ಕಡಕೋಳ ಮಡಿವಾಳಪ್ಪ ನಾಡು ಕಂಡ ಅದ್ಭುತ ತತ್ವಪದಕಾರ

KannadaprabhaNewsNetwork | Published : Aug 23, 2024 1:07 AM

ಸಾರಾಂಶ

ಹಿರಿಯೂರು ತಾಲೂಕಿನ ಮರಡಿದೇವಿಗೆರೆ ಕೊಡಿ ಮಲ್ಲೇಶ್ವರ ದೇವಸ್ಥಾನದಲ್ಲಿ ನಡೆದ ಅನುಭಾವ ಶ್ರಾವಣ ಸರಣಿ ಚಿಂತನ ಮಾಲೆ ಕಾರ್ಯಕ್ರಮವನ್ನು ಡಾ.ಬಸವಕುಮಾರ ಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭವಾರ್ತೆ ಹಿರಿಯೂರು

ಕಡಕೋಳ ಮಡಿವಾಳಪ್ಪ ಮತ್ತು ಸರ್ಪಭೂಷಣ ಶಿವಯೋಗಿಗಳು ನಾಡು ಕಂಡ ಅದ್ಭುತ ತತ್ವಪದ ರಚನೆಕಾರರು. ನಮ್ಮ ಬದುಕನ್ನು ಹಸನಾಗಿಸಿಕೊಳ್ಳಲು ಅವರ ತತ್ವಪದಗಳನ್ನ ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕಾಗಿದೆ ಎಂದು ಶಿಕ್ಷಕ ಹಾಗೂ ಕಲಾವಿದ ಅಮಕುಂದಿ ಗಂಗಾಧರ ಅಭಿಪ್ರಾಯಪಟ್ಟರು.

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ತಾಲೂಕಿನ ಮರಡಿದೇವಿಗೆರೆ ಕೋಡಿ ಮಲ್ಲೇಶ್ವರ ದೇವಸ್ಥಾನದಲ್ಲಿ ನಡೆದ ಅನುಭಾವ ಶ್ರಾವಣ ಸರಣಿ ಚಿಂತನ ಮಾಲೆಯ ಕಾರ್ಯಕ್ರಮದಲ್ಲಿ ಸರ್ಪಭೂಷಣ ಶಿವಯೋಗಿಗಳು ಕುರಿತು ಮಾತನಾಡಿದ ಅವರು, ಶಿವಯೋಗಿಗಳು ರಚಿಸಿದ ಸಾತ್ವಿಕ -ತಾತ್ವಿಕ ವೈಚಾರಿಕ ದೈವಿಕ ತತ್ವಪದಗಳು, ಇಂದಿನ ಪದವಿಗೆ ಸಮಾನ. ಎಂಥದ್ದೇ ಕಷ್ಟ ಬಂದರೂ ಕೂಡ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಒಂದು ನಾಯಿ ಮನೆಯಿಂದ ಮನೆಗೆ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಅಲೆದಾಡುತ್ತದೆ. ಆದರೆ ಅದು ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ. ಬೇರೊಂದು ಮನೆಯಲ್ಲಿ ಅದಕ್ಕೆ ಊಟ ಸಿಕ್ಕೇ ಸಿಗುತ್ತದೆ. ಮಾನವರಾದ ನಾವು ಕೂಡ ಅದರಂತೆ ಆತ್ಮವಿಶ್ವಾಸ ಕಳೆದುಕೊಳ್ಳದೇ ದೃಢವಾದ ವಿಶ್ವಾಸ ಹೊಂದಬೇಕು ಎಂದರು.

