ಭಾರತೀಯರಲ್ಲಿ ವಿಜ್ಞಾನ ಜ್ಞಾನ ರಕ್ತಗತವಾಗಿದೆ: ಪ್ರೊ.ಕೆ. ಸಿದ್ದಪ್ಪ

KannadaprabhaNewsNetwork | Published : Mar 20, 2024 1:22 AM

ಸಾರಾಂಶ

ಸಿಂಧೂ ಕಣಿವೆ ನಾಗರೀಕತೆಯಲ್ಲಿನ ತಂತ್ರಜ್ಞಾನ, ಶಿಲ್ಪಕಲೆ, ನಾಗರಿಕತೆಯ ವ್ಯವಸ್ಥೆಯ ಮೇಲೆ ವೈಜ್ಞಾನಿಕತೆ ಬೆಳಕು ಚೆಲ್ಲಿತ್ತು. ಉತ್ಖನನದ ಸಮಯದಲ್ಲಿ ಇಲ್ಲಿನ ಕಟ್ಟಡಗಳ ವಿನ್ಯಾಸ ಕಂಡು ವಿಶ್ವವೇ ಬೆರಗಾಗಿತ್ತು. ಹೀಗಾಗಿ ನಮ್ಮ ಹಿರಿಯರ ಜ್ಞಾನವನ್ನು ಉಪಯೋಗಿಸಿಕೊಂಡು ಹೊಸ ಆವಿಷ್ಕಾರದಲ್ಲಿ ತೊಡಗಿಸಿಕೊಳ್ಳಬೇಕು

ಫೋಟೋ- 19ಎಂವೈಎಸ್ 4- ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಕೆ–ಸಿಇಟಿ ಮತ್ತು ನೀಟ್ ಪರೀಕ್ಷಾ ತರಬೇತಿ ಶಿಬಿರವನ್ನು ವಿಶ್ರಾಂತ ಕುಲಪತಿ ಪ್ರೊ.ಕೆ. ಸಿದ್ದಪ್ಪ ಉದ್ಘಾಟಿಸಿದರು. ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಶೈಕ್ಷಣಿಕ ಡೀನ್ ಪ್ರೊ.ಎನ್. ಲಕ್ಷ್ಮೀ, ವಿಜಯ ವಿಠ್ಠಲ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಆರ್. ವಾಸುದೇವ ಭಟ್, ಅಧ್ಯಯನ ವಿಭಾಗದ ಡೀನ್ ಪ್ರೊ. ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದಾರೆ.

---

ಕನ್ನಡಪ್ರಭ ವಾರ್ತೆ ಮೈಸೂರು

ಭಾರತೀಯರಲ್ಲಿ ವಿಜ್ಞಾನದ ಜ್ಞಾನ ರಕ್ತಗತವಾಗಿ ಬಂದಿದೆ. ಸಿಂಧೂ ಕಣಿವೆ ನಾಗರಿಕತೆ ಕಾಲದಿಂದಲೂ ಜನಜೀವನದ ನಡುವೆ ವಿಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಕೆ. ಸಿದ್ದಪ್ಪ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮುಕ್ತ ವಿವಿಯ ಆಂತರಿಕ ಗುಣಮಟ್ಟ ಆಶ್ವಾಸನಾ ಕೇಂದ್ರ, ಸ್ಪರ್ಧಾತ್ಮಕ ತರಬೇತಿ ಕೇಂದ್ರ ಮತ್ತು ವಿಜಯ ವಿಠ್ಠಲ ವಿದ್ಯಾಸಂಸ್ಥೆಯು ಮಂಗಳವಾರ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಕೆ–ಸಿಇಟಿ ಮತ್ತು ನೀಟ್ ಪರೀಕ್ಷಾ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಿಂಧೂ ಕಣಿವೆ ನಾಗರೀಕತೆಯಲ್ಲಿನ ತಂತ್ರಜ್ಞಾನ, ಶಿಲ್ಪಕಲೆ, ನಾಗರಿಕತೆಯ ವ್ಯವಸ್ಥೆಯ ಮೇಲೆ ವೈಜ್ಞಾನಿಕತೆ ಬೆಳಕು ಚೆಲ್ಲಿತ್ತು. ಉತ್ಖನನದ ಸಮಯದಲ್ಲಿ ಇಲ್ಲಿನ ಕಟ್ಟಡಗಳ ವಿನ್ಯಾಸ ಕಂಡು ವಿಶ್ವವೇ ಬೆರಗಾಗಿತ್ತು. ಹೀಗಾಗಿ ನಮ್ಮ ಹಿರಿಯರ ಜ್ಞಾನವನ್ನು ಉಪಯೋಗಿಸಿಕೊಂಡು ಹೊಸ ಆವಿಷ್ಕಾರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ತಂತ್ರಜ್ಞಾನದ ಬೆಳವಣಿಗೆಯು ವಿಜ್ಞಾನದ ಅಭಿವೃದ್ಧಿಯಿಂದ ಸಾಧ್ಯವಾಗಿದೆ. ಅದನ್ನು ಜನೋಪಗಿಯಾಗಿ ಬಳಸಿದರೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ವಿಜ್ಞಾನ ಕ್ಷೇತ್ರದಲ್ಲಿ ಅದ್ಭುತ ಸೃಷ್ಟಿಸಲು ಆತ್ಮವಿಶ್ವಾಸ ಅಗತ್ಯ. ನಿರಂತರ ಶ್ರಮದಿಂದ ಆ ರೀತಿಯ ಸಾಧನೆ ಸಾಧ್ಯ. ಸಿ.ವಿ. ರಾಮನ್ ಅವರ ಆವಿಷ್ಕಾರ ಭಾರತವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿತ್ತು. ಇಂದಿಗೂ ರಾಮನ್ ಪರಿಣಾಮದ ಕುರಿತು ತಿಂಗಳಿಗೆ 1,500ರಷ್ಟು ಸಂಶೋಧನೆಗಳು ನಡೆಯುತ್ತಿರುವುದು ಆಶ್ಚರ್ಯಕರ. ಅವರನ್ನು ಆದರ್ಶವಾಗಿಟ್ಟುಕೊಂಡು ಹೊಸ ಆವಿಷ್ಕಾರಕ್ಕೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.

ವಿಜಯ ವಿಠ್ಠಲ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಆರ್. ವಾಸುದೇವ ಭಟ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗಳಲ್ಲಿ ವ್ಯವಹಾರಿಕ ಉದ್ದೇಶವೇ ತುಂಬಿದೆ. ಇದರಿಂದಾಗಿ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗೆ ಅವಕಾಶ ದೊರೆಯದಿರುವ ಸಾಧ್ಯತೆ ಇದೆ ಎಂದರು.

ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಶೈಕ್ಷಣಿಕ ಡೀನ್ ಪ್ರೊ.ಎನ್. ಲಕ್ಷ್ಮೀ, ಅಧ್ಯಯನ ವಿಭಾಗದ ಡೀನ್ ಪ್ರೊ. ರಾಮನಾಥಂ ನಾಯ್ಡು, ವಿಜಯ ವಿಠ್ಠಲ ಪಿಯು ಕಾಲೇಜು ಪ್ರಾಂಶುಪಾಲ ಎಚ್. ಸತ್ಯಪ್ರಸಾದ್, ಎಸ್. ನಿರಂಜನ್ ರಾಜ್, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.

Share this article