ಕನ್ನಡಪ್ರಭ ವಾರ್ತೆ ತಾಂಬಾ
ಶತಮಾನಕ್ಕಿಂತಲೂ ಹಳೆಯದಾದ ಗೀಗಿ ಪದ ಇಂದಿಗೂ ಇಲ್ಲಿನ ಜನರು ಉಳಿಸಿ ಬೆಳೆಸುತ್ತಿರುವುದು ಹೆಮ್ಮೆ ವಿಷಯ ಎಂದು ಸಂಗನಬಸವ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಸಿದ್ದು ಹತ್ತಳ್ಳಿ ಹೇಳಿದರು.ಗ್ರಾಮದ ಹಜರತ್ ದಾವಲಮಲಿಕ್ ಜಾತ್ರೆಯಲ್ಲಿ ಗೀಗಿ ಪದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಾಂಬಾ ಗ್ರಾಮದ ಜನ ನೂರು ವರ್ಷದ ಹಳೆಯದಾದ ಗೀಗಿ ಪದ ಇಂದಿಗೂ ಜನರ ಬಾಯಿಯಲ್ಲಿ ಜನಜನಿತವಾಗಿ, ಉಳಿದು ಬಂದಿರುವುದರ ಹಿಂದೆ ಇಲ್ಲಿನ ಕಲಾವಿದರ ಶ್ರಮ ಬಹಳಷ್ಟಿದೆ. ದೇಶದ ವಿವಿಧ ಸಂಸ್ಕೃತಿ, ಆಚಾರ, ವಿಚಾರ, ವೇಷಭೂಷಣಗಳಿಂದ ವಿವಿಧತೆಯಲ್ಲಿ ಏಕತೆ ಹೊಂದಿದ ದೇಶವಾಗಿದೆ ಎಂದು ಹೇಳಿದರು.
ಸರ್ವಜನಾಂಗ ಶಾಂತಿ, ಸಹಬಾಳ್ವೆಯೊಂದಿಗೆ ಸಾಮರಸ್ಯ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಜನತೆ ಬಹುದೇವತೆಯ ಆರಾಧಕರಾಗಿ ಪ್ರಕೃತಿಯಲ್ಲಿರುವ ಚರಾಚರ ವಸ್ತುಗಳನ್ನು ದೇವಸ್ಥಾನದಲ್ಲಿ ಪೂಜಿಸುವ ಸಂಸ್ಕೃತಿ ನಮ್ಮದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜರುಗುವ ಜಾತ್ರೆಗಳು ಅಲ್ಲಿ ವಾಸಿಸುವ ಜನತೆ ನಡುವೆ ಪರಸ್ಪರ ಸಾಮರಸ್ಯ ಮೂಡಿಸುತ್ತದೆ. ಇಂಡಿ ತಾಲೂಕಿನಲ್ಲಿ ಅನೇಕ ಪುಣ್ಯ ಪುರುಷರು ದಾರ್ಶನಿಕ ಸಾಧು-ಸಂತರು ನಡೆದಾಡಿ ಈ ಭಾಗದ ಜನರಿಗೆ ಒಳ್ಳೆಯ ಸಂಸ್ಕಾರ ನೀಡಿದ್ದಾರೆ ಎಂದರು.ಗ್ರಾಪಂ ಮಾಜಿ ಅಧ್ಯಕ್ಷ ರಾಜಶೇಖರ ಗಂಗನಳ್ಳಿ ಮಾತನಾಡಿ, ಜನಪದ ಸಾಹಿತ್ಯ ನಮ್ಮೆಲ್ಲರ ಉಸಿರು. ಜನಪದ ಸಾಹಿತ್ಯಕ್ಕೆ ಗ್ರಾಮೀಣ ಪ್ರದೇಶದ ಹಿರಿಯರ ಕೊಡುಗೆ ಅಪಾರವಾಗಿದೆ. ಜನಪದ ಸಾಹಿತ್ಯ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸಚ್ಚಾರಿತ್ರ ಬದುಕಿಗೆ ದಾರಿದೀಪವಾಗಿದೆ. ಆಧುನಿಕತೆ ಭರಾಟೆಯಲ್ಲಿಯೂ ಜನಪದ ಸಾಹಿತ್ಯ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಜನಪದರು ರಚಿಸಿದ ಈ ಸಾಹಿತ್ಯಕ್ಕೆ ಜನಸಾಮಾನ್ಯರೆ ಮಾಲೀಕರು. ಪಠ್ಯಪುಸ್ತಕಗಳಲ್ಲಿ ಜಾನಪದ ಸಾಹಿತ್ಯಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸತೀಶ ಹಿರೇಕುರಬರ, ರಾಜಾಸಾಬ ಬಡಿಗೇರ, ಬಸವರಾಜ ಹದರಿ, ಸಲಿಂ ಚಿಕ್ಕಗಸಿ, ಬಸಪ್ಪ ಚಿಂಚೋಳಿ, ಮಹಾದೆವಪ್ಪ ಕುಂಬಾರ, ನಾಗಪ್ಪ ಗೊಂಗಿ, ನೀಲಪ್ಪ ಕಿಣಗಿ, ಬಸನಿಂಗ ಕುಂಬರ, ಶಿವಪ್ಪ ನಾಟೀಕಾರ, ಹುಸೇನಸಾಬ ಇಂಡಿ ಸೇರಿದಂತೆ ಮತ್ತಿತರರು ಇದ್ದರು.