ನಿಜಗುಣ ಶಿವಯೋಗಿಗಳ ಕೈವಲ್ಯವನ್ನ ತಮ್ಮ ತತ್ವ ಪದಗಳಿಗೆ ಅಳವಡಿಸಿಕೊಂಡು ಅದನ್ನು ಮುಂದುವರಿಸಿದ ಕೀರ್ತಿ ನಮ್ಮ ಸರ್ಪಭೂಷಣ ಶಿವಯೋಗಿಗಳಿಗೆ ಸಲ್ಲಬೇಕು. ಬೆಂಗಳೂರಿನ ಬಾಣಾವರದಲ್ಲಿ ಹುಟ್ಟಿ ಸಮಾಜಕ್ಕೆ ಅತ್ಯದ್ಭುತವಾದ ತತ್ವಪದಗಳನ್ನು ನೀಡಿದವರು. ಅನೇಕ ವರ್ಷಗಳ ಕಾಲ ಸಂಚಾರ ಮಾಡಿ ಗುರುಸಿದ್ದ ಎಂಬ ಅಂಕಿತದೊಂದಿಗೆ ಪದಗಳನ್ನು ರಚಿಸಿದರು. ನಮ್ಮ ಈಗಿನ ಮಕ್ಕಳಿಗೆ ಇಂತಹ ವೇದಿಕೆಗಳ ಮೂಲಕ ಸಂಸ್ಕಾರ ಕೊಟ್ಟರೆ ಗುರು ಪರಂಪರೆ ಮತ್ತು ಆಧ್ಯಾತ್ಮ ಚಿಂತನೆ ಉಳಿಯುತ್ತದೆ ಎಂದು ಹೇಳಿದರು.

ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಶಿವಯೋಗಿ ನಡೆಸುವ ಪೂಜೆ ಶಿವಯೋಗ. ಆ ಪೂಜೆ ನಿಲ್ಲುವುದೇ ಇಲ್ಲ ಅದು ನಿರಂತರ. ಯಾವುದು ನಿರಂತರ ಅದೇ ಶಿವಯೋಗ. ನಮ್ಮ ನಾಡಿನಲ್ಲಿ ಯೋಗಿತ್ರಯರೆಂದು ಪ್ರಸಿದ್ಧರಾಗಿದ್ದವರು ಶಿವಯೋಗಿ ಸಿದ್ದರಾಮೇಶ್ವರರು, ಯಡಿಯೂರು ಸಿದ್ದಲಿಂಗೇಶ್ವರರು ಹಾಗೂ ಸರ್ಪಭೂಷಣ ಶಿವಯೋಗಿಗಳು ಎಂದರು.

ಐಮಂಗಲದ ಹರಳಯ್ಯ ಸ್ವಾಮೀಜಿಯವರು ಮಾತನಾಡಿ, ಸುಮಾರು 200 ವರ್ಷಗಳ ಹಿಂದೆ ಸರ್ಪಭೂಷಣ ಶಿವಯೋಗಿಗಳು ಜೀವಿಸಿದ್ದರು. ಗುರುಸಿದ್ದ ಸ್ವಾಮೀಜಿಯವರಿಂದ ದೀಕ್ಷೆ ಪಡೆದು 20 ವರ್ಷಗಳ ಕಾಲ ದೇಶ ಸಂಚಾರ ಮಾಡುತ್ತಾ, ಕಾಶಿ, ಕೇದಾರ, ಋಷಿಕೇಶ ,ಆಂಧ್ರ ಹೀಗೆ ಸುಂದರ ಮತ್ತು ಪ್ರಶಾಂತ ವಾತಾವರಣದಲ್ಲಿ ಸಾಹಿತ್ಯ ರಚಿಸಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ನಿಜಗುಣ ಶಿವಯೋಗಿಯವರ ಕೈವಲ್ಯದ ಆಧಾರದ ಮೇಲೆ ಅನೇಕ ತತ್ವಪದಗಳನ್ನ ರಚಿಸಿದರು. ಅದರಲ್ಲಿ ವಿಶೇಷವಾದುದೆಂದರೆ ಕೈವಲ್ಯವಲ್ಲರಿ ಎಂದರು.

ಈ ವೇಳೆ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯ ಡಾ. ಬಸವ ಕುಮಾರ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ, ಗ್ರಾಮದ ಶಂಭುಲಿಂಗಪ್ಪ, ಶಿವಣ್ಣ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ದೇವಾಲಯದ ಸುತ್ತಮುತ್ತ ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ತಜ್ಞರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.

Share this article