ಸಿದ್ದಾಪುರ: ಕಾಶ್ಯಪ ಪರ್ಣಕುಟಿ ಹಠವಾದಿ, ಛಲವಾದಿಯಾಗಿ ೭೦ರ ಸಾರ್ಥಕ್ಯ ಜೀವನ ಕಳೆದಿದ್ದಾರೆ. ಹತ್ತಿರದಿಂದ ಅವರನ್ನು ಕಂಡವರಿಗೆ ಹೂವಿನಂತಹ ಮೃದುತ್ವ ಕಂಡುಬರುತ್ತದೆ. ನಾಸ್ತಿಕನಂತೆ ಕಂಡುಬರುವ ಅವರು ಪೂಜೆ ಪುನಸ್ಕಾರಗಳ ಮೂಲಕ ಆಸ್ತಿಕತನ ಮೆರೆದಿದ್ದಾರೆ ಎಂದು ಯಲ್ಲಾಪುರ ಸಂಕಲ್ಪದ ಪ್ರಮೋದ ಹೆಗಡೆ ಹೇಳಿದರು.
ವಿ. ಕೃಷ್ಣ ಭಟ್ಟ ಅಡವಿತೋಟ ಮಾತನಾಡಿ, ಮನುಷ್ಯ ತನ್ನ ಬದುಕಿನ ಜೀವನದುದ್ದಕ್ಕೂ ಪ್ರಪಂಚದಿಂದ ಕಲಿಯುವುದು, ಅನುಭವಿಸುವುದು ಬಹಳಷ್ಟಿದೆ. ಆದರೆ ತನ್ನನ್ನು ತಾನು ಕಂಡುಕೊಳ್ಳುವ ಆತ್ಮಾನುಸಂಧಾನವೂ ಅಗತ್ಯ ಎಂದರು.
ಜ್ಯೋತಿಷಿ ಕಮಲಾಕರ ಭಟ್ಟ ಮಾತನಾಡಿ, ಆಡಂಬರದಿಂದ ದೂರ ಉಳಿದು ಭಕ್ತಿ- ಶ್ರದ್ಧೆಯಿಂದ ಬದುಕುವ ಜೀವನ ಶ್ರೇಷ್ಠವಾಗಿದ್ದು, ಆ ಜೀವನವನ್ನು ಜಿ.ಕೆ. ಭಟ್ಟ ಅವರು ಸಾಧಿಸಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಜಿ.ಕೆ. ಭಟ್ಟ ದಂಪತಿಯನ್ನು ಗೌರವಿಸಿ ಮಾತನಾಡಿ, ಎಡಪಂಥೀಯರು ನಾಸ್ತಿಕರು ಅನ್ನುವಂತಿಲ್ಲ. ಕೇರಳದಲ್ಲಿಯ ನಂಬೂದರಿಗಳು ಕಮ್ಯುನಿಸ್ಟ್ ಸಿದ್ಧಾಂತವನ್ನು ನೆಚ್ಚಿಕೊಂಡರೂ ದೇವರನ್ನು ಪೂಜಿಸಿ, ಆರಾಧಿಸುತ್ತಾರೆ. ಅಂತೆಯೇ ಜಿ.ಕೆ. ಭಟ್ಟ ಅವರದ್ದು ಎಡಪಂಥೀಯ ವಿಚಾರಧಾರೆಯಾದರೂ ಬಲಪಂಥೀಯರೊಂದಿಗೆ ಸಂಪರ್ಕ- ಒಡನಾಟ ಇಟ್ಟುಕೊಂಡವರು. ಮಾನವೀಯ ಮೌಲ್ಯ ಅಳವಡಿಸಿಕೊಂಡವರು ಎಂದರು.