ಕನ್ನಡಪ್ರಭ ವಾರ್ತೆ ಗೋಕಾಕ
ಕನ್ನಡ ನಾಡು ಕಾವೇರಿಯಿಂದ ಹಿಡಿದು ಗೋದಾವರಿವರೆಗೆ ಹಬ್ಬಿತ್ತು ಎಂಬುದಕ್ಕೆ ಮಹಾರಾಷ್ಟ್ರದಲ್ಲಿ ಸಿಕ್ಕಿರುವ ಅರ್ಧದಷ್ಟು ಶಾಸನಗಳು ಕನ್ನಡದಲ್ಲಿ ದೊರೆತಿರುವುದು ಸಾಕ್ಷಿ. ಕನ್ನಡ ಉಳಿಯಬೇಕೆಂದರೆ ಕನ್ನಡ ಶಾಲೆಗಳನ್ನುಉಳಿಸಿ, ಬೆಳೆಸಬೇಕು ಎಂದು ಹಿರಿಯ ಸಾಹಿತಿ ಡಾ.ಗುರುಪಾದ ಮರಿಗುದ್ದಿ ಹೇಳಿದರು.ಭಾನುವಾರ ಅಂಕಲಗಿ ಪಟ್ಟಣದಲ್ಲಿ ಸಪ್ತಪದಿ ಕಲ್ಯಾಣ ಮಂಟಪದ ಬಸವರಾಜ ಕಟ್ಟಿಮನಿ ಪ್ರಧಾನ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋಕಾಕ ತಾಲೂಕು ಘಟಕದ ಹಮ್ಮಿಕೊಂಡ ಗೋಕಾಕ ತಾಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಈಗಾಗಲೇ ಸರ್ಕಾರ, ಸಾಹಿತ್ಯ ಪರಿಷತ್ ಸೇರಿದಂತೆ ಇತರ ಸಂಘಟನೆಗಳು ಕನ್ನಡ ಉಳಿಸಿ, ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿವೆ ಎಂದರು.
ಕುಂದರನಾಡಿನ ಕಂದ ಬಸವರಾಜ ಕಟ್ಟಿಮನಿ ಅವರು ಹುಟ್ಟಿ ಬೆಳೆದ ನಾಡಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿರುವುದು ಅತ್ಯಂತ ಸಂತೋಷದ ಸಂಗತಿ, ಅವರ ಸಾಹಿತ್ಯದಿಂದ ಸಾಹಿತ್ಯ ಕ್ಷೇತ್ರ ಶ್ರೀಮಂತವಾಗಿದೆ ಎಂದರು.ಸಾನ್ನಿಧ್ಯ ವಹಿಸಿ ಮಾತನಾಡಿದ ಘಟಪ್ರಭಾ ಗುಬ್ಬಲಗುಡ್ಡದ ಕೆಂಪಯ್ಯ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬಸವಾದಿ ಶಿವಶರಣರು ಬರೆದ ವಚನಗಳ ಮೂಲಕ ಕನ್ನಡ ಭಾಷೆ ಉಳಿದಿದೆ, ಸಂಸ್ಕಾರ ನೀಡುವ ಭಾಷೆ ಕನ್ನಡ. ಕನ್ನಡ ಭಾಷೆ ಗೋಷ್ಠಿಗಳಿಗೆ ಮಾತ್ರ ಸೀಮಿತವಾಗದೆ, ಮಕ್ಕಳಿಗೆ ಕನ್ನಡ ಭಾಷೆ ಕಲಿಸಬೇಕು. ಕನ್ನಡದ ಸಾಹಿತ್ಯ ಪರಿಷತ್ ಸೇರಿ ಬೇರೆ ಸಂಘಟನೆಗಳು ಕನ್ನಡ ಭಾಷೆಯಲ್ಲಿರುವ ಪುಸ್ತಕಗಳನ್ನು ಅನ್ಯ ಭಾಷೆಯಲ್ಲಿ ಅನುವಾದ ಮಾಡಬೇಕು. ಕನ್ನಡ ಭಾಷೆಗೆ ಬಹಳಷ್ಟು ಶಕ್ತಿ ಇದ್ದು, ಭಾಷೆ ಉಳಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದ ಅವರು, ಈ ಸಮ್ಮೇಳನ ರಾಜ್ಯಮಟ್ಟದ ಸಮ್ಮೇಳನದಂತೆ ಸುವರ್ಣಾರಕ್ಷದಲ್ಲಿ ಬರೆದಿಡುವಂತಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ವಹಿಸಿದ್ದರು.ಇದೇ ಸಂದರ್ಭದಲ್ಲಿ ಸಮ್ಮೇಳನದಲ್ಲಿ ಗೋಕಾಕ ತಾಲೂಕಿನಲ್ಲಿ ಕನ್ನಡ ಸಂಸ್ಕೃತಿ ಭವನ ನಿರ್ಮಾಣ, ಶತಮಾನ ಕಂಡ ಕನ್ನಡದ ಶಾಲೆಗಳನ್ನು ಅಭಿವೃದ್ಧಿ ಗೋಳಿಸುವುದು, ಕೇಂದ್ರ ಸರಕಾದ ನೀಟ್, ಮತ್ತು ಜೆಡ್ಬ್ಯೂ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅನುಮತಿ ನೀಡಬೇಕು ಎಂಬ ಮೂರು ನಿರ್ಣಯ ಮಂಡಿಸಲಾಯಿತು.ಸಮ್ಮೇಳನದ ಸರ್ವಾಧ್ಯಕ್ಷ ಶಿವಲಿಂಗಪ್ಪ ಭಾವಿಕಟ್ಟಿ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಭೀಮಗೌಡ ಪೋಲಿಸ್ ಗೌಡರ, ಸಾಹಿತ್ಯ ಪರಿಷತ್ ಅಧ್ಯಕ್ಷೆ ಭಾರತಿ ಮದಬಾವಿ, ಸಿ.ಎಸ್. ನಾಯಿಕ, ವಿಶ್ವನಾಥ ಕಡಕೋಳ, ಶಾಮಾನಂದ ಪೂಜಾರಿ, ಮಹಾಂತೇಶ ತಾವಂಶಿ, ಹೇಮಾ ಅಲ್ಲನ್ನವರ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಭರಮಪ್ಪ ತೋಳಿ, ಬಾಳಗೌಡ ಪಾಟೀಲ, ಬಸವರಾಜ ಕೊಳವಿ, ಲಕ್ಕಣ್ಣಾ ಪೂಜಾರಿ ಉಪಸ್ಥಿತರಿದ್ದರು.