ಕಟೀಲು: ಮಯೂರಯಾನ ಕಾರ್ಯಕ್ರಮ ಉದ್ಘಾಟನೆ

KannadaprabhaNewsNetwork |  
Published : Aug 11, 2025, 02:17 AM IST
ಮಯೂರ ಪ್ರತಿಷ್ಠಾನ ಮಂಗಳೂರು ಯಕ್ಷ ವೇಷಭೂಷಣ ಉದ್ಘಾಟನೆ | Kannada Prabha

ಸಾರಾಂಶ

ಕಟೀಲು ರಥಬೀದಿ ಶ್ರೀ ಸರಸ್ವತಿ ಸದನದಲ್ಲಿ ಮಯೂರ ಪ್ರತಿಷ್ಠಾನ ಮಂಗಳೂರಿನ ಪ್ರಥಮ ವಾರ್ಷಿಕೋತ್ಸವ ಹಾಗೂ ಯಕ್ಷ ಗುರು ರಕ್ಷಿತ್ ಪಡ್ರೆ ಶಿಷ್ಯವೃಂದದ ನೂತನ ಯಕ್ಷ ವೇಷಭೂಷಣ ಉದ್ಘಾಟನಾ ಕಾರ್ಯಕ್ರಮ ಮಯೂರಯಾನ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಹಿರಿಯ ಕಲಾವಿದರು ಕಲೆಯನ್ನು ಅಧ್ಯಯನದ ಮೂಲಕ ಬೆಳೆಸಿದ ರೀತಿ, ಯಕ್ಷಗಾನದ ನಡೆ, ಪರಂಪರೆಯನ್ನು ಗಮನಿಸಿ ಯುವ ಕಲಾವಿದರು ಬೆಳೆಯಬೇಕು. ತುಳುನಾಡಿನ ಪರಂಪರೆಯನ್ನು ಬಿಂಬಿಸುವ ಯಕ್ಷಗಾನ ಕಲೆಯನ್ನು ಮಕ್ಕಳಿಗೆ ಕಲಿಸಿದಾಗ ಭಾರತೀಯ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಶ್ರೀ ಹರಿನಾರಾಯಣ ದಾಸ ಆಸ್ರಣ್ಣ ಹೇಳಿದರು.

ಕಟೀಲು ರಥಬೀದಿ ಶ್ರೀ ಸರಸ್ವತಿ ಸದನದಲ್ಲಿ ನಡೆದ ಮಯೂರ ಪ್ರತಿಷ್ಠಾನ ಮಂಗಳೂರಿನ ಪ್ರಥಮ ವಾರ್ಷಿಕೋತ್ಸವ ಹಾಗೂ ಯಕ್ಷ ಗುರು ರಕ್ಷಿತ್ ಪಡ್ರೆ ಶಿಷ್ಯವೃಂದದ ನೂತನ ಯಕ್ಷ ವೇಷಭೂಷಣ ಉದ್ಘಾಟನಾ ಕಾರ್ಯಕ್ರಮ ಮಯೂರಯಾನವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.ಹಿರಿಯ ನ್ಯಾಯವಾದಿ, ಮಯೂರ ಪ್ರತಿಷ್ಠಾನದ ಅಧ್ಯಕ್ಷ ಪಿ.ಸದಾಶಿವ ಐತಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವುದು ಸಂತಸದಾಯಕವಾಗಿದ್ದು, ಯಕ್ಷಗಾನವನ್ನು ಉಳಿಸಿ, ಬೆಳೆಸುವಲ್ಲಿ ಯುವ ಜನತೆಯ ಕೊಡುಗೆ ಅಮೂಲ್ಯವಾಗಿದೆ ಎಂದರು.

ಪಣಂಬೂರು ಪಿ.ವಿ.ಐತಾಳ ಇಂಗ್ಲಿಷ್ ಯಕ್ಷಗಾನ ಬಳಗದ ಸಂಚಾಲಕ ಪಿ.ಸಂತೋಷ್ ಐತಾಳ, ನಿಡ್ಡೋಡಿ ಜ್ಞಾನರತ್ನ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭಾಸ್ಕರ ದೇವಸ್ಯ, ಮಂಗಳೂರು ಯಕ್ಷ ಮಂಜೂಷ ನಿರ್ದೇಶಕಿ ವಿದ್ಯಾ ಕೂಳ್ಯೂರು ಶುಭ ಹಾರೈಸಿದರು.

ಈ ಸಂದರ್ಭ ಯಕ್ಷಗಾನ ಹಿಮ್ಮೇಳ ಕಲಾವಿದರಾದ ಚೈತನ್ಯಕೃಷ್ಣ ಪದ್ಯಾಣ ಹಾಗೂ ಪ್ರಸಾದನ ಕಲಾವಿದ ಮೋಹಿನಿ ಕಲಾಸಂಪದ ಸಂಸ್ಥೆಯ ಗಂಗಾಧರ ಡಿ.ಶೆಟ್ಟಿಗಾರ್ ಅವರಿಗೆ ಮಯೂರಯಾನ ಪ್ರಶಸ್ತಿ ಪ್ರದಾನ ಮಾಡಲಾಯಿತು. ನೂತನ ಯಕ್ಷ ವೇಷಭೂಷಣ ಸಿದ್ಧಪಡಿಸಿದ ಬೆನಕ ಕಲಾ ಆರ್ಟ್ಸ್ ಸಂಸ್ಥೆಯ ಕೃಷ್ಣ ಭಟ್ ದೇವಕಾನ, ಯಕ್ಷಗುರು ರಕ್ಷಿತ್ ಶೆಟ್ಟಿ ಪಡ್ರೆ ಅವರನ್ನು ಸಮ್ಮಾನಿಸಲಾಯಿತು. ಸಂಘ, ಸಂಸ್ಥೆಗಳನ್ನು ಗೌರವಿಸಲಾಯಿತು.

ಪ್ರತಿಷ್ಠಾನದ ಉಪಾಧ್ಯಕ್ಷ ಪ್ರಕಾಶ್ ಮೂಡಿತ್ತಾಯ ಸ್ವಾಗತಿಸಿದರು. ರತ್ನದೇವ್ ಪುಂಜಾಲಕಟ್ಟೆ ವಂದಿಸಿದರು. ಉಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ಕಟೀಲು ಶ್ರೀ ದೇವಿ ಸನ್ನಿಧಿಯಲ್ಲಿ ಯಕ್ಷ ಸೇವೆ ನಡೆಯಿತು. ಬಳಿಕ ಪ್ರತಿಷ್ಠಾನ ಕಲಾವಿದರಿಂದ ಯಕ್ಷಗಾನ ಬಯಲಾಟ ಅಶ್ವಮೇಧ ಪ್ರದರ್ಶನ ನಡೆಯಿತು.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು