ಕಸ ತೆಗೀರಿ ಅಂತಾ ಲೋಕಾಯುಕ್ತ ಎಸ್ಪಿ ಹೇಳಬೇಕಾ?

KannadaprabhaNewsNetwork | Published : Aug 3, 2024 12:33 AM

ಸಾರಾಂಶ

ಕಲಬುರಗಿ ನಗರದ ವಿವಿಧೆಡೆ ಲೋಕಾಯುಕ್ತ ಎಸ್ಪಿ ಆಂಥೋಣಿ ಭೇಟಿ, ಪ್ಲಾಸ್ಟಿಕ್‌ ರಾಶಿ ನೋಡಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಸಾರ್ವಜನಿಕರಿಗೆ ನೀರು ನಿಂತ ವಾಸನೆ ಬರಲ್ಲವೇ? ಎಂದು ಪಾಲಿಕೆ ಸಿಬ್ಬಂದಿಗೆ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ನಗರದ ವಾರ್ಡ್ ನಂಬರ್ 24 ರಲ್ಲಿ ಬರುವ ಸೂಪರ್ ಮಾರ್ಕೆಟ್, ಮೇನ್ ರೋಡ್, ಸೆಂಟ್ರಲ್, ಪೋಸ್ಟ್‌ ಆಫೀಸ್, ಮಾರ್ಕೆಟ್, ನಗರ ಬಸ್‌ ನಿಲ್ದಾಣದಲ್ಲಿ ಶುಕ್ರವಾರ ಕಲಬುರಗಿ ಲೋಕಾಯುಕ್ತ ಎಸ್ಪಿ ಜಾನ್ ಆಂಟೋನಿ ದಿಢೀರ್‌ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಕಸ ಮತ್ತು ಪ್ಲಾಸ್ಟಿಕ್ ವಸ್ತು ರಾಶಿ ರಾಶಿಯಾಗಿ ಬಿದ್ದಿರುವುದನ್ನು ಕಂಡು ಕೆಂಡ ಕಾರಿದರು.

ಮಾರ್ಕೆಟ್‌ನಲ್ಲಿ ಮಳೆಗಾಲದಲ್ಲಿ ಸಾಕಷ್ಟು ನೈರ್ಮಲ್ಯ ಸಮಸ್ಯೆ ಆಗುತ್ತದೆ. ಸಾರ್ವಜನಿಕರಿಗೆ ನೀರು ನಿಂತ ವಾಸನೆ ಬರಲ್ಲವೇ? ಎಂದು ಪಾಲಿಕೆ ಸಿಬ್ಬಂದಿಗೆ ಪ್ರಶ್ನಿಸಿದರು. ಮಹಾನಗರ ಪಾಲಿಕೆ ವಲಯ 3 ಇಲ್ಲಿನ ರ್ನೈರ್ಮಲ್ಯ ಇನ್ಸ್‌ಪೆಕ್ಟರ್‌ ಮಲ್ಲಿಕಾರ್ಜುನ್‌ ಅವರಿಗೆ ಸ್ಥಳಕ್ಕೆ ಕರೆಸಿ ನೀನು ಏನು ಮಾಡ್ತಿದ್ದೀಯಾ? ಕಸ ಎಲ್ಲ ರಾಶಿ ರಾಶಿ ಬಿದ್ದಿದೆ. ಪ್ಲಾಸ್ಟಿಕ್ ಗಳು ಬಳಕೆಯಲ್ಲಿ ಇವೆ, ಅಂಥವರಿಗೆ ಯಾರಿಗೆ ಎಷ್ಟು ಫೈನ್ ಹಾಕಿದ್ದೀಯಾ? ಪ್ಲಾಸ್ಟಿಕ್ ಬ್ಯಾನ್ ಆಗಿಲ್ಲವೇ!ನೀನೇನ್ ಕೆಲಸ ಮಾಡ್ತಿದ್ದೀಯಾ? ಎಂದು ಪ್ರಶ್ನಿಸಿ ಎಸ್.ಪಿ ಜಾನ್ ಆಂಥೋನಿ ಪಾಲಿಕೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು.

ಮಹಾನಗರ ಪಾಲಿಕೆ ನೈರ್ಮಲ್ಯ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ ಮಾತನಾಡಿ, ಕಸ ಎಲ್ಲ ತೆಗೆಸಿದ್ದೀನಿ, ಪ್ಲಾಸ್ಟಿಕ್ ಅಂಗಡಿಗೆ ಹೋಗಿ ಫೈನ್ ಹಾಕ್ತೀನಿ ಸಂಬಂಧಪಟ್ಟವರಿಗೆಲ್ಲರಿಗೂ ನೋಟಿಸ್ ಕೊಡ್ತೀನಿ ಎಂದು ನೈರ್ಮಲ್ಯ

ಲೋಕಾ ತಂಡಕ್ಕೆ ಸಮಾಜಯಿಷಿ ಉತ್ತರ ನೀಡಿದರು.

ಮನೆಯ ಮಾಲೀಕರು ಕಟ್ಟಡ ಕಟ್ಟುತ್ತಿದ್ದು, ಮಾರ್ಕೆಟ್, ರೋಡ್‌ ಮೇಲೆ, ಕಲ್ಲು, ಸ್ಟೀಲ್‌, ಜಲ್ಲಿ ಮರಳು ಹಾಕಿದ್ದಾರೆ. ಯಾರಾದ್ರೂ ಸಾರ್ವಜನಿಕರು ಬೈಕ್ ಇಂದ ಜಾರಿ ಬಿದ್ದರೆ ಹೊಣೆ ಯಾರು? ನಿನ್ನ ಕೆಲಸ ನೀನು ಚೆನ್ನಾಗಿ ಮಾಡು. ಆದರೆ, ರಸ್ತೆಯಲ್ಲಿ ಕಸ, ಜಲ್ಲಿ, ನೋಡಲ್ಲವೇ. ಅದು ನಿನ್ನ ಕರ್ತವ್ಯ ಅಲ್ಲವೆ? ಮಾರ್ಕೆಟ್‌ನಲ್ಲಿ ಕಸ ತೆಗಿ ಅಂತ ಎಸ್ಪಿ ಹೇಳಬೇಕಾ? ಎಂದು ಎಸ್‌.ಪಿ ಜಾನ್ ಆಂಥೋನಿ ಇನ್ಸ್‌ಪೆಕ್ಟರ್‌ ಮಲ್ಲಿಕಾರ್ಜುನ್‌ಗೆ ಖಾರವಾಗಿ ಪ್ರಶ್ನೆ ಮಾಡಿದರು.ಈ ವೇಳೆ ಪೊಲೀಸ್ ಸಿಬ್ಬಂದಿ, ಬಸವರಾಜ್, ರಾಣೋಜಿ, ವಸಂತ್ ಕುಮಾರ್, ಸಾರ್ವಜನಿಕರು ಸ್ಥಳದಲ್ಲಿ ಇದ್ದರು.

Share this article