ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ದಾರ್ಶನಿಕರನ್ನು ಜಾತಿಗೆ ಸೀಮಿತಗೊಳಿಸಿರುವುದು ದುರಂತ

KannadaprabhaNewsNetwork | Published : Jun 14, 2025 3:41 AM

ಹೊಸದುರ್ಗ ನಗರದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನಡೆದ ಭಗೀರಥ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶಾಸಕ ಬಿ.ಜಿ.ಗೋವಿಂದಪ್ಪ, ಮಠಾದೀಶರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಇಡೀ ಮನಕುಲಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ವಾಲ್ಮೀಕಿ, ಕನಕದಾಸ, ಭಗೀರಥ, ಬುದ್ಧ ಬಸವ, ಅಂಬೇಡ್ಕರ್ ಈ ದಾರ್ಶನಿಕರನ್ನು ಜಾತಿಗೆ ಸೀಮಿತಗೊಳಿಸಿರುವುದು ದುರಂತ ಎಂದು ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ತಿಳಿಸಿದರು.

ನಗರದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ತಾಲೂಕು ಉಪ್ಪಾರ ಸಂಘ, ಶ್ರೀ ಭಗೀರಥ ನೌಕರರ ಸಾಂಸ್ಕೃತಿಕ ಮತ್ತು ಕ್ಷೇಮಭಿವೃದ್ಧಿ ಸಂಘ ಇವರ ಆಶ್ರಯದಲ್ಲಿ ನಡೆದ ಶ್ರೀ ಭಗೀರಥ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ವ್ಯಕ್ತಿತ್ವ ವಿಕಸನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಹಾತ್ಮರ ಜಯಂತಿಗಳು ಭಕ್ತಿಯಿಂದ ಇರಬೇಕು. ಮಹಾತ್ಮರ ಜಯಂತಿ ಮೆರವಣಿಗೆ ಮಾಡುವಾಗ ನಮ್ಮ ಸಂಸ್ಕೃತಿಯ ಜನಪದ ಕಲಾತಂಡಗಳ ಮೂಲಕ ಮೆರವಣಿಗೆ ಮಾಡಿ ಭಕ್ತಿ ಪ್ರಧಾನವಾದ ನಮ್ಮ ಸಂಸ್ಕೃತಿಯನ್ನು ಉಳಿಸಿದಂತಾಗುತ್ತದೆ. ಯಾವುದೇ ಡಿಜೆ ಸದ್ದಿನ ಕಾರ್ಯಕ್ರಮಗಳಿಗೆ ನಮ್ಮ ಮಠಾಧೀಶರ ಒಕ್ಕೂಟ ಹಾಜರಾಗುವುದಿಲ್ಲ. ಅಶ್ಲೀಲ ಹಾಡುಗಳನ್ನು ಹಾಕಿ ನೃತ್ಯ ಮಾಡುವ ಮೆರವಣಿಗೆಗಳಿಗೆ ನಾವು ಎಂದಿಗೂ ಹೋಗುವುದಿಲ್ಲ. ಯಾವುದೇ ಒಂದು ಕಾರ್ಯಕ್ರಮ ನಡೆಯಬೇಕಾದರೆ ಅದಕ್ಕೆ ಒಂದು ನಿಯಮ ಇರಬೇಕು ಎಂದು ಬೇಸರ ವ್ಯಕ್ತ ಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಜಿ.ಗೋವಿಂದಪ್ಪ, ಹಿಂದುಳಿದ ವರ್ಗದ ಇಲಾಖೆಯಿಂದ ಭಗಿರಥ ಪೀಠದ ಆಸ್ತಿಯನ್ನು ಪರಿವರ್ತನೆ ಮಾಡಲು ತಿಳಿಸಲಾಗುವುದು. ಒಂದು ತಿಂಗಳ ಒಳಗಾಗಿ 1.50 ಕೋಟಿ ರು. ವೆಚ್ಚದಲ್ಲಿ ಸಮುದಾಯ ಭವನ ಕಟ್ಟಲು ನೀಡಲಾಗುವುದು ತಾಲೂಕಿನ ಹಲವು ಗ್ರಾಮಗಳಲ್ಲಿ ಭಗಿರಥ ಭವನ ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ. ಭಗೀರಥ ಮಹಿಳಾ ಸಂಘಟನೆ ಸಮಾಜಕ್ಕೆ ಹೊಸ ದಿಕ್ಸೂಚಿಯಾಗಲಿದ್ದು ಮಹಿಳೆಯರ ಮೂಲಕ ಸಮಾಜ ಅಭಿವೃದ್ಧಿ ಸಾಧ್ಯವಾಗುತ್ತದೆ. ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರ ನೀಡುವವರು ಮಹಿಳೆಯರು, ದಾರಿ ತಪ್ಪಿದ ಸಮಾಜಕ್ಕೆ ಮಹಿಳೆಯರು ಆಸರೆಯಾಗಬೇಕು ಎಂದರು.

