ಗಂಗಾವತಿ:
ಇಲ್ಲಿನ ಪಂಪಾನಗರ ಮತ್ತು ವಿರೂಪಾಪುರದಲ್ಲಿ ಎರಡು ಶಾಸನಗಳನ್ನು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಪತ್ತೆ ಹಚ್ಚಿದ್ದಾರೆ.ಪಂಪಾನಗರದ ಬೆಟ್ಟಕ್ಕೆ ಹೊಂದಿಕೊಂಡಿರುವ ಪಠಾಣರ ಖಬರಸ್ಥಾನದ ವ್ಯಾಪ್ತಿಯಲ್ಲಿರುವ ಹುಟ್ಟು ಬಂಡೆಯ ಮೇಲೆ ಮೂರು ಸಾಲುಗಳಲ್ಲಿ ಬರೆದ ಶಾಸನ ಪತ್ತೆಯಾಗಿದೆ. ಮೇಲ್ಭಾಗದಲ್ಲಿ ಸೂರ್ಯ, ಚಂದ್ರ ಮತ್ತು ಶಿವಲಿಂಗದ ಚಿತ್ರಗಳಿವೆ. ಶಾಸನದ ಪಾಠ ಶುದ್ಧವಾಗಿಲ್ಲ. ಶಾಸನ ಪಾಠವನ್ನು "ಶ್ರೀಗೊಂಗಡಯ್ಯನ ಮನೆ ಮಣುಪ ಕಾಳಗಿ ಕೊಂಡ ಕೊಂದಾ ಪಾದಕ್ಕೆ ಅರುಹಿ ಕೊಂಡದು " ಎಂದು ಕರೆಯಬಹುದಾಗಿದೆ. ಈ ಶಾಸನದಿಂದ ಅನತಿ ದೂರದಲ್ಲಿರುವ ಮತ್ತೊಂದು ಗುಂಡಿನ (ಬಂಡೆ) ಮೇಲೆ "ಶ್ರೀಕೊಂಡ ಕುಂದಾಚಾರ್ಯರ ಪಾದವು " ಮತ್ತು "ಪಿನಿಬಿಸಿ ಮಾಯಣ್ಣ "ಎಂಬ ಬರಹಗಳಿವೆ. ಈ ಗುಂಡಿನ ಮೇಲೆ ಕೊಂಡ ಕುಂಡಾಚಾರ್ಯರ ಪಾದಗಳ ಚಿತ್ರಗಳನ್ನು ಕೆತ್ತಲಾಗಿದೆ.
ಈ ಶಾಸನದಿಂದ ನೇರವಾಗಿ ಬೆಟ್ಟದ ಮಧ್ಯಭಾಗದ ಒಂದು ಗವಿಯಲ್ಲಿ ಜೈನ ಶೀಥಲನಾಥ ತೀರ್ಥಂಕರರ, ಯಕ್ಷಿಯ ಮತ್ತು ಅಶ್ವ ಸವಾರಿ ಅರಸನ ಶಿಲ್ಪಗಳಿವೆ. ಈ ಶಿಲ್ಪ ಮತ್ತು ಶಾಸನಗಳನ್ನು ಅನುಲಕ್ಷಿಸಿ ಇವು ಜೈನ ಧರ್ಮಕ್ಕೆ ಸಂಬಂಧಿಸಿದವೆಂದು ಸ್ಪಷ್ಟವಾಗುತ್ತದೆ. ಪ್ರಸ್ತುತ ಶಾಸನವು ಗೊಂಗಡಯ್ಯ ಎಂಬ ಭಕ್ತನ ಮನೆಗೆ ಕೊಂಡಕುಂದಾ ಎಂಬ ಜೈನ ಯತಿಗಳು ಪಾದ ವಿರಿಸಲು (ಆಗಮಿಸಲು) ಅರುಹಿಕೊಂಡ ಸಂಗತಿಯನ್ನು ವಿವರಿಸುತ್ತದೆ. ಕೊಂಡ ಕುಂದಾಚಾರ್ಯ ಎಂಬ ಜೈನ ಯತಿಗಳು ಶಿಲ್ಪಗಳಿರುವ ಗವಿಯಲ್ಲಿ ಧ್ಯಾನಸ್ಥರಾಗಿರಬಹುದು, ಇಲ್ಲವೇ ಸಲ್ಲೇಖನ ವ್ರತ ಆಚರಿಸಿರಬಹುದಾದ ಸಾಧ್ಯತೆ ಇದೆ. ಶಾಸನದ ಅಕ್ಷರಗಳ ಶೈಲಿಯಿಂದ ಇದು ಹದಿನೈದನೇ ಶತಮಾನಕ್ಕೆ ಸೇರುತ್ತದೆ.ಎರಡನೇ ಶಾಸನವು ವಿರುಪಾಪುರನಗರದ ಕೃಷ್ಣ ನಾಯಕ್ ಎಂಬವರ ಮನೆಯ ಹಿಂಬದಿಯ ಹುಟ್ಟು ಬಂಡೆಯಲ್ಲಿ ನಾಲ್ಕು ಸಾಲುಗಳಲ್ಲಿ ಕೆತ್ತಲಾಗಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರ ಮತ್ತು ಶಿವಲಿಂಗದ ಕೆತ್ತನೆಗಳಿವೆ. ಶಾಸನದ ಅಕ್ಷರಗಳು ಅಲ್ಲಲ್ಲಿ ಸವೆದಿವೆ. ಹಾಗಾಗಿ ಪೂರ್ಣ ವಿಷಯ ಗ್ರಹಿಸಲು ಸಾಧ್ಯವಾಗುವುದಿಲ್ಲ. ಈ ವಿಷಯವನ್ನು ಗ್ರಹಿಸಿ ಪ್ರೌಡಪ್ಪ ನಾಯಕರು ವಿರೂಪಾಪುರದಲ್ಲಿ ಯಾವುದೋ ದೇವರಿಗೆ ಗದ್ದೆಯನ್ನು ದಾನವಾಗಿ ನೀಡಿದ ವಿಷಯವನ್ನು ತಿಳಿಸುತ್ತದೆ. ಈ ಶಾಸನವೂ ಕೂಡ ಹದಿನಾರನೇ ಶತಮಾನಕ್ಕೆ ಸಂಬಂಧಿಸಿದೆ. ಗಂಗಾವತಿಯಲ್ಲಿ ಈಗಾಗಲೇ ಮಳೆ ಮಲ್ಲೇಶ್ವರ ಬೆಟ್ಟದ ಹಿಂಬದಿಯ ಒಂದು ಚಿಕ್ಕ ಗುಂಡಿನ ಮೇಲೆ 5 ಸಾಲುಗಳ ಶಾಸನವು ದೊರೆತಿದ್ದು ,ಅದರ ಜತೆಗೆ ಇವೆರಡು ಸೇರ್ಪಡೆಯಾಗಿವೆ.
ಒಟ್ಟಿನಲ್ಲಿ ಗಂಗಾವತಿಯ 16ನೇ ಶತಮಾನದ ಇತಿಹಾಸ ತಿಳಿದುಕೊಳ್ಳಲು ಈ ಶಾಸನಗಳು ಸಹಾಯಕವಾಗಿದ್ದು ಇವುಗಳ ಕುರಿತು ಹೆಚ್ಚಿನ ಅಧ್ಯಯನ ಮಾಡಲಾಗುವುದೆಂದು ಎಂದು ಡಾ. ಕೋಲ್ಕಾರ್ ತಿಳಿಸಿದ್ದಾರೆ.