ಹಾರೋಹಳ್ಳಿ: ತಾಲೂಕಿನ ಹೊನ್ನಾಲಗನದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 11 ಜೆಡಿಎಸ್ ಬೆಂಬಲಿತ ನಿರ್ದೇಶಕರು ಜಯಗಳಿಸಿದ್ದಾರೆ. ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ 12 ನಿರ್ದೇಶಕರ ಸ್ಥಾನಗಳಲ್ಲಿ ಜೆಡಿಎಸ್ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಪಾರಮ್ಯ ಮೆರೆದಿದೆ. ತೀವ್ರ ಹಣಾಹಣಿಯಿಂದ ಕೂಡಿದ ಚುನಾವಣೆಯಲ್ಲಿ ಒಟ್ಟು 143 ಮತದಾರರು ಮತ ಚಲಾವಣೆ ಮಾಡಿದರು. ಜೆಡಿಎಸ್ ಬೆಂಬಲಿತರಾದ ಬಸವರಾಜು, ಚೈತ್ರ, ಎಚ್.ಕೆ. ರಾಮಯ್ಯ, ಮಹಾಲಿಂಗಯ್ಯ, ಮೋಟಯ್ಯ, ಹನುಮಮ್ಮ, ಎಚ್.ಆರ್. ಅಶೋಕ್ ರಾಜೆ ಅರಸು, ಪುಟ್ಟಸ್ವಾಮಿ ಸುಜಾತ, ಕೆಂಚಮ್ಮ ಕಾಂಗ್ರೆಸ್ ಬೆಂಬಲಿತರಾದ ಹರೀಶ್ ಕುಮಾರ್.ಎಚ್.ಎಸ್ ಗೆಲುವು ನಗೆ ಬೀರಿದರು. ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆಯ ಮಂಜುನಾಥ್ , ಸಹಾಯಕರಾಗಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜು ಕಾರ್ಯ ನಿರ್ವಹಿಸಿದರು. ತಾಪಂ ಮಾಜಿ ಸದಸ್ಯ ಕೆ.ಎನ್.ರಾಮು ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಈ ಸಹಕಾರ ಸಂಘವು ಕಾಂಗ್ರೆಸ್ ತೆಕ್ಕೆಯಲ್ಲಿದ್ದು ಈ ಬಾರಿ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಅವರ ವಿಶ್ವಾಸಕ್ಕೆ ನಾವು ಋಣಿಯಾಗಿದ್ದು ಮುಂದಿನ ದಿನಗಳಲ್ಲಿ ಅವರ ನಂಬಿಕೆಗೆ ತಕ್ಕ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಹಾರೋಹಳ್ಳಿ ತಾಲೂಕಿನ ಹೊನ್ನಾಲಗನದೊಡ್ಡಿ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ನಿರ್ದೇಶಕರನ್ನು ಮುಖಂಡರು ಅಭಿನಂದಿಸಿದರು.