ರಿಪ್ಪನ್‍ಪೇಟೆಯಲ್ಲಿ ಮೊಳಗಿದ ಕನ್ನಡ ಡಿಂಡಿಮ

KannadaprabhaNewsNetwork | Published : Nov 10, 2024 1:58 AM

ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರದ ಭವ್ಯ ಮೆರವಣಿಗೆಗೆ ಪಿಎಸ್‍ಐ ಪ್ರವೀಣ್‍ಕುಮಾರ್ ಚಾಲನೆ

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಇಲ್ಲಿನ ಕಸ್ತೂರಿ ಕನ್ನಡ ಸಂಘದ 4ನೇ ವರ್ಷದ ವಾರ್ಷೀಕೋತ್ಸವ ಮತ್ತು ಡಾ.ಪುನಿತ್ ಆಭಿಮಾನಿ ಬಳಗ ಆಶ್ರಯದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.

ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರದ ಭವ್ಯ ಮೆರವಣಿಗೆಗೆ ಪಿಎಸ್‍ಐ ಎಸ್.ಪಿ.ಪ್ರವೀಣ್‍ಕುಮಾರ್ ಕನ್ನಡ ದ್ವಜವನ್ನು ಎತ್ತಿ ಹಿಡಿಯುವ ಮೂಲಕ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನ ಮತ್ತು ಅಂಗನವಾಡಿ ಮತ್ತು ಪ್ರಾಥಮಿಕ ಶಾಲಾ ಮಕ್ಕಳ ವಿವಿಧ ವೇಷ ಭೂಷಣದೊಂದಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳ ಮುಗಿಲು ಮುಟ್ಟುವ ಕನ್ನಡ ಜಯಘೋಷಣೆಯ ಮಧ್ಯ ಕನ್ನಡ ನುಡಿ ಜಾತ್ರೆ ಸಾರ್ವಜನಿಕರನ್ನು ಪುಳಕಿತರನ್ನಾಗಿಸಿತು.

ನಂತರ ಭೂಪಾಳಂ ಚಂದ್ರಶೇಖರಯ್ಯ ಸಭಾ ಭವನದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಸಭಾ ಕಾರ್ಯಕ್ರಮ ಜರುಗಿತು.

ಸಭಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಹೊಸನಗರ ವೃತ್ತ ನಿರೀಕ್ಷಕ ಗುರಣ್‍ ಹೆಬ್ಬಾಳ್ ಮತ್ತು ಹಿರಿಯ ಸಾಹಿತಿ ನಿವೃತ್ತ ಪೊಲೀಸ್ ಅಧಿಕಾರಿ ಹ.ಆ.ಪಾಟೀಲ, ಕನ್ನಡ ರಾಜ್ಯೋತ್ಸವಕ್ಕೆ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಿತ್ಯ ಭಾಷೆಯಾಗಬೇಕು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ಭಾಷೆಯನ್ನು ಬೆಳಸಿ ಉಳಿಸಲು ಮೊದಲು ಕನ್ನಡಿಗರಾಗಿ ಕನ್ನಡೇತರಿಗೆ ಕನ್ನಡವನ್ನು ಕಲಿಸಲು ಪ್ರಯತ್ನಿಸುವ ಮೂಲಕ ಕನ್ನಡ ವಾತಾವರಣವನ್ನು ನಿರ್ಮಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಹಾಗೂ ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷೆ ಧನಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪಿಯುಸಿ ಕಾಲೇಜಿನ ಪ್ರಾಚಾರ್ಯ ವಾಸುದೇವ ಅವರನ್ನು ಸನ್ಮಾನಿಸಿದರು. ಮುಖ್ಯ ಆತಿಥಿಗಳಾಗಿ ಗ್ರಾಪಂ ಉಪಾಧ್ಯಕ್ಷ ಸುದೀಂದ್ರ ಪೂಜಾರಿ, ಬಾಳೂರು ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಅಚಾರ್, ಚಿಕ್ಕಜೇನಿ ಗ್ರಾಪಂ ಅಧ್ಯಕ್ಷ ಎನ್.ಪಿ.ರಾಜು, ಕೆಂಚನಾಲ ಗ್ರಾಪಂ ಅಧ್ಯಕ್ಷ ಉಭೇದುಲ್ಲಾ ಷರೀಫ್, ಅರಸಾಳು ಗ್ರಾಪಂ ಅಧ್ಯಕ್ಷ ಜಯಮ್ಮ, ಗ್ರಾಪಂ ಸದಸ್ಯರಾದ ಎನ್.ಚಂದ್ರೇಶ್, ಬೆಳ್ಳೂರು ಗ್ರಾಪಂಅಧ್ಯಕ್ಷ ವಿನಂತಿ ರಾಘವೇಂದ್ರ, ನಾಡಕಚೇರಿ ಉಪ ತಹಸೀಲ್ದಾರ್ ಗೌತಮ್, ನರಸಿಂಹ, ಮಂಜುನಾಥ ಕಾಮತ್, ಚಾಬುಸಾಬ್, ಜಿ.ಎಸ್.ವರದರಾಜ್, ಎನ್.ವರ್ತೇಶ್, ಬಿ.ಮಂಜಪ್ಪ, ಎಂ.ಬಿ.ಮಂಜುನಾಥ, ಆರ್.ಈ.ಈಶ್ವರಶೆಟ್ಟಿ, ಎನ್.ಸತೀಶ್, ಗ್ರಾಪಂ ಸದಸ್ಯರು ಕಸ್ತೂರಿ ಕನ್ನಡ ಸಂಘದ ಪದಾಧಿಕಾರಿಗಳು ಹಾಗೂ ಪುನೀತ್ ರಾಜ್ ಬಳಗದ ಪದಾಧಿಕಾರಿಗಳು ಹಾಜರಿದ್ದರು.