ಶಿರಹಟ್ಟಿ: ಇಡೀ ಜಗತ್ತಿನಲ್ಲಿಯೇ ಧಾರ್ಮಿಕ ಪರಂಪರೆ-ಆಚರಣೆ, ಸಂಪ್ರದಾಯ ಮತ್ತು ಸಂಸ್ಕೃತಿ- ಸಂಸ್ಕಾರಕ್ಕೆ ಹೆಸರುವಾಸಿಯಾದ ದೇಶ ನಮ್ಮದು. ವಿವಿಧೆತೆಯಲ್ಲಿ ಏಕತೆ ಎಂಬುದನ್ನು ತೋರಿಸಿಕೊಟ್ಟ ನಮ್ಮ ದೇಶದಲ್ಲಿ ನಾವೆಲ್ಲರೂ ಒಂದು ಎಂಬ ಸದ್ಭಾವದಿಂದ ಬದುಕುತ್ತಿದ್ದೇವೆ ಎಂದು ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶಿಕ್ಷಕಿ ರತ್ನಾ ಬದಿ ಹೇಳಿದರು.
ಯತ್ರ ನಾರೇಶು ಪೂಜ್ಯಂತೇ ತತ್ರ ರಮಂತೇ ದೇವತಾ ಎಂಬ ಸಂಸ್ಕೃತ ಶ್ಲೋಕದಂತೆ ಎಲ್ಲಿ ಸ್ತ್ರೀಯನ್ನು ಪೂಜ್ಯನೀಯ ಮತ್ತು ಗೌರವಯುತ ಭಾವನೆಯಿಂದ ಕಾಣುತ್ತಾರೋ ಅಲ್ಲಿ ಸ್ವತಃ ದೇವತೆಗಳೇ ಬಂದು ನೆಲೆಸುತ್ತಾರೆ ಎಂಬ ಪ್ರತೀತಿಯಿದೆ.
ಅದಕ್ಕಾಗಿ ನಮ್ಮ ತಾಯಂದಿರು ಸನಾತನವಾಗಿ ಅಚರಿಸುತ್ತಾ ಬಂದಿರುವ ಈ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಮಕ್ಕಳಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಂಪ್ರದಾಯಿಕ-ಸಂಸ್ಕಾರ ಒಡಮೂಡುವಂತೆ ಮಾಡುವುದು ಅಗತ್ಯವಾಗಿದೆ. ಈ ಮೂಲಕ ತಾಯಂದಿರು ಇಂತಹ ಸಂಪ್ರದಾಯ, ಆಚಾರ-ವಿಚಾರ ಮುಂದಿನ ಪೀಳಿಗೆಗೆ ಬಳವಳಿಯಾಗಿ ನೀಡಲು ಸಾಧ್ಯ ಎಂದು ಹೇಳಿದರು.ಕೆಡುಕಿನ ವಿರುದ್ಧ ಒಳಿತಿನ ವಿಜಯವನ್ನು ನಾವು ನವರಾತ್ರಿ ಹಬ್ಬದ ಮೂಲಕ ಸ್ಮರಿಸುತ್ತೇವೆ. ದುರ್ಗಾದೇವಿಯು ಒಂಬತ್ತು ದಿನಗಳ ವರೆಗೆ ಶಕ್ತಿಯ ಆರಾಧನೆ ಮಾಡುವ ಮತ್ತು ದೇವಿಯು ಜಗತ್ತಿನಲ್ಲಿ ದುಷ್ಟರ ಸಂಹಾರ ಮಾಡಿ ಶಿಷ್ಟರ ರಕ್ಷಣೆಗಾಗಿ ನವಶಕ್ತಿ ಅವತಾರ ತಾಳುತ್ತಾಳೆ ಎಂಬ ಪ್ರತೀತಿ ಇದೆ. ಈ ಹಬ್ಬದ ಪ್ರಯುಕ್ತ ಸುಮಂಗಲೆಯರು ಪ್ರತಿ ಮನೆಯಲ್ಲೂ ಒಂಬತ್ತು ದಿನಗಳ ಪರ್ಯಂತ ದೀಪ ಹಾಕುವುದು, ಘಟಸ್ಥಾಪನೆ ಮಾಡುವುದು ಹೀಗೆ ಆದಿಶಕ್ತಿ ಆರಾಧಿಸುವ ಪವಿತ್ರ ಮತ್ತು ವಿಶಿಷ್ಟವಾದ ಹಬ್ಬ ಇದಾಗಿದೆ ಎಂದರು.