ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪ್ರತಿಯೊಬ್ಬರೂ ಜೀವನದಲ್ಲಿ ಸಾಧನೆ ಮಾಡಬೇಕೆಂದರೆ ಯಾವುದಾದರೂ ಅಡ್ಡಿ, ಆತಂಕಗಳು, ದೌರ್ಬಲ್ಯಗಳೇ ಹೆಚ್ಚು. ಅವುಗಳನ್ನು ಮೆಟ್ಟಿ ನಿಂತಾಗಲೇ ಮನುಷ್ಯ ಏನನ್ನಾದರೂ ಸಾಧಿಸಲು ಸಾಧ್ಯ. ಸಾಧನೆಗೆ ದೌರ್ಬಲ್ಯಗಳು ಅಡ್ಡಿಯಾಗದಿರಲಿ ಎಂದು ಬಾದಾಮಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಬಿ.ಪೂಜಾರ ಹೇಳಿದರು.ಪಟ್ಟಣದ ಬಾಲಕರ ಸರ್ಕಾರಿ ಪಪೂ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಲೂಕು ಆಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕು ಘಟಕ ಗುಳೇದಗುಡ್ಡ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಧನೆ ಶಿಖರ ಕೃತಿ ಅವಲೋಕನ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿ, ಕ್ರೀಡಾಪಟು ಅರುಣಿಮಾ ಸಿನ್ಹಾ ರೈಲು ಅಪಘಾತದಲ್ಲಿ ಕಾಲು ಕಳೆದುಕೊಂಡರೂ, ಕೃತಕ ಕಾಲು ಹಾಕಿಕೊಂಡು ಭಾರತದ ಅತೀ ಎತ್ತರದ ಎವರೆಸ್ಟ್ ಹಾಗೂ ಜಗತ್ತಿನ ಅತೀ ಎತ್ತರದ 6 ಶಿಖರ ಏರಿ ಸಾಧನೆ ಮಾಡಿದ್ದು ಮಹೋನ್ನತವಾಗಿದೆ. ಅವಳ ಸಾಧನೆ ಹಿಂದೆ ಸಾಕಷ್ಟು ನೋವು, ಕಷ್ಟ, ಅಪಮಾನ, ಅಪವಾದ ಇದ್ದರೂ ಅವುಗಳನ್ನು ಎದುರಿಸಿ ಸಾಧಿಸಿ ತೋರಿದಂತೆ ವಿದ್ಯಾರ್ಥಿಗಳಾದ ತಾವೂ ಜೀವನ ಎದುರಿಸಬೇಕು. ಕಷ್ಟಗಳಿಗೆ ಹಿಂಜರಿಯಬಾರದು. ತಂದೆತಾಯಿಯರ ಪರಿಶ್ರಮಕ್ಕೆ, ಗುರುಗಳ ಕನಸುಗಳಿಗೆ ನನಸಾಗುವಂತೆ ಸಾಧಿಸಿ ತೋರಿಸಬೇಕು. ವಿದ್ಯಾರ್ಥಿಗಳಿಗೆ ಸಾಧಿಸಬೇಕೆಂಬ ಛಲವಿರಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ವಿಠ್ಠಲ ಕಳಸಾ ಅಧ್ಯಕ್ಷತೆವಹಿಸಿ ಮಾತನಾಡಿ, ಅರುಣಿಮಾ ಸಿನ್ಹಾ ನಂತೆ ಪ್ರತಿಯೊಬ್ಬರೂ ತಮ್ಮ ಮುಂದಿನ ಗುರಿ ಮುಟ್ಟಲು ಪರಿಶ್ರಮ ಪಡಬೇಕು. ಮನಸೊಂದಿದ್ದರೆ ಮಾರ್ಗ ಇದ್ದೇ ಇರುತ್ತದೆ. ಗುರುಗಳ ಮಾರ್ಗದರ್ಶನ, ಆತ್ಮ ವಿಶ್ವಾಸ ಪ್ರತಿಯೊಬ್ಬರನ್ನು ಮೇಲ್ಮಟ್ಟಕ್ಕೆ ಒಯ್ಯುತ್ತವೆ ಎಂದರು. ಸಾಧನೆ ಶಿಖರ ಪುಸ್ತಕದ ಲೇಖಕ ಡಾ.ಸಿ.ಎಂ.ಜೋಶಿ ಕೃತಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಬಿ.ಡಿ. ಅಜ್ಜೋಡಿ ಉಪಸ್ಥಿತರಿದ್ದರು. ಸಿಂಚನಾ ಹಾಗೂ ಸಂಗಡಿಗರಿಂದ ಪ್ರರ್ಥನೆ ಜರುಗಿತು. ಶ್ರೀಕಾಂತ ಹುನಗುಂದ ಕಾರ್ಯಕ್ರಮ ನಿರೂಪಿಸಿದರು. ಬಿ.ವೈ.ಗೌಡರ ಸ್ವಾಗತಿಸಿ, ಕೊನೆಗೆ ವಂದಿಸಿದರು.