- ಎಸಿ ನೇತೃತ್ವದ ಅಧಿಕಾರಿಗಳ ತಂಡದಿಂದ ಸ್ಥಳ ಪರಿಶೀಲನೆ । ಕ್ಯಾಂಟೀನ್ ಆರಂಭಿಸಿದರೆ ಕೋರ್ಟ್ ಮೊರೆ: ಸ್ಥಳೀಯರ ಎಚ್ಚರಿಕೆ- - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಮಲೇಬೆನ್ನೂರು ಪಟ್ಟಣದ ಜಿ.ಬಿ.ಎಂ. ಶಾಲಾ ಕಟ್ಟಡವನ್ನು ತೆರವು ಗೊಳಿಸಿ ಇಂದಿರಾ ಕ್ಯಾಂಟೀನ್ ಆರಂಭಿಸುವ ಕುರಿತು ಜಿಲ್ಲಾಡಳಿತ ನಿರ್ಧಾರ ಕೈಗೊಂಡಿತ್ತು. ಇದಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಸ್ಥಳಕ್ಕೆ ಉಪವಿಭಾಗಾಧಿಕಾರಿ ದುರ್ಗಾಶ್ರೀ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದೆ.ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮುಖ್ಯಾಧಿಕಾರಿ ನೇತೃತ್ವದಲ್ಲಿ ಜಿಬಿಎಂ ಶಾಲೆ ಕಟ್ಟಡ ತೆರವುಗೊಳಿಸಲಾಗಿದೆ. ಎಸ್ಡಿಎಂಸಿ ಹಾಗೂ ನಾಗರೀಕರ ವಿರೋಧದ ಮೇರೆಗೆ ಕಟ್ಟಡ ತೆರವು ಕಾಮಗಾರಿಯನ್ನು ಅರ್ಧಕ್ಕೇ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಇಂದಿರಾ ಕ್ಯಾಂಟಿನ್ ಆರಂಭಿಸುವ ಸರ್ಕಾರದ ಉದ್ದೇಶ ನನೆಗುದಿಗೆ ಬಿದ್ದಿತ್ತು. ಸೋಮವಾರ ಬೆಳಗ್ಗೆ ಎಸಿ ದುರ್ಗಾಶ್ರೀ, ತಹಸೀಲ್ದಾರ್ ಗುರುಬಸವರಾಜ್ ಮತ್ತಿತರೆ ಅಧಿಕಾರಿಗಳ ತಂಡ ಶಿಥಿಲ ಶಾಲಾ ಕಟ್ಟಡ ತೆರವುಗೊಳಿಸಿದ ಜಾಗವನ್ನು ಪರಿಶೀಲಿಸಿ, ಪುರಸಭೆ ಸಭಾಂಗಣದಲ್ಲಿ ನಾಗರೀಕರಿಂದ ಸಲಹೆ, ಸೂಚನೆ ಪಡೆಯಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ ಮಾತನಾಡಿ, ಶೈಕ್ಷಣಿಕ ಉದ್ದೇಶಕ್ಕಾಗಿ ದಾನಿಗಳು ನಿವೇಶನವನ್ನು ದಾನ ಮಾಡಿದ್ದಾರೆ. ಶೈಕ್ಷಣಿಕ ಉದ್ದೇಶಕ್ಕೆ ಕಟ್ಟಡದ ಜಾಗ ಬಳಸಿದರೆ ನಮ್ಮ ವಿರೋಧವಿಲ್ಲ. ಅದೇ ಸ್ಥಳದಲ್ಲಿ ಸರ್ಕಾರಿ ಡಿಗ್ರಿ ಕಾಲೇಜು ಆರಂಭಿಸಬೇಕು. ಇಂದಿರಾ ಕ್ಯಾಂಟೀನ್ ಆರಂಭಿಸಲು ಅಷ್ಟು ಆಸಕ್ತಿ ಇದ್ದರೆ ಯಾವುದಾದರೂ ಸರ್ಕಾರಿ ನಿವೇಶನದಲ್ಲಿ ಆರಂಭಿಸಿ ಎಂದು ಸಲಹೆ ನೀಡಿದರು.ನಾಗರೀಕರಾದ ಸುರೇಶ್ ಶಾಸ್ತ್ರಿ ಮಾತನಾಡಿ, ಶತಮಾನ ಕಂಡಿರುವ ಈ ಶಾಲೆಗೆ ಶೈಕ್ಷಣಿಕ ಉದ್ದೇಶಕ್ಕಾಗಿಯೇ ದಾನಿಗಳು ಜಾಗವನ್ನು ಬಿಟ್ಟುಕೊಟ್ಟಿದ್ದರು. ಆದರೆ, ಈಗ ಅವರ ಆಶಯವನ್ನು ಗಾಳಿಗೆ ತೂರಿ, ಇಂದಿರಾ ಕ್ಯಾಂಟೀನ್ ಆರಂಭಿಸಲು ಹೊರಟಿದ್ದಾರೆ. ಈ ನಿರ್ಧಾರದಿಂದ ಜಿಲ್ಲಾಡಳಿತ ಹಿಂದೆ ಸರಿಯದಿದ್ದರೆ ಸೂಕ್ತ ದಾಖಲಾತಿಗಳೊಂದಿಗೆ ನ್ಯಾಯಾಲಯಕ್ಕೆ ಮೊರೆ ಹೋಗಲು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಮತ್ತೋರ್ವ ನಾಗರೀಕ ಬಿ.