ಸರ್ಕಾರದಿಂದ 3.5 ಎಕರೆ ಜಮೀನು ಮಂಜೂರು ಮಾಡಿ ಸಮುದಾಯ ಭವನ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಭಗೀರಥ ಪ್ರತಿಭಾ ಪುರಸ್ಕಾರ ನಿರಂತರವಾಗಿ ನಡೆಯಲಿ. ಶಿಕ್ಷಣದಿಂದ ಸಮಾಜವನ್ನು ಬೆಳಗಬೇಕಿದೆ. ಭಗಿರಥ ಶ್ರೀಗಳ ನೇತೃತ್ವದಲ್ಲಿ ಉಪ್ಪಾರ ಸಮಾಜ ದೇಶದಾದ್ಯಂತ ಸಂಘಟನೆ ಆಗುತ್ತಿದೆ. ಹೊಸದುರ್ಗದ ಯಲಕಪ್ಪನಹಟ್ಟಿಯಲ್ಲಿ ಭಗೀರಥ ವೃತ್ತ ಉದ್ಘಾಟನೆಗೊಂಡಿದೆ. ಇಲ್ಲಿ ಮುಂದಿನ ದಿನಗಳಲ್ಲಿ ವಿಶೇಷವಾದ ಭಗೀರಥ ವೃತ್ತ ನಿರ್ಮಾಣವಾಗಲಿದೆ ಎಂದರು.

ಕುಂಚಟಿಗ ಪೀಠದ ಶ್ರೀ ಶಾಂತವೀರ ಸ್ವಾಮೀಜಿ, ಕೆಲ್ಲೋಡು ಕನಕ ಗುರುಪೀಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ, ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಚ್.ಬಿಲ್ಲಪ್ಪ, ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಮಾತನಾಡಿದರು.

ಇದೇ ಸಂದರ್ಭದಲ್ಲಿ ಶ್ರೀ ಭಗೀರಥ ಮಹಿಳಾ ಸಂಘ ಉದ್ಘಾಟನೆಗೊಂಡಿತು. ಪ್ರತಿಭಾನ್ವಿತ ಮಕ್ಕಳಿಗೆ ನಿವೃತ್ತ ಸೈನಿಕರಿಗೆ ಸಮಾಜದ ಹಿರಿಯರಿಗೂ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಕೆ.ಪರಪ್ಪ, ಜಿ.ಪಂ.ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ, ಮದುರೆ ನಟರಾಜ್, ಮಾಜಿ ತಾಪಂ ಸದಸ್ಯ ಇಲಾಪುರ, ಕೆಪಿಸಿಸಿ ರಾಜ್ಯ ವಕ್ತಾರ ಮಂಜುನಾಥ್ ನೀರಗುಂದ, ಮಾಜಿ ಅಧ್ಯಕ್ಷ ಮಂಜುನಾಥ್, ಕೆಪಿಸಿಸಿ ಸದಸ್ಯ ಎಂ.ಪಿ.ಶಂಕರ್ ಮತ್ತಿತರರು ಹಾಜರಿದ್ದರು.