ಕೆಜಿಎಫ್ ನ ಸೆಂಟ್ ತೆರೇಸಾ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ । ಜಿಲ್ಲಾ ಶಿಕ್ಷಣಾಧಿಕಾರಿ ಭಾಗ್ಯವತಮ್ಮ ಸಲಹೆ
ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆಯಲು ನಿರಂತರ ಅಧ್ಯಯನದೊಂದಿಗೆ ಬರವಣಿಗೆ ಉತ್ತಮ ಪಡಿಸಿಕೊಳ್ಳಿ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಭಾಗ್ಯವತಮ್ಮ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲೆಯ ಕೆಜಿಎಫ್ ನಗರದ ಸೆಂಟ್ ತೆರೇಸಾ ಶಾಲೆಯಲ್ಲಿ ೪೦೦ ಜನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೆಜಿಎಫ್ ತಾಲೂಕಿನ ಶಾಲಾ ಶಿಕ್ಷಣ ಇಲಾಖೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಈ ಬಾರಿ ಕೆಜಿಎಫ್ ತಾಲೂಕು ಫಲಿತಾಂಶ ಪಟ್ಟಿಯಲ್ಲಿ ಪ್ರಥಮ ಸ್ಥಾನ ಬರುವಂತಾಗಲು ಶಿಕ್ಷಕರು ಬದ್ದತೆಯಿಂದ ಕೆಲಸ ಮಾಡಿ ಎಂದ ಅವರು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕುರಿತು ಹೆಚ್ಚಿನ ನಿಗಾವಹಿಸಲು ತಾಕೀತು ಮಾಡಿದರು.
ಜಿಲ್ಲಾ ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಕೃಷ್ಣಪ್ಪ ಮಾತನಾಡಿ, ಇಲಾಖೆ ನೀಡಿರುವ ಸಂಪನ್ಮೂಲ ಪುಸ್ತಕಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ, ಅಭ್ಯಾಸ ಹಾಳೆ ಹಾಗೂ ೬ ಸೆಟ್ ಮಾದರಿ ಪ್ರಶ್ನೆಪತ್ರಿಕೆಗಳನ್ನು ಶೀಘ್ರವೇ ಇಲಾಖೆ ಒದಗಿಸಲಿದ್ದು, ಇದರ ಸದುಪಯೋಗ ಪಡೆದು ಜಿಲ್ಲೆಗೆ ಉತ್ತಮ ಫಲಿತಾಂಶ ತಂದುಕೊಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಗುಣಾತ್ಮಕಗೊಳಿಸುವ ದೃಷ್ಟಿಯಿಂದ ವಿಶೇಷ ತರಗತಿಗೆ ಒತ್ತು ನೀಡಲಾಗಿದೆ, ಕಲಿಕೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದ ಅವರು, ಇಲಾಖೆ ನೀಡಿರುವ ‘ನನ್ನನ್ನೊಮ್ಮೆ ಗಮನಿಸಿ’ ಅಧ್ಯಾಯವಾರು ಪ್ರಶ್ನೋತ್ತರ, ಅಭ್ಯಾಸ ಹಾಳೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮಕ್ಕಳಿಗೆ ಸಲಹೆ ನೀಡಿದರು.
ವಿಷಯ ಪರಿವೀಕ್ಷಕ ಶಂಕರೇಗೌಡ, ವೃತ್ತಿ ಶಿಕ್ಷಣ ಪರಿವೀಕ್ಷಕ ವೆಂಕಟೇಶಬಾಬು, ಹನುಮನಹಳ್ಳಿ ಶಾಲೆ ಪ್ರಭಾರ ಮುಖ್ಯಶಿಕ್ಷಕ ಬಿ.ಕೆ.ನಾಗರಾಜ, ಸಂಪನ್ಮೂಲ ವ್ಯಕ್ತಿ ಪಿ.ಎನ್.ಬಾಲಕೃಷ್ಣರಾವ್, ಗೋಪಾಲ್ ರಾವ್, ವಿಜ್ಞಾನ ವಿಷಯ ಶಿಕ್ಷಕರು ಹಾಗೂ ಕೆಜಿಎಫ್ ತಾಲೂಕಿನ ಲಕ್ಷ್ಮೀಕಾಂತ್ ಇದ್ದರು.