ಸುರೇಶ್ ಕುಮಾರ್ ಮಾತನಾಡಿ, ತೆರವು ಮಾಡಿದ ಶಾಲಾ ಕಟ್ಟಡದಲ್ಲಿ ವಸ್ತುಗಳು ಕಳವಾಗುವ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗುವ ಸಂಭವವಿದೆ. ಇಂದಿರಾ ಕ್ಯಾಂಟೀನ್ ಆರಂಭಿಸುವುದಿದ್ದರೆ ಹೆಚ್ಚು ಜನಸಂದಣಿ ಇರುವ ಕಡೆ ನಿರ್ಮಿಸಿ ಎಂದು ಸಲಹೆ ನೀಡಿದರು.ಎಸ್ಡಿಎಂಸಿ ಮುಖಂಡರಾದ ಅಜೇಯ ನಾಯ್ಕ ಮತ್ತು ಬಿ.ಬಸವರಾಜ್ ಮಾತನಾಡಿ, ತೆರವು ಮಾಡಿದ ಶಾಲಾ ಕಟ್ಟಡದ ಪಕ್ಕದಲ್ಲಿಯೇ ಮದ್ಯದ ಅಂಗಡಿ ಇದೆ. ಇಂತಹ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದರೆ ಕುಡುಕರ ಹಾವಳಿಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ ಎಂದರು.
ಉಪವಿಭಾಗಾಧಿಕಾರಿ ದುರ್ಗಾಶ್ರೀ ಮಾತನಾಡಿ, ಇಂದಿರಾ ಕ್ಯಾಂಟೀನ್ ಆರಂಭಿಸುವ ವಿಷಯ ಕುರಿತು ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಸ್ಥಳ ಪರಿಶೀಲನೆ ನಡೆಸಲಾಗಿದೆ. ಪರಿಶೀಲನಾ ವರದಿಯನ್ನು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಲಾಗುತ್ತದೆ ಎಂದರು.ತಹಸೀಲ್ದಾರ್ ಗುರುಬಸವರಾಜ್ ಮಾತನಾಡಿ, ಸ್ಥಳೀಯ ಆಡಳಿತದಿಂದ ಈ ತಪ್ಪು ನಡೆದಿದೆ. ದೊಡ್ಡ ವಿವಾದ ಮಾಡದೇ ಎಲ್ಲರೂ ಆಡಳಿತ ವರ್ಗಕ್ಕೆ ಶಾಂತಿಯಿಂದ ಸಹಕರಿಸಿ, ಕಾನೂನು ಸುವ್ಯವಸ್ಥೆ ಕಾಪಾಡಿ ಎಂದು ಮನವಿ ಮಾಡಿದರು.
ವೃತ್ತ ನಿರೀಕ್ಷಕ ಸುರೇಶ್ ಸಗರಿ, ಉಪ ತಹಸೀಲ್ದಾರ್ ಆರ್.ರವಿ, ರಾಜಸ್ವ ನಿರೀಕ್ಷಕ ಆನಂದ್, ಪಿಎಸ್ಐ ಮಹಾದೇವ್ ಪತ್ತೆ, ಗ್ರಾಮಸ್ಥರಾದ ಮುದೇಗೌಡ್ರ ತಿಪ್ಪೇಶ್, ಬೀರಪ್ಪ, ಗಂಗಾಧರ, ಮಂಜುನಾಥ, ನಯಾಜ್, ಶಿವು, ಸಾಬೀರ್ ಅಲಿ, ಷಾ ಅಬ್ರಾರ್, ಸಿದ್ದೇಶ್, ದಾದಾಪೀರ್, ಗೌಡ್ರ ಮಂಜಣ್ಣ, ಹಾಲೇಶಣ್ಣ ಹಾಗೂ ಎಸ್ಡಿಎಂಸಿ ಪದಾಧಿಕಾರಿಗಳು ಹಾಜರಿದ್ದರು.- - - -೧ಎಂಬಿಆರ್೧:
ಮಲೇಬೆನ್ನೂರು ಪಟ್ಟಣದ ಜಿ.ಬಿ.ಎಂ. ಶಾಲಾ ಕಟ್ಟಡ ತೆರವು ವಿವಾದ ಬೆನ್ನಲ್ಲೇ ಉಪವಿಭಾಗಾಧಿಕಾರಿ ದುರ್ಗಾಶ್ರೀ ನೇತೃತ್ವದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು.