ನಗರದ ಆಜಾದ್ ಪಾರ್ಕ್ ಮೈದಾನದಲ್ಲಿ ವಿಜಯೋತ್ಸವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಒಳ ಮೀಸಲಾತಿ ಜಾರಿ ಕುರಿತು ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪು ಸ್ವಾಗತಿಸಿ ವಿವಿಧ ಸಂಘಟನೆಗಳ ಮುಖಂಡರು ವಿಜಯೋತ್ಸವ ಆಚರಿಸಿದರು.
ಶನಿವಾರ ನಗರದ ಆಜಾದ್ ಪಾರ್ಕ್ ಮೈದಾನದಲ್ಲಿ ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಆರ್. ರಮೇಶ್, ಆದಿಜಾಂಬವ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘಟನೆ ಅಧ್ಯಕ್ಷ ವೆಂಕಟೇಶ್ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ನ್ಯಾಯಾಲಯ ನೀಡಿರುವ ತೀರ್ಪನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.ನ್ಯಾಯಾಲಯ ನೀಡಿರುವ ಈ ತೀರ್ಪು ಮಾದಿಗ ಸಮುದಾಯ, ಒಳ ಮೀಸಲಾಗಿ ವರ್ಗೀಕರಣ ಆಗಬೇಕೆಂಬ 30 ವರ್ಷಗಳ ಹೋರಾಟದ ಫಲವಿದೆಂದು ಸಂಘಟನೆ ಮುಖಂಡರು ತಿಳಿಸಿದರು. ರಾಜ್ಯದಲ್ಲಿ ಬಹುಸಂಖ್ಯಾತರಾದ ಮಾದಿಗ ಸಮುದಾಯ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುಂದೆ ಬರಬೇಕೆಂಬ ಹಿನ್ನೆಲೆಯಲ್ಲಿ ಒಳ ಮೀಸಲಾತಿ ಜಾರಿ ಮಾಡುವಂತೆ ಕಳೆದ 30 ವರ್ಷಗಳಿಂದ ನಿರಂತರ ಹೋರಾಟ ನಡೆಸಿದ ಸಂಘಟನೆ ಗಳು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡಬೇಕೆಂಬ ವರದಿ ನೀಡಿತ್ತು ಎಂದರು.
ಈ ವರದಿ ಜಾರಿಗೊಳಿಸುವ ಮೂಲಕ ಸೌಲಭ್ಯ ವಂಚಿತರಿಗೆ ನ್ಯಾಯ ದೊರಕಿಸಬೇಕೆಂಬ ಹಿನ್ನೆಲೆಯಲ್ಲಿ ಈವರೆಗೂ ನಡೆದ ಹೋರಾಟದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ರಾಜಕೀಯ ಪಕ್ಷಗಳು ಈ ವರದಿ ಜಾರಿಗೊಳಿಸುವ ಸುಳ್ಳು ಭರವಸೆ ನೀಡಿ ರಾಜ್ಯದಲ್ಲಿ ಬಹುಸಂಖ್ಯಾತರಾದ ಮಾದಿಗ ಸಮುದಾಯದ ಮೂಗಿಗೆ ತುಪ್ಪ ಸವರುವ ಮೂಲಕ ಇವರನ್ನು ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುವ ಮೂಲಕ ವಂಚಿಸಿದ್ದಾರೆ ಎಂದು ಆರೋಪಿಸಿದರು. ಈ ಸಂಬಂಧ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾರಿಗೊಳಿಸಲು ಸರ್ವೋಚ್ಛ ನ್ಯಾಯಾಲಯದ ತೀರ್ಪು ಜಾರಿಗೊಳಿಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಾದಿಗ ಸಂಘಟನೆ ಮುಖಂಡ ಎಲ್.ಎಸ್. ರೇವಣ್ಣ, ಕಡೂರು ಮಂಜಣ್ಣ, ನಗರಸಭಾ ಸದಸ್ಯ ಅರುಣ್ ಕುಮಾರ್, ಶ್ರೀಕಾಂತ್, ಡಾ. ಬಿ.ವಿ. ಪ್ರಕಾಶ್, ಕೆಂಪನಹಳ್ಳಿ ನವೀನ, ಶಂಕರಪುರ ನಾಗರಾಜ್, ಚಂದ್ರು, ಜಗದೀಶ್, ಹಾಲಪ್ಪ ಹಾಜರಿದ್ದರು. 3 ಕೆಸಿಕೆಎಂ 5ಒಳ ಮೀಸಲಾತಿ ಜಾರಿ ಕುರಿತು ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪು ಸ್ವಾಗತಿಸಿ ವಿವಿಧ ಸಂಘಟನೆ ಮುಖಂಡರು ಚಿಕ್ಕಮಗಳೂರಿನಲ್ಲಿ ಶನಿವಾರ ವಿಜಯೋತ್ಸವ ಆಚರಿಸಿದರು.