ಕೆಲವು ದೊಡ್ಡ ಸಮಾಜ ಹಾಗೂ ಬಲಿಷ್ಠ ಸಮಾಜಗಳು, ಸಣ್ಣ ಸಣ್ಣ ಸಮಾಜಗಳ ಕೈಹಿಡಿದು ಮೇಲೆ ಎತ್ತುವ ಬದಲು ತಾವೇ ಬೆಳೆಯುತ್ತಾ ಹೊರಟಿವೆ. ಇದಕ್ಕೆ ಕಾರಣ ನಮ್ಮಲ್ಲಿನ ಒಗ್ಗಟ್ಟಿನ ಕೊರತೆ ಹಾಗಾಗಿ ಸಣ್ಣ, ಸಣ್ಣ ಹಿಂದುಳಿದ ಸಮಾಜಗಳು ಒಟ್ಟಾಗಬೇಕಿದೆ. ಸಣ್ಣ ಸಮಾಜಗಳ ಏಳಿಗೆಗಾಗಿ ನಾವು ಆಗಾಗ ಸೇರಿ ಚರ್ಚಿಸಬೇಕಿದೆ.
ಕನ್ನಡಪ್ರಭ ವಾರ್ತೆ ಹರಿಹರ
ನಮ್ಮ ತನ ನಾವು ಉಳಿಸಿಕೊಳ್ಳದಿದ್ದರೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಬೆಳೆಯಲು ಕಷ್ಟವಾಗಲಿದೆ ಎಂದು ತಪೋವನ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶಶಿಕುಮಾರ್ ವಿ. ಮೆಹರವಾಡೆ ಅಭಿಪ್ರಾಯಪಟ್ಟರು.
ನಗರದ ನೇಕಾರ ಬಡಾವಣೆ ಬಳಿಯ ಶ್ರೀ ಚೌಡಾಂಬಿಕ ದೇವಸ್ಥಾನದ ಆವರಣದಲ್ಲಿ ಶ್ರೀ ನೀಲಕಂಠೇಶ್ವರ ಸ್ನೇಹ ಬಳಗದಿಂದ ಆಯೋಜಿಸಿದ, ಸಾಮೂಹಿಕ ಸುನೇವು ಪೂಜಾ ಹಾಗೂ ಸಂತೋಷ ಕೂಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೆಲವು ದೊಡ್ಡ ಸಮಾಜ ಹಾಗೂ ಬಲಿಷ್ಠ ಸಮಾಜಗಳು, ಸಣ್ಣ ಸಣ್ಣ ಸಮಾಜಗಳ ಕೈಹಿಡಿದು ಮೇಲೆ ಎತ್ತುವ ಬದಲು ತಾವೇ ಬೆಳೆಯುತ್ತಾ ಹೊರಟಿವೆ. ಇದಕ್ಕೆ ಕಾರಣ ನಮ್ಮಲ್ಲಿನ ಒಗ್ಗಟ್ಟಿನ ಕೊರತೆ ಹಾಗಾಗಿ ಸಣ್ಣ, ಸಣ್ಣ ಹಿಂದುಳಿದ ಸಮಾಜಗಳು ಒಟ್ಟಾಗಬೇಕಿದೆ. ಸಣ್ಣ ಸಮಾಜಗಳ ಏಳಿಗೆಗಾಗಿ ನಾವು ಆಗಾಗ ಸೇರಿ ಚರ್ಚಿಸಬೇಕಿದೆ ಎಂದರು.
ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಜಿ.ಎಚ್. ಮರಿಯೋಜಿ ರಾವ್ ಮಾತನಾಡಿ, ಶ್ರೀ ನೀಲಕಂಠೇಶ್ವರ ಬಳಗದವರು ನಗರದ ವಿವಿಧ ಸಮಾಜಗಳ ಮುಖಂಡರ ಸಮ್ಮಿಲನದಲ್ಲಿ ಸಾಮೂಹಿಕ ಸುನೇವು ಪೂಜಾ ಹಾಗೂ ಸಂತೋಷ ಕೂಟ ಏರ್ಪಡಿಸಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಸಣ್ಣ ಸಮಾಜಗಳ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಸಹಕಾರ ಯಾವಾಗಲೂ ಇದೆ ಎಂದರು.
ಪರಸ್ಪರ ವಿವಿಧ ಸಮಾಜಗಳ ಮುಖಂಡರ ಸಮ್ಮಿಲನ ಹಾಗೂ ಕುರುಹಿನಶೆಟ್ಟಿ ಸಮಾಜದ ಕುಲಬಾಂಧವರೊಂದಿಗೆ ಔತಣಕೂಟ ಜೊತೆಗೆ ಸಮಾಜದ ಏಳಿಗೆಗಾಗಿ ವಿಚಾರ ವಿನಿಮಯ ಸಂತೋಷ ತಂದುಕೊಟ್ಟಿದೆ ಎಂದರು.
ಹರಿಹರದ ಆರ್ಯ ಈಡಿಗರ ಸಮಾಜದ ಅಧ್ಯಕ್ಷ ವೈ.ಕೃಷ್ಣಮೂರ್ತಿ, ದೇವಾಂಗ ಸಮಾಜದ ಅಧ್ಯಕ್ಷ ಪ್ರಕಾಶ್ ಕೋಳೂರು, ಕುರುಬರ ಸಮಾಜದ ಮುಖಂಡ ಕೆ.ಬಿ.ರಾಜಶೇಖರ್, ಸವಿತಾ ಸಮಾಜದ ಹಿರಿಯ ಮುಖಂಡ ಎಸ್.ಹನುಮಂತಪ್ಪ, ಆದಿ ಕರ್ನಾಟಕ ಸಮಾಜದ ಮುಖಂಡ ಎಚ್.ನಿಜಗುಣ, ನಗರಸಭೆ ಸದಸ್ಯ ಹನುಮಂತಪ್ಪ, ಎಸ್ಎಸ್ಕೆ ಸಮಾಜದ ಅಧ್ಯಕ್ಷ ನಾಗರಾಜ್ ಮೆಹರವಾಡೆ, ಮಡಿವಾಳ ಸಮಾಜ ಅಧ್ಯಕ್ಷ ಭೀಮಣ್ಣ, ಯಾದವ ಸಮಾಜದ ಮುಖಂಡ ಎಲ್.ಬಸಪ್ಪ ಚಿಕ್ಕಬಿದರಿ, ಬಲಿಜ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರಪ್ಪ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನೀಲಕಂಠೇಶ್ವರ ಬಳಗದ ಅಧ್ಯಕ್ಷ ಕೊಟ್ರಪ್ಪ ಕೊಟಗಿ ವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.