ಕರಡಿ ಸಂರಕ್ಷಿತ ಪ್ರದೇಶದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ಸರಿಯೇ?

KannadaprabhaNewsNetwork | Published : Dec 19, 2024 12:33 AM

ಸಾರಾಂಶ

ಪರಮಾಣು ವಿದ್ಯುತ್ ಸ್ಥಾವರವನ್ನು ಕೇಂದ್ರ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಜಿಲ್ಲೆಯ ಅರಸಿನಕೇರಿ ಅರಣ್ಯ ಪ್ರದೇಶ ಕರಡಿ ಸಂರಕ್ಷಿತ ಪ್ರದೇಶ ಎನ್ನುವುದು ಗಮನಾರ್ಹ ಸಂಗತಿ.

- ಈಗಾಗಲೇ ಘೋಷಣೆಯಾಗಿರುವ ಕರಡಿ ಸಂರಕ್ಷಿತ ಪ್ರದೇಶ

- ಕರಡಿ, ಚಿರತೆ, ತೋಳ ಸೇರಿ ಬಯಲು ಸೀಮೆಯ ನೂರಾರು ಬಗೆಯ ವನ್ಯಸಂಪತ್ತಿಗೆ ಕುತ್ತು

- ಬಯಲು ಸೀಮೆಯಲ್ಲಿರುವ ಸಂರಕ್ಷಿತ ಅರಣ್ಯ ಪ್ರದೇಶವಿದುಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಪರಮಾಣು ವಿದ್ಯುತ್ ಸ್ಥಾವರವನ್ನು ಕೇಂದ್ರ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಜಿಲ್ಲೆಯ ಅರಸಿನಕೇರಿ ಅರಣ್ಯ ಪ್ರದೇಶ ಕರಡಿ ಸಂರಕ್ಷಿತ ಪ್ರದೇಶ ಎನ್ನುವುದು ಗಮನಾರ್ಹ ಸಂಗತಿ.

ಹೌದು, ರಾಜ್ಯ ಸರ್ಕಾರ ಇದೇ ವರ್ಷ ಜನವರಿ ತಿಂಗಳಲ್ಲಿಯೇ ಇದನ್ನು ಕರಡಿ ಸಂರಕ್ಷೀತ ಪ್ರದೇಶ ಎಂದು ಘೋಷಣೆ ಮಾಡಿದೆ. ಇಲ್ಲಿ ಕರಡಿ ಸಂತತಿ ದೊಡ್ಡ ಪ್ರಮಾಣದಲ್ಲಿದ್ದು, ಇತ್ತೀಚೆಗೆ ರಸ್ತೆ ಅಪಘಾತ ಹಾಗೂ ಮಾನವನ ದುರಾಸೆಯಿಂದಾಗಿ ಅರಣ್ಯ ಒತ್ತುವರಿಯಾಗಿ ಅವುಗಳ ಸಂತತಿಗೆ ಕುತ್ತು ಬಂದಿದೆ. ಹೀಗಾಗಿ, ಸರ್ವೆಯ ಬಳಿಕ ಮೆತಗಲ್, ಅರಸಿನಕೇರಿ ಸೇರಿದಂತೆ ಸುತ್ತಮುತ್ತಲ ಅರಣ್ಯ ಇಲಾಖೆ ವ್ಯಾಪ್ತಿಯ ಪ್ರದೇಶ ಹಾಗೂ ರೈತರ ಉಳುಮೆ ಮಾಡುವ ಭೂಮಿಯನ್ನು ಸಹ ಕರಡಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಅದರಡಿಯಲ್ಲಿಯೇ ಈಗ ಕರಡಿಗಳಿಗೆ ಯಾವುದೇ ತೊಂದರೆಯಾಗದೆ ಇರಲಿ ಎಂದು ತಂತಿ ಬೇಲಿಯನ್ನು ಸಹ ಹಾಕಲಾಗುತ್ತಿದೆ.

