ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ತಲುಪಬೇಕಾದರೆ ಗುರು ಮುಖ್ಯವಾಗಿದ್ದು. ಗುರುಸ್ಮರಣೆಯೊಂದಿಗೆ ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು ಎಂದು ಶ್ರೀ ಕಾಗಿನೆಲೆ ಕನಕ ಗುರುಪೀಠದ ಮೈಸೂರು ವಿಭಾಗದ ಗುರುಗಳಾದ ಶ್ರೀ ಶಿವನಂದಾಪುರಿ ಸ್ವಾಮೀಜಿ ಹೇಳಿದರು.ಕುವೆಂಪುನಗರದಲ್ಲಿರುವ ಕಾಳಿದಾಸ ವಿದ್ಯಾಸಂಸ್ಥೆಯಲ್ಲಿ ನಡೆದ ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮೀಜಿ ಅವರ 17ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪ್ರಥಮ ಪೀಠಾಧ್ಯಕ್ಷರಾಗಿದ್ದ ಶ್ರೀಗಳ ತಪೋಶಕ್ತಿ ಶ್ರಮ ಆಶೀರ್ವಾದದಿಂದ ಈ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತಿದ್ದು, ರಾಜ್ಯಾದಂತ್ಯ ಶಿಕ್ಷಣ ಸಂಸ್ಥೆಗಳು, ಸಮುದಾಯ ಭವನಗಳು, ಉಚಿತ ತರಬೇತಿ ಕೇಂದ್ರಗಳು ಹಾಸ್ಟೆಲ್ ಗಳನ್ನು ನಿರ್ಮಾಣ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ನಮ್ಮ ಸಂಸ್ಥೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಡಿಯೂರಪ್ಪ ಅವರ ಸರ್ಕಾರ, ಸಮಾಜ, ಶಿಕ್ಷಕವೃಂದ ಜಾತ್ಯಾತೀತವಾಗಿ ಸಹಾಯ ಮಾಡುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಶಿಸ್ತಿನಿಂದ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ತಂದೆ ತಾಯಿಗೆ ಸಂಸ್ಥೆಗೆ ಗೌರವ ತರುವಂತಹ ಕೆಲಸ ಮಾಡಬೇಕು ಎಂದರು.ಶ್ರೀ ಕಾಳಿದಾಸ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಪುಟ್ಟಬಸವೇಗೌಡ ಮಾತನಾಡಿ, ನಮ್ಮ ಕನಕ ಗುರುಪೀಠದ ಮೂಲ ಪುರುಷರಾದ ಶ್ರೀಗಳ ಆಶೀರ್ವಾದದಿಂದ ಶ್ರೀ ಶಿವಾನಂದಪುರಿ ಸ್ವಾಮೀಜಿಗಳು ಶಿಕ್ಷಣ ಸಂಸ್ಥೆಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಸಮಾಜದ ಏಳ್ಗೆಗೆ ಶ್ರಮಿಸುತ್ತಿದ್ದಾರೆ ಎಂದರು.
ಡಾ.ಎಸ್. ಸೆಲ್ವಕುಮಾರ್ ಮತ್ತು ಡಾ.ಎಸ್. ಪ್ರೇಮ್ ಕುಮಾರ್ ಅವರು ಸಂಸ್ಥೆಗೆ ಕಂಪ್ಯೂಟರ್ ಮೈಕ್ ಸೆಟ್ ಪೋಡಿಯಂ ದಾನವಾಗಿ ನೀಡಿದರು.ಪ್ರಾಂಶುಪಾಲೆ ಡಾ.ಕೆ.ಕೆ. ವಿಶಾಲಾಕ್ಷಿ, ಡಾ.ಎಸ್.ಎಂ. ಶರತ್ ಕುಮಾರ್, ರವಿಶಂಕರ್, ಜಿ.ಎಂ. ನಾಗೇಶ್, ಚಂದ್ರಶೇಖರ್, ರಾಮೇಗೌಡ, ಮಂಜುನಾಥ್, ಕೃಷ್ಣಮೂರ್ತಿ, ಬಸವರಾಜು, ಮೋಹನ್, ಮಹಾದೇವ, ಅಣ್ಣಾಜಿ ಇದ್ದರು.