ಹೊಸ ತಳಿಯ ಸೋಂಕು ಸದ್ಯ ಯಾರಲ್ಲೂ ಇಲ್ಲ: ಆರೋಗ್ಯ ಇಲಾಖೆ
ಕೋವಿಡ್ ರೂಪಾಂತರಿ ಜೆಎನ್1 ತಳಿ ತೀವ್ರ ಸ್ವರೂಪದಲ್ಲಿದ್ದು, ಇದು ಹರಡದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಜೊತೆಗೆ ಜಿಲ್ಲಾದ್ಯಂತ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಬೆಡ್, ಆಕ್ಸಿಜನ್ ಘಟಕಗಳ ಸಿದ್ಧಪಡಿಸಿಟ್ಟುಕೊಳ್ಳಲು ಕೈಗಾರಿಕಾಭಿವೃದ್ಧಿ ಆಯುಕ್ತೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಆಸ್ಪತ್ರೆಗಳಲ್ಲೂ ವಿಶೇಷ ವಾರ್ಡ್ಗಳ ಸ್ಥಾಪಿಸುವ ಜೊತೆಗೆ ಎಲ್ಲ ವ್ಯವಸ್ಥೆಗಳ ಸನ್ನದ್ಧವಾಗಿಟ್ಟುಕೊಳ್ಳಿ ಎಂದರು.ಜಿಲ್ಲಾ ಆರೋಗ್ಯಾಧಿಕಾರಿ ಮಾತನಾಡಿ, ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ 1019 ಮಂದಿಗೆ ಕೋವಿಡ್ ಪರೀಕ್ಷೆ ಮಾಡಿಸಿದ್ದು, 22 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಇದರಲ್ಲಿ ರೂಪಾಂತರಿ ಜೆಎನ್1 ತಳಿ ಸೋಂಕು ಯಾರಲ್ಲೂ ಇಲ್ಲ. ಇಬ್ಬರು ಮಾತ್ರ ಇತರೆ ಕಾಯಿಲೆಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರಲ್ಲೂ ತೀವ್ರತರನಾದ ಸೋಂಕು, ಲಕ್ಷಣ ಇಲ್ಲ. ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ ಕಾಯ್ದಿರಿಸುವಂತೆ, ಪಿಎಂ ಕೇರ್ಸ್ನಡಿ ನೀಡಿದ್ದ ವೆಂಟಿಲೇಟರ್ಗಳ ಸನ್ನದ್ಧವಾಗಿಟ್ಟುಕೊಳ್ಳಲು ಸೂಚಿಸಿದೆ ಎಂದು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇದ್ದ ವೈದ್ಯರ ಹುದ್ದೆ ನೇರ ಸಂದರ್ಶನದಲ್ಲಿ ಭರ್ತಿ ಮಾಡಲಾಗಿದೆ. ತಜ್ಞ ವೈದ್ಯರು ನೇರ ಸಂದರ್ಶನಕ್ಕೆ ಬಾರದ ಕಾರಣ ಆ ಹುದ್ದೆ ಖಾಲಿ ಇವೆ. ತಾಯಿ, ಮಗುವಿನ ಮರಣ ಪ್ರಮಾಣ ಕಡಿಮೆ ಮಾಡಲು ಹೆರಿಗೆ ಆಸ್ಪತ್ರೆಯ ನಿಗಾ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸಲು ಆರೋಗ್ಯ ಅಭಿಯಾನದಡಿ ನಿವೃತ್ತ ತಜ್ಞ ವೈದ್ಯರ ನೇಮಿಸಲಾಗಿದೆ ಎಂದರು. ಅದಕ್ಕೆ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ, ತಾಯಿ-ಮಗುವಿನ ಮರಣ ಪ್ರಮಾಣ ಗಣನೀಯ ಇಳಿಕೆಯಾಗಬೇಕು. ಮರಣ ಪ್ರಕರಣಗಳ ಕಡ್ಡಾಯ ಆಡಿಟ್ ಮಾಡಿಸಬೇಕು ಎಂದು ಸೂಚಿಸಿದರು.
ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಲ್ಲಿ ದಾವಣಗೆರೆ ವಿಭಾಗದಿಂದ 2.9 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಇದರ ಬಾಬ್ತು ದಾವಣಗೆರೆ ವಿಭಾಗಕ್ಕೆ 55.79 ಕೋಟಿ ರು. ಭರಿಸಲಾಗಿದೆ ಎಂದರು. ಅದಕ್ಕೆ ಉಸ್ತುವಾರಿ ಕಾರ್ಯದರ್ಶಿಗಳು, ಹಾಸ್ಟೆಲ್ಗಳ ಬಳಿ ಬಸ್ಗಳ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ದೊಡ್ಡ ಬಸ್ಗಳು ಸಂಚರಿಸದ ಸ್ಥಳ, ರಸ್ತೆಯಾಗಿದ್ದಲ್ಲಿ ಮಿನಿ ಬಸ್ಗಳ ಸೇವೆ ಒದಗಿಸಿ ಎಂದು ಆದೇಶಿಸಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು, ಗೃಹಲಕ್ಷ್ಮಿಯಡಿ 384319 ಗುರಿ ನೀಡಿದ್ದು, 335022 ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಕೆವೈಸಿ, ಆಧಾರ್ ಲಿಂಗ್ ಮಾಡದ 4254 ಮಹಿಳೆಯರಿಗೆ ಹಣ ಸಂದಾಯವಾಗಿಲ್ಲ. ಅದನ್ನು ಸರಿಪಡಿಸುವ ಕೆಲಸವಾಗುತ್ತಿದೆ. ಅಕ್ಟೋಬರ್ವರೆಗೆ ತಲಾ 2 ಸಾವಿರದಂತೆ ಪಾವತಿಸಲಾಗಿದ್ದು, ಕೇಂದ್ರ ಕಚೇರಿಯಿಂದಲೇ ಎಲ್ಲಾ ಫಲಾನುಭವಿಗಳಿಗೆ ಹಣ ಪಾವತಿಸಲಾಗುತ್ತದೆ ಎಂದರು. ಆಗ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಮಾತನಾಡಿ, ಸಮಸ್ಯೆ ಇದ್ದಲ್ಲಿ ಕಚೇರಿಯಲ್ಲಿ ಜಿಲ್ಲಾ ಸಂಪರ್ಕ ಸಂಖ್ಯೆಯನ್ನು ಸಾರ್ವಜನಿಕರಿಗಾಗಿ ಆರಂಭಿಸಿ ಎಂದು ತಿಳಿಸಿದರು.
ಭತ್ತದ ಬೆಳೆಯನ್ನು ನೀರು ನಿಲ್ಲಿಸುವ ಪದ್ಧತಿಯಡಿ ಬೆಳೆಯಲಾಗಿದ್ದು, ಉತ್ತಮ ಇಳುವರಿ ಬಂದಿದೆ. ಭತ್ತ ಹೊಸ ಬೆಳೆ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಫ್ರೂಟ್ಸ್ನಡಿ ಶೇ.90ರಷ್ಟು ರೈತರನ್ನು ನೋಂದಾಯಿಸಲು, ಬೆಳೆ ಪರಿಹಾರದ ಹಣವನ್ನು ಮೊದಲ ಹಂತದಲ್ಲಿ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಡಾ.ಎಂ.ವಿ.ವೆಂಕಟೇಶ, ಜಿಲ್ಲಾಧಿಕಾರಿ