎಂ. ರವಿಕುಮಾರ್ ಮಾತನಾಡಿ, ಎಪಿಎಂಸಿ ಯಾವಾಗಲೂ ಅಸ್ತಿತ್ವದಲ್ಲಿ ಇರುವಂತೆ ಕಾನೂನು, ಅವೈಜ್ಞಾನಿಕ ಆಸ್ತಿ ತೆರಿಗೆಗೆ ಕಡಿವಾಣ, ಆಸ್ತಿ ಹಂಚಿಕೆ ನಿಯಮ ಮತ್ತು ಪ್ರಕ್ರಿಯೆ ಸರಳಗೊಳಿಸಬೇಕು ಹಾಗೂ ನಿಯಮ 46 ರನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.ಮಾಜಿ ಎಪಿಎಂಸಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಎಪಿಎಂಸಿಯಿಂದಲೇ ಜನರಿಗೆ ಅಡಕೆ ದರ ಇತರೆ ದರ ಗೊತ್ತಾಗುತ್ತಿದೆ. ಎಪಿಎಂಸಿ ಉಳಿಸುವಂತಹ ಬದಲಾವಣೆ ತಂದು ಕಾಯ್ದೆ ಜಾರಿ ಮಾಡಬೇಕು ಎಂದರು.
ದಲ್ಲಾಲರ ಸಂಘದ ಅಧ್ಯಕ್ಷ ಮಾತನಾಡಿ, ಎಪಿಎಂಸಿಯಲ್ಲಿ ಕನಿಷ್ಠ ಆಸ್ತಿ ತೆರಿಗೆ ಹಾಕಬೇಕು. ಆಸ್ತಿ ವರ್ಗೀಕರಣ ಆಗಬೇಕು ಎಂದು ಒತ್ತಾಯಿಸಿದರು.ಹಸಿರು ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ರೈತರ ವಿರೋಧಿ ಕಾಯ್ದೆಯಿಂದಾಗಿ ರೈತರ ತ್ಯಾಗ, ಬಲಿದಾನವೇ ಆಗಿದೆ. ಬಹಳಷ್ಟು ರಾಜ್ಯದಲ್ಲಿ ಕಾಯ್ದೆ ರದ್ದಾಗಿದ್ದು, ಇಲ್ಲಿಯೂ ರದ್ದುಪಡಿಸಿ ಹೊಸ ಕಾಯ್ದೆ ತರುವಂತೆ ಮನವಿ ಮಾಡಿದರು.
ಸಮಿತಿ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, 2019- 20ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಕಾಯ್ದೆಯಿಂದ ಸೆಸ್ ₹600 ಕೋಟಿ ಸಂಗ್ರಹವಾಗಿತ್ತು. ರೈತರಿಗೆ ಹೆಚ್ಚು ಬೆಲೆ ಸಿಗಲಿ ಎಂಬ ಉದ್ದೇಶದಿಂದ ಕಾಯ್ದೆ ತರಲಾಗಿತ್ತು. ಅಡಕೆ ಸೆಸ್ 0.6 ರಿಂದ 0.1ಕ್ಕೆ ಇಳಿಸಬೇಕೆಂದು ಒತ್ತಾಯಿಸಲಾಗಿದೆ. ನಿಯಂತ್ರಣ ಮಂಡಳಿ ಸ್ಥಾಪನೆ, ಇತರೆ ನಿಯಮ ಸರಳೀಕರಣ ಪ್ರಯತ್ನ ಆಗುತ್ತಿದ್ದು, ಹಲವು ಸುಧಾರಣೆಗಳೊಂದಿಗೆ ಹೊಸ ಕಾಯ್ದೆ ತರಬೇಕೆಂದು ಕೋರಿದರು.ಸಭೆಯಲ್ಲಿ ಸಮಿತಿ ಸದಸ್ಯರಾದ ಅನಿಲ್ಕುಮಾರ್, ಕೆ.ಎ.ತಿಪ್ಪೇಸ್ವಾಮಿ ಹೇಮಲತಾ ನಾಯಕ್, ಎಪಿಎಂಸಿ ನಿರ್ದೇಶಕ ಗಂಗಾಧರಸ್ವಾಮಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಬಿ.ಪಿ.ರಾಮಚಂದ್ರ, ರೈತ ಸಂಘದ ಕಾರ್ಯಾಧ್ಯಕ್ಷ ಪಿ.ಡಿ.ಮಂಜಪ್ಪ, ಜಿಲ್ಲಾ ಅಕ್ಕಿ ಗಿರಣಿ ಸಂಘದ ಉಪಾಧ್ಯಕ್ಷ ಕೆ.ಶೈಲೇಂದ್ರ, ರಾಜ್ಯ ಮೆಕ್ಕೆಜೋಳ ವರ್ತಕರ ಕಾರ್ಯದರ್ಶಿ ಕೆ.ಜಾವೆದ್ ಮತ್ತಿತರರು ಇದ್ದರು.
