ಭೀಮಣ್ಣ ಗಜಾಪುರ
ಗಣೇಶ ಹುಟ್ಟಿ ಮೂರು ದಿನಗಳ ಆನಂತರ ಜೋಕುಮಾರ ಹುಟ್ಟುತ್ತಾನೆ. ಉತ್ತರ ಕರ್ನಾಟಕದಲ್ಲಿ ಗಂಗಾಮತಸ್ಥ (ಅಂಬಿಗ) ಮಹಿಳೆಯರು ಬುಟ್ಟಿಯಲ್ಲಿ ಜೋಕುಮಾರನ ಮೂರ್ತಿಯನ್ನು ಹೊತ್ತು ಮನೆ ಮನೆಗೆ, ಊರೂರುಗೆ ಹೋಗಿ ಜೋಕುಮಾರಸ್ವಾಮಿಯ ಹಾಡು ಹೇಳುವ ಪರಿ ಸೋಜಿಗ ಮೂಡಿಸುತ್ತದೆ.
ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆ ತುಂಬಿ ನಮ್ಮ ಗೊಡ್ಡುಗಳೆಲ್ಲಾ ಹೈನಾಗಿ ನನ್ನ ಕೊಮರ ನಿನ್ನ ಶೆಡ್ಡಿಯ ಮ್ಯಾಲ ಸಿರಿ ಬಂದು... ಮಳೆಯಿಂದ ರೈತರ ಬಾಳು ಹಸನಾಗುವ ಪರಿಯನ್ನು ಮಹಿಳೆಯರು ಈ ರೀತಿ ವರ್ಣಿಸುತ್ತಾರೆ.ಬೆಣ್ಣೆಯ ತಾ ನನ್ನ ಕಂದಾಗ, ಹೊನ್ನು ಮಾಳೀಗಿ ಮನೆಯವ್ವ, ಹೊನ್ನು ಮಾಳಿಗೆ ಮನೆಯವ್ವ ಮಲ್ಲವ್ವ, ನೀ ಬೆಣ್ಣೆಯ ತಾ ನನ್ನ ಕೊಮರಾಗ... ಎಂದು ಹಳ್ಳಿಗಾಡಿನ ರೈತ ಮಹಿಳೆಯರನ್ನು ವರ್ಣಿಸುವ ಜೋಕುಮಾರ ಪದಗಳ ಝಲಕ್ ಗಳೇ ಹಾಗೆ... ಮತ್ತೆ ಮುಂದುವರಿದು, ಶೆಟ್ಟು, ಶೆಟ್ಟುರೆಲ್ಲಾ ಕಟ್ಟಿ ಮ್ಯಾಲ ಕುಂತೆ, ನಿದ್ರೆ ಕಂದಾನ ಕರಿಸ್ಯಾರ, ನಿದ್ರೆ ಕಂದಾನ ಕರೆಸ್ಯಾರೆ ಕೇಳಿರವ್ವ, ಒಂದು ಉತ್ತರಿ ಮಳೆ ಗನುವಾಗಿ ಎಂದು ಜೋಕಪ್ಪನ ಮಹಿಳೆ ಸಾರುತ್ತಾರೆ.
ಮಳೆ ತರಿಸುವ ದೇವ: ಗಣೇಶನ ಹಬ್ಬದಲ್ಲಿ ಮಳೆ ಇಲ್ಲದೇ ಮುಗಿಲು ನೋಡುತ್ತಿರುವ ರೈತರು ಜೋಕುಮಾರಸ್ವಾಮಿ ಹಬ್ಬ ಬಂತೆಂದರೆ ಹರ್ಷಪಡುತ್ತಾರೆ. ಜೋಕಪ್ಪ ಮಳೆ ತರಿಸುತ್ತಾನೆ ಎಂಬ ಬಲವಾದ ನಂಬಿಕೆ ಈಗಲೂ ಉತ್ತರ ಕರ್ನಾಟಕದ ರೈತರಲ್ಲಿದೆ. ಜೋಕುಮಾರಸ್ವಾಮಿ ಕಾಮಚೇಷ್ಟೆಯಿಂದ ಮಹಿಳೆಯರನ್ನು ಕಾಡುತ್ತಿದ್ದ ಎಂದು ಜೋಕಪ್ಪನ ಜಾನಪದ ಹಾಡುಗಳಲ್ಲಿ ಗೊತ್ತಾಗುತ್ತದೆ. ಈತ ಹುಟ್ಟಿ ಏಳುದಿನ ಹಾಗೂ ಸತ್ತು ಏಳು ದಿನಗಳ ಸಮಯವನ್ನು ಜೋಕಪ್ಪನ ಅಳಲು ಎಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಹೊಸದಾಗಿ ಮದುವೆಯಾದ ಮಹಿಳೆಯರು ಈಗಲೂ ಗಂಡನ ಮನೆಯಲ್ಲಿ ಇರುವುದಿಲ್ಲ.
ಜೋಕುಮಾರನು ಹುಣ್ಣಿಮೆಯ ವಾರದ ಮೊದಲು ಹುಟ್ಟಿ ಅನಂತನ ಹುಣ್ಣಿಮೆಯಂದು ಸಾಯುತ್ತಾನೆ. ಜೋಕುಮಾರ ಸ್ವಾಮಿಯ ಪ್ರಸಾದವನ್ನು (ಚರಗ) ತೆಗೆದುಕೊಂಡು ಹೋಗಿ ಸೂರ್ಯ ಹುಟ್ಟೋ ಮುಂಚೆಯೇ ನಮ್ಮ ಹೊಲಗಳಲ್ಲಿ ಚೆಲ್ಲುತ್ತೇವೆ. ಚರಗ ಚೆಲ್ಲಿದರೆ ಬೆಳೆಗಳು ಹುಲುಸಾಗಿ ಬೆಳೀತಾವೆ ಎಂಬ ನಂಬಿಕೆ ನಮ್ಮಲ್ಲಿದೆ ಎಂದು ಕೂಡ್ಲಿಗಿಯ ರೈತ ಚೌಡಪ್ಪ ಹೇಳುತ್ತಾರೆ.