ಕನ್ನಡ ಭಾಷೆ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರದ್ದು

KannadaprabhaNewsNetwork | Published : Oct 18, 2024 1:26 AM

ಶಿಕಾರಿಪುರ: ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ದಿಸೆಯಲ್ಲಿ ಸಂಚರಿಸುತ್ತಿರುವ ರಥಯಾತ್ರೆಯು ತಾಲೂಕಿಗೆ ಆಗಮಿಸಿದ್ದು ಪ್ರತಿಯೊಬ್ಬ ಕನ್ನಡಿಗ ಹೆಮ್ಮೆ ಪಡಬೇಕಾಗಿದೆ. ಕನ್ನಡ ಭಾಷೆ, ಸಂಸ್ಕೃತಿಗೆ ದೊಡ್ಡ ಕೊಡುಗೆ ನೀಡಿದ ತಾಲೂಕಿನ ಶ್ರೇಷ್ಠತೆಯನ್ನು ಯಾತ್ರೆ ಎತ್ತಿಹಿಡಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಹೆಮ್ಮೆ ವ್ಯಕ್ತಪಡಿಸಿದರು.

ಶಿಕಾರಿಪುರ: ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ದಿಸೆಯಲ್ಲಿ ಸಂಚರಿಸುತ್ತಿರುವ ರಥಯಾತ್ರೆಯು ತಾಲೂಕಿಗೆ ಆಗಮಿಸಿದ್ದು ಪ್ರತಿಯೊಬ್ಬ ಕನ್ನಡಿಗ ಹೆಮ್ಮೆ ಪಡಬೇಕಾಗಿದೆ. ಕನ್ನಡ ಭಾಷೆ, ಸಂಸ್ಕೃತಿಗೆ ದೊಡ್ಡ ಕೊಡುಗೆ ನೀಡಿದ ತಾಲೂಕಿನ ಶ್ರೇಷ್ಠತೆಯನ್ನು ಯಾತ್ರೆ ಎತ್ತಿಹಿಡಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಹೆಮ್ಮೆ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಕಚೇರಿ ಸಮೀಪ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡದ ಜ್ಯೋತಿ ರಥಯಾತ್ರೆಗೆ ಪುಷ್ಪ ಸಮರ್ಪಿಸುವ ಮೂಲಕ ಸ್ವಾಗತಿಸಿ ಮಾತನಾಡಿದ ಅವರು, ಅಖಿಲ ಭಾರತ 50ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮಾಚರಣೆ ಅಂಗವಾಗಿ ರಾಜ್ಯ ಸರ್ಕಾರ ಆಯೋಜಿಸಿದ ಕನ್ನಡದ ರಥಯಾತ್ರೆ ಮೂಲಕ ಸಮಸ್ತ ಕನ್ನಡಿಗರಲ್ಲಿ ಜಾಗೃತಿಯನ್ನು ಉಂಟು ಮಾಡುತ್ತಿದೆ ಎಂದರು.

ಕನ್ನಡ ಭಾಷೆ ಅತ್ಯಂತ ಶ್ರೇಷ್ಠವಾಗಿದ್ದು, 2 ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ. 8 ಜ್ಞಾನಪೀಠ ಪ್ರಶಸ್ತಿಗಳಿಸಿರುವ ಕನ್ನಡ ಭಾಷೆ ಬಗ್ಗೆ ಪ್ರತಿಯೊಬ್ಬ ಕನ್ನಡಿಗ ಹೆಮ್ಮೆ ಪಡಬೇಕಾಗಿದೆ. ಅನ್ಯ ಭಾಷೆಯ ವ್ಯಾಮೋಹದಿಂದ ಹೊರಬಂದು ಕೇವಲ ದೈನಿಂದಿನ ವ್ಯವಹಾರಕ್ಕಾಗಿ ಬದುಕುವ ಅನಿವಾರ್ಯತೆಗಾಗಿ ಬಳಸದೆ ಉಳಿಸಿ ಬೆಳೆಸಿ ಮುಂದಿನ ಪೀಳಿಗೆ ಸಹ ಅತ್ಯಂತ ಹೆಮ್ಮೆಯಿಂದ ಬಳಸುವ ಜವಾಬ್ದಾರಿ ಎಲ್ಲರ ಮುಂದಿದೆ ಎಂದರು.ಶಾಲಾ ಕಾಲೇಜು ಪಠ್ಯ ಪುಸ್ತಕದಲ್ಲಿ ಕನ್ನಡ ಅಂಕಗಳಿಕೆಗೆ ಮಾತ್ರ ಸೀಮಿತವಾಗುತ್ತಿದ್ದು, ಆಚಾರ ವಿಚಾರ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಅಗತ್ಯವಿದೆ. ಶಿಕಾರಿಪುರ ತಾಲೂಕು ನಾಡಿನ ಶ್ರೇಷ್ಠ ವಚನಕಾರರ ಶಿವಶರಣರ ಸಾಹಿತಗಳ ನಾಡಾಗಿದ್ದು, ಕನ್ನಡ ಭಾಷೆ ಬೆಳವಣಿಗೆಗೆ ತಾಲೂಕಿನ ಕೊಡುಗೆ ಬಹು ಮಹತ್ವವಾಗಿದೆ. ಪುರಾತನ ಸಿಂಹ ಕಟಾಂಜನ ಶಾಸನ ತಾಲೂಕಿನ ತಾಳಗುಂದದಲ್ಲಿ ದೊರೆತಿದ್ದು, ಸರ್ಕಾರದಿಂದ ಅಧಿಕೃತ ಘೋಷಣೆಯಾಗಬೇಕಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಮಾತನಾಡಿ, ತಾಲೂಕಿನಾದ್ಯಂತ ಸಂಚರಿಸಲಿರುವ ರಥಯಾತ್ರೆಯನ್ನು ಸಂಭ್ರಮದಿಂದ ಬರಮಾಡಿಕೊಂಡು ಭಾಷಾಭಿಮಾನವನ್ನು ತೋರುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಗ್ರೇಡ್ -2 ತಹಸೀಲ್ದಾರ್ ರಂಜಿತ್, ಶಿರಸ್ತೇದಾರ್ ವಿನಯ್ ಆರಾಧ್ಯ, ಪುರಸಭಾ ಸದಸ್ಯ ಪ್ರಶಾಂತ್ ಜೀನಳ್ಳಿ, ಮುಖ್ಯಾಧಿಕಾರಿ ಭರತ್, ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಸಿ.ವೇಣುಗೋಪಾಲ್, ಮುಖಂಡ ಡಾ.ಬಿ.ಡಿ.ಭೂಕಾಂತ್, ರುದ್ರೇಶ್, ಬೆಣ್ಣೆ ಪ್ರವೀಣ್, ಸುಧೀರ್, ವೀರಣ್ಣಗೌಡ ಮತ್ತಿತರರು ಹಾಜರಿದ್ದರು.