ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಿಂದ ಆಸ್ತಿ ಕರ ಸಿಕ್ಕಾಪಟ್ಟೆ ಹೆಚ್ಚಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಮುಂದಿನ 15 ದಿನ ಮಹಾನಗರದ ಯಾರೊಬ್ಬರೂ ಆಸ್ತಿ ತೆರಿಗೆ ಪಾವತಿಸದಂತೆ ನಾಗರೀಕರಿಗೆ