ಬಯಲು ಸೀಮೆಯಲ್ಲಿ ಇರುವುದೊಂದೇ ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಕರಡಿ, ಚಿರತೆ, ತೋಳ, ಮೊಲ ಸೇರಿದಂತೆ ನೂರಾರು ಪ್ರಭೇದದ ವನ್ಯಸಂಪತ್ತು ಇಲ್ಲಿದೆ ಎಂದು ಅರಣ್ಯ ಇಲಾಖೆಯೇ ಗುರುತಿಸಿದೆ. ಹೀಗಿದ್ದಾಗ ಈಗ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ಇವುಗಳ ಗತಿ ಹೇಗೆ. ಅದರಲ್ಲೂ ಬಹುತೇಕ ಅರಣ್ಯ ಪ್ರದೇಶದಲ್ಲಿಯೇ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಸಲಾಗುತ್ತಿರುವುದು ವನ್ಯಜೀವಿ ಸಂಪತ್ತು ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಅರಸಿನಕೇರಿ ಸುತ್ತ ಕರಡಿ, ತೋಳ, ಚಿರತೆ ಸೇರಿದಂತೆ ದೊಡ್ಡ ವನ್ಯಜೀವಿ ಸಂಪತ್ತು ಇದೆ. ಇವುಗಳ ರಕ್ಷಣೆಗಾಗಿಯೇ ನಾವು ಶ್ರಮಿಸುತ್ತಿದ್ದೇವೆ. ಈಗ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಲು ಮುಂದಾಗಿರುವುದು ಅಚ್ಚರಿಯಾಗಿದೆ. ಇದನ್ನು ಪರಿಶೀಲಿಸಿ, ನಾವು ಕೇಂದ್ರ ಸರ್ಕಾರದ ಪರಿಸರ ಇಲಾಖೆ, ನ್ಯಾಯಾಲಯದ ಮೊರೆ ಹೋಗುವ ಚಿಂತನೆ ಮಾಡಬೇಕಾಗುತ್ತದೆ ಎನ್ನುತ್ತಾರೆ ಪರಿಸರವಾದಿ ಮತ್ತು ವನ್ಯಜೀವಿ ಸಂರಕ್ಷಕ ಇಂದ್ರಜೀತ ಘೋರ್ಪಡೆಕೊಪ್ಪಳ ತಾಲೂಕಿನ ಅರಸಿನಕೇರಿ ಭಾಗ ಕರಡಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಒಂದಷ್ಟು ಭಾಗ ಬರುತ್ತದೆ. ಅಲ್ಲೆಲ್ಲಾ ನಾವು ಈಗಾಗಲೇ ತಂತಿ ಬೇಲಿ ಹಾಕುತ್ತಿದ್ದೇವೆ ಎನ್ನುತ್ತಾರೆ ಆರ್ ಎಫ್ ಓ ಸ್ವಾತಿ ಎಲ್.ಜನವಸತಿ ಪ್ರದೇಶ:

ಕೇವಲ ಪ್ರಾಣಿ ಸಂಪತ್ತು ಅಷ್ಟೇ ಅಲ್ಲ, ಇದೆಲ್ಲಾ ಜನವಸತಿ ಪ್ರದೇಶವಾಗಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಹತ್ತಾರು ಗ್ರಾಮಗಳು ಇದ್ದು, ಜನರು ವಾಸಿಸುತ್ತಿದ್ದಾರೆ. ಕೃಷಿ ಮಾಡುತ್ತಿದ್ದಾರೆ. ಹೀಗಾಗಿ ರೈತರು ಸಹ ಆತಂಕ ವ್ಯಕ್ತಪಡಿಸಿದ್ದಾರೆ.ತುಂಗಭದ್ರಾ ಜಲಾಶಯ:

ಇದಲ್ಲದೆ ಕೇವಲ 25-30 ಕಿ.ಮೀ. ವ್ಯಾಪ್ತಿಯಲ್ಲಿ ತುಂಗಭದ್ರಾ ಜಲಾಶಯ, ತುಂಗಭದ್ರಾ ನದಿಯೂ ಸಹ ಹರಿಯುತ್ತಿದೆ. ಹೀಗಾಗಿ, ಇದೆಷ್ಟರ ಮಟ್ಟಿಗೆ ಸೂಕ್ತ ಪ್ರದೇಶ ಎನ್ನುವುದು ಪ್ರಶ್ನಾರ್ಥಕವಾಗಿದೆ.ಕೈಗಾ ಪರಮಾಣು ಸ್ಥಾವರ ಭಯದಿಂದ ಗ್ರಾಮವೇ ಖಾಲಿ:

ಕಾರವಾರ ಕೈಗಾ ಪರಮಾಣು ವಿದ್ಯುತ್ ಸ್ಥಾವರದಿಂದ ಅನೇಕ ಸಮಸ್ಯೆಗಳು ಎದುರಾಗಿರುವುದು ಕಣ್ಣೆದುರಿಗೆ ಇದೆ. ಪರಮಾಣು ವಿಕಿರಣದಿಂದಾಗುವ ಆರೋಗ್ಯ ಸಮಸ್ಯೆಯಿಂದ ದೇವಲೋಕದಂತಿದ್ದ ದೇವಕಾರ ಗ್ರಾಮ ಸಂಪೂರ್ಣ ಖಾಲಿಯಾಗಿದೆ.

ವಾಸ್ತವ ಹೀಗಿರುವಾಗ ಜನವಸತಿ ಮತ್ತು ವನ್ಯಜೀವಿ ವಾಸಿಸುವ ಪ್ರದೇಶ ವ್ಯಾಪ್ತಿಯಲ್ಲಿ ಪರಮಾಣು ವಿದ್ಯತ್ ಸ್ಥಾವರ ಸ್ಥಾಪನೆ ಮಾಡುತ್ತಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆಯಂತೂ ಕಾಡುತ್ತಿದೆ.

Share this article