ಶರಣರ ವಚನ ಸಂದೇಶ ಇಂದಿಗೂ ಪ್ರಸ್ತುತ: ಕುಮಾರಸ್ವಾಮಿ

KannadaprabhaNewsNetwork | Published : Jan 22, 2024 2:15 AM

ಸಾರಾಂಶ

800 ವರ್ಷಗಳ ಹಿಂದೆ ಬಾಳಿ ಬದುಕಿದ ಶಿವಶರಣರು ವಚನಗಳಲ್ಲಿ ಸಾರಿದ ಸಂದೇಶಗಳು ಇಂದಿನ ಸಮಾಜದಲ್ಲೂ ಪ್ರಸ್ತುತ ಎನಿಸುತ್ತವೆ. ಅವರು ಹೇಳಿದ ಸಾಕಷ್ಟು ವಿಚಾರಗಳು ವಾಸ್ತವಾಗಿವೆ. ಸಮಾಜದ ಬದಲಾವಣೆಗೆ ಸಹಕಾರಿಯಾಗಿವೆ.

ಚಿತ್ರದುರ್ಗ: 800 ವರ್ಷಗಳ ಹಿಂದೆ ಬಾಳಿ ಬದುಕಿದ ಶಿವಶರಣರು ವಚನಗಳಲ್ಲಿ ಸಾರಿದ ಸಂದೇಶಗಳು ಇಂದಿನ ಸಮಾಜದಲ್ಲೂ ಪ್ರಸ್ತುತ ಎನಿಸುತ್ತವೆ. ಅವರು ಹೇಳಿದ ಸಾಕಷ್ಟು ವಿಚಾರಗಳು ವಾಸ್ತವಾಗಿವೆ. ಸಮಾಜದ ಬದಲಾವಣೆಗೆ ಸಹಕಾರಿಯಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಜಿಲ್ಲಾ ಗಂಗಾಂಬಿಕಾ ಬೆಸ್ತರ ಸಂಘದ ಸಹಯೋಗದಲ್ಲಿ ಆಯೋಜಿಸಲಾದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಶರಣರು ಹೇಳಿದ ಮಾತು ನಾವು ಪಾಲಿಸಿದ್ದೇವೆಯೇ ಎಂದು ನಮ್ಮಳಗೆ ಪ್ರಶ್ನೆ ಮಾಡಿಕೊಂಡರೆ ನಮಗೆ ಸಾಕಷ್ಟು ಅಂತರ ಕಾಣಿಸುತ್ತದೆ. 12ನೇ ಶತಮಾನದಲ್ಲಿ ಎಲ್ಲಾ ಕಾಯಕ ಸಮುದಾಯಗಳಿಂದ ಬಂದವರು ಅನುಭವ ಮಂಟಪವನ್ನು ಕಟ್ಟಿದರು. ಕಾಯಕ, ಭಕ್ತಿ, ದಾಸೋಹ ಶರಣ ಪ್ರಮುಖ ತತ್ವಗಳು ಅಂಬಿಗ ವೃತ್ತಿ ಮಾಡುತ್ತಿದ್ದ ಚೌಡಯ್ಯ ಕೂಡ ಪ್ರಮುಖ ಶಿವಶರಣ. ಇವರನ್ನು ನೇರ ನಿಷ್ಠುರಿ, ನಿಜ ಶರಣ ಎಂದೇ ಎಲ್ಲರೂ ಕರೆಯುತ್ತಿದ್ದರು. ಅಂಬಿಗರ ಚೌಡಯ್ಯ ತನ್ನ ವಚನಗಳಲ್ಲಿ ತಳ ಸಮುದಾಯದ ಜನರ ವೇದನೆಗಳನ್ನು ಗಟ್ಟಿತನದಿಂದ ಪ್ರಸ್ತುತ ಪಡಿಸಿದ್ದಾರೆ. ಅಂಬಿಗರ ಚೌಡಯ್ಯನವರ ಜ್ಞಾನ ಹಾಗೂ ಸಮಾಜದ ಬಗೆಗಿನ ತತ್ಪರತೆ ಎಲ್ಲರಿಗೂ ಮಾದರಿಯಾಗಿದೆ. ಚೌಡಯ್ಯನವರ ವಚನಗಳು ಅರ್ಥಪೂರ್ಣವಾಗಿವೆ ಎಂದರು.

ಶಿವಶರಣರಲ್ಲಿ ದಾಸೋಹ ತತ್ವ ಇತ್ತು. ಇದು ಸಂಪತ್ತನ್ನು ಕ್ರೂಡೀಕರಣ ಮಾಡುವುದಕ್ಕೆ ವಿರುದ್ಧವಾಗಿತ್ತು. ಸಂಪತ್ತನ್ನು ಸಮಾನವಾಗಿ ಹಂಚಲಾಗುತ್ತಿತ್ತು. ಈಗಿನ ಪ್ರಪಂಚದಲ್ಲಿ ಸಂಪತ್ತನ್ನೂ ಕ್ರೂಡಿಕರಿಸಿ ಮಕ್ಕಳು ಮತ್ತು ಮೊಕ್ಕಳಿಗೆ ಶೇಖರಿಸಿಡುವ ಪರಿಪಾಠ ಬೆಳೆದು ಬಂದಿದೆ. ಹಂಚುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ವಿಭೂತಿ ಹಾಗೂ ರುದ್ರಾಕ್ಷಿ ಧರಿಸಿದ ತಕ್ಷಣ ನಾವು ಶಿವಶರಣರು ಆಗುವುದಿಲ್ಲ.

ಅವರ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು. ಜ್ಯಾತ್ಯಾತೀತ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಆಧುನಿಕ ಸಮಾಜದಲ್ಲಿ ವೃತ್ತಿಗಳು ಮಾಯವಾಗಿವೆ. ಬೆಸ್ತ ಸಮುದಾಯದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ಗಂಗಾಂಬಿಕಾ ಬೆಸ್ತ ಸಮುದಾಯದಿಂದ ವಿದ್ಯಾರ್ಥಿ ನಿಲಯ ನಿರ್ಮಿಸಲು ಜಿಲ್ಲಾಡಳಿತದಿಂದ ನಿವೇಶನ ಮಂಜೂರು ಮಾಡುವುದಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಭರವಸೆ ನೀಡಿದರು.

ಉಪನ್ಯಾಸಕ ಡಾ.ಬಿ.ಎಂ.ಗುರುನಾಥ ಮಾತನಾಡಿ, ಅಂಬಿಗರ ಚೌಡಯ್ಯ ಕಲ್ಯಾಣದ ಧೃವತಾರೆ ಹಾಗೂ ತತ್ವಜ್ಞಾನಿಯಾಗಿದ್ದರು. ಇವರ 400 ಕ್ಕೂ ಅಧಿಕ ವಚನಗಳು ಲಭ್ಯವಾಗಿವೆ. ಇವುಗಳಲ್ಲಿ ಸಮಾಜದ ಜಾತಿ ವ್ಯವಸ್ಥೆ, ಮೂಡ ನಂಬಿಕೆಗಳ ಬಗ್ಗೆ ಚುಚ್ಚು ಮಾತುಗಳಿವೆ. ಹಸಿಗೋಡೆಗೆ ಹರಳು ಎಸೆದಂತೆ ಚೌಡಯ್ಯ ವಚನಗಳು. ಬಸವಣ್ಣ ಸೇರಿದಂತೆ ಬಹಳಷ್ಟು ವಚನಕಾರರು ಚೌಡಯ್ಯನನ್ನು ನಿಜಶರಣ ಎಂದು ಕರೆದಿದ್ದಾರೆ.

ರಾಜ್ಯದ ಮಂಗಳೂರು ಹಾಗೂ ಕಲಬುರ್ಗಿ ವಿಶ್ವ ವಿದ್ಯಾಲಯದಲ್ಲಿ ಚೌಡಯ್ಯನವರ ಅಧ್ಯಯನ ಪೀಠಗಳು ಇವೆ. ಹಂಪಿ ವಿಶ್ವ ವಿದ್ಯಾಲಯ ಬೆಸ್ತರ ಕುರಿತು ಕುಲಶಾಸ್ತಿçÃಯ ಅಧ್ಯಯನ ನಡೆಸಿದೆ. ಈ ಮೂರು ವಿಶ್ವ ವಿದ್ಯಾಲಯದ ಅಧ್ಯಯನಗಳು ಬೆಸ್ತರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಶಿಫಾರಸ್ಸು ಮಾಡಿವೆ. ರಾಜ್ಯ ಸರ್ಕಾರವು ಈ ಶಿಫಾರಸ್ಸನ್ನು ಒಪ್ಪಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಟ್ಟಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಎಸ್.ಕೆ.ಮಲ್ಲಿಕಾರ್ಜುನ್ ಸ್ವಾಗತಿಸಿದರು. ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ನಿರೂಪಿಸಿದರು. ನಿವೃತ್ತ ಪಿ.ಯು.ಉಪ ನಿರ್ದೇಶಕ ನಾಗರಾಜ ವಂದಿಸಿದರು.

ಜಿಲ್ಲಾ ಗಂಗಾಂಬಿ ಬೆಸ್ತರ ಸಂಘದ ಅಧ್ಯಕ್ಷ ಹೆಚ್.ಡಿ.ರಂಗಯ್ಯ, ಉಪಾಧ್ಯಕ್ಷ ಕೃಷ್ಣಮೂರ್ತಿ, ಖಜಾಂಜಿ ರಂಗನಾಥ, ಮುಖಂಡರುಗಳಾದ ಶಿವಕುಮಾರ್, ರವಿಚಂದ್ರ, ನಾಗರಾಜ.ಎಂ.ಆರ್., ದೊರೆಸ್ವಾಮಿ, ಮಹೇಶ್, ಲೀಲಾವತಿ, ಜಯಣ್ಣ, ರಾಮಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇತರೆ ಮುಖಂಡರು ಉಪಸ್ಥಿತರಿದ್ದರು.

Share this article