- - - ಬಾಕ್ಸ್ ತನಗೆ ಬೇಕಾದವರಿಗೆ ಉತ್ಪನ್ನ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಪ್ರಸ್ತುತ ಕಾಯ್ದೆ ನೀಡಿದೆ. ಜಿಲ್ಲೆಯ ಪ್ರಮುಖ ಬೆಳೆ ಅಡಕೆ. 1 ಕ್ವಿಂಟಲ್ ಅಡಕೆ ಎಪಿಎಂಸಿಗೆ ತರಲು 1500 ಖರ್ಚು ಬರುತ್ತದೆ. ಆದ್ದರಿಂದ ರೈತರು ಎಪಿಎಂಸಿ ಅಥವಾ ಮಲ್ಟಿ ನ್ಯಾಷನಲ್ ಯಾವುದಕ್ಕಾದರೂ ಮಾರಾಟ ಮಾಡಿ ಲಾಭ ಗಳಿಸಬಹುದು ಎಂಬ ಉದ್ದೇಶದಿಂದ ಜಾರಿಗೆ ತರಲಾಗಿತ್ತು- ಆರಗ ಜ್ಞಾನೇಂದ್ರ, ಶಾಸಕ, ತೀರ್ಥಹಳ್ಳಿ ಕ್ಷೇತ್ರ
- - - ಹಳೆ ಕಾಯ್ದೆಗೆ ಕೆಲ ಸುಧಾರಣೆ ತಂದು ಪರಿಣಾಮಕಾರಿಯಾಗಿ ಜಾರಿಗೊಳಿಸಿದರೆ ಎಪಿಎಂಸಿ ವ್ಯವಸ್ಥೆ ಉಳಿಯುತ್ತದೆ. ಆನ್ಲೈನ್ ಟ್ರೇಡಿಂಗ್ನಲ್ಲಿ ಸಹಕಾರಿಗಳು ಶೇ.100 ತೆರಿಗೆ ಕಟ್ಟುತ್ತಾರೆ. ಗುಣಮಟ್ಟದ ಅಡಿಕೆಗೆ ಜಿಲ್ಲೆ ನಂ.1 ಇದ್ದು ಸ್ಕ್ವಾಡ್ಗಳನ್ನು ಹಾಕಿ ಗುಣಮಟ್ಟ ಇನ್ನೂ ಕಾಪಾಡಬಹುದು. ರೈತರಿಗೆ ಅನುಕೂಲವಾಗುವ ಹಳೇ ಕಾಯ್ದೆ ಜಾರಿಗೊಳಿಸಬೇಕು- ಆರ್.ಎಂ.ಮಂಜುನಾಥ ಗೌಡ, ಅಧ್ಯಕ್ಷ, ಡಿಸಿಸಿ ಬ್ಯಾಂಕ್
- - - -22ಎಸ್ಎಂಜಿಕೆಪಿ04:ಶಿವಮೊಗ್ಗ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ರೈತರು, ವರ್ತಕರು, ದಲಾಲರು ಮತ್ತು ಹಮಾಲರ ಪ್ರತಿನಿಧಿಗಳಿಂದ ಸಲಹೆ ಸ್ವೀಕರಿಸುವ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ್ ಮಾತನಾಡಿದರು.