ಯಕ್ಷಗಾನದಿಂದ ಮನರಂಜನೆ ಜತೆ ಸಂಸ್ಕೃತಿ ಪರಿಚಯ: ಸಂಸದ ಕಾಗೇರಿ

KannadaprabhaNewsNetwork | Published : Nov 25, 2024 1:06 AM

ಸಾರಾಂಶ

, ನಮ್ಮ ಶ್ರೀಮಂತಿಕೆಯನ್ನು ಹಣದಿಂದ ಅಳೆಯಬಾರದು. ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವುದರಿಂದ ವ್ಯಕ್ತಿತ್ವ ಶ್ರೀಮಂತಗೊಳ್ಳುವುದು.

ಹೊನ್ನಾವರ: ಯಕ್ಷಗಾನವು ಸಮೃದ್ಧವಾದ ಕಲೆ. ಸಾಮಾಜಿಕ ಜೀವನದಲ್ಲಿ ಯಕ್ಷಗಾನ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಲೆಯು ಮನರಂಜನೆಯ ಜತೆಗೆ ಸಂಸ್ಕೃತಿಯನ್ನು ಪರಿಚಯಿಸಿ ಸಂಸ್ಕಾರವನ್ನು ನೀಡುತ್ತದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ಶನಿವಾರ ತಾಲೂಕಿನ ಕಡತೋಕಾದಲ್ಲಿ ಯಕ್ಷರಂಗ ಹಾಗೂ ಯಕ್ಷಲೋಕ ಸಂಘಟನೆಯಲ್ಲಿ ಆಯೋಜಿಸಿದ್ದ ಕಡತೋಕಾ ಮಂಜುನಾಥ ಭಾಗವತ ಸಂಸ್ಮರಣೆಯ ಕಡತೋಕಾ ಕೃತಿ- ಸ್ಮೃತಿ ಯಕ್ಷರಂಗೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಶ್ರೀಮಂತಿಕೆಯನ್ನು ಹಣದಿಂದ ಅಳೆಯಬಾರದು. ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವುದರಿಂದ ವ್ಯಕ್ತಿತ್ವ ಶ್ರೀಮಂತಗೊಳ್ಳುವುದು. ಯಕ್ಷಗಾನವನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಈ ಕಲೆಯನ್ನು ಬೆಳೆಸುವ ಕೆಲಸ ನಡೆಯುತ್ತಿದೆ. ಆರ್ಥಿಕ ಲಾಭದ ಲೆಕ್ಕಾಚಾರಕ್ಕಿಂತ ಬೌದ್ಧಿಕ ಲಾಭದ ಕುರಿತು ಆಲೋಚಿಸಬೇಕು. ಇದರಿಂದ ವ್ಯಕ್ತಿತ್ವ ವಿಕಸನವಾಗುವುದು ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಯಕ್ಷಗಾನವು ನಮ್ಮ ನೆಲದ ಗಂಡುಮೆಟ್ಟಿನ ಕಲೆ. ಗೋಪಾಲಕೃಷ್ಣ ಭಾಗವತ ಅವರು ಉತ್ತಮ ಸಂಘಟನೆಯ ಮೂಲಕ ಯಕ್ಷಗಾನದ ಬೆಳವಣಿಗೆಗೆ ಕೊಡುಗೆ ನೀಡುತ್ತಿದ್ದಾರೆ ಎಂದರು.ಸಾಮಾಜಿಕ ಕಾರ್ಯಕಕರ್ತ ಅನಂತಮೂರ್ತಿ ಹೆಗಡೆ ಮಾತನಾಡಿ, ಯಕ್ಷಗಾನವು ಸಂಘಟಕರ ಪರಿಶ್ರಮದಿಂದ ಉಳಿದು ಬೆಳೆಯುತ್ತಿದೆ. ಯಕ್ಷಗಾನದ ಉಳಿವಿಗೆ ಎಲ್ಲರೂ ಕಾಳಜಿ ವಹಿಸಬೇಕು ಎಂದರು.ಯಕ್ಷಗಾನ ಸಂಘಟಕ, ಪತ್ರಕರ್ತ ಗಣಪತಿ ಶಿರಳಗಿ, ಯಕ್ಷಗಾನ ಪ್ರಸಾದನ ಸಾಧಕ ಲಕ್ಷ್ಮಣ ನಾಯ್ಕ ಮಂಕಿ, ಹಿರಿಯ ಯಕ್ಷಗಾನ ಕಲಾವಿದ ಪ್ರಭಾಕರ ಹೆಗಡೆ ಚಿಟ್ಟಾಣಿ ಅವರನ್ನು ಸನ್ಮಾನಿಸಲಾಯಿತು. ಎಂ.ಕೆ. ಭಟ್ ಜೋಗಿಮನೆ, ಪ್ರತಿಭಾ ಭಾಗವತ, ನಿರೋಷಾ ಭಾಗವತ ಸನ್ಮಾನ ಪತ್ರ ವಾಚಿಸಿದರು.

ಸಂಗೀತ ವಿದ್ಯಾಂಸ ಪ್ರೊ. ಎಸ್. ಶಂಭು ಭಟ್, ಯಕ್ಷಗಾನ ಸಂಶೋಧಕಿ ಡಾ. ವಿಜಯನಳಿನಿ ರಮೇಶ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ, ಇಡಗುಂಜಿ ಮೇಳದ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ, ಗ್ರಾಪಂ ಅಧ್ಯಕ್ಷ ಗೋವಿಂದ ಗೌಡ, ಬಿಜೆಪಿ ಅಧ್ಯಕ್ಷ ಮಂಜುನಾಥ ನಾಯ್ಕ, ಪ್ರಾಂಶುಪಾಲೆ ದುರ್ಗಮ್ಮ ಪಿ.ಎಚ್. ಇತರರಿದ್ದರು. ವಕೀಲ ಸತೀಶ ಭಟ್ ಉಳಗೆರೆ ಸ್ವಾಗತಿಸಿದರು. ಸಂಘಟಕ ಗೋಪಾಲಕೃಷ್ಣ ಭಾಗವತ ವಂದಿಸಿದರು. ಈಶ್ವರ ಭಟ್ ನಿರ್ವಹಿಸಿದರು. ನಂತರ ಕಾರ್ತವೀರ್ಯಾರ್ಜುನ ಯಕ್ಷಗಾನ ಪ್ರದರ್ಶನ ನಡೆಯಿತು.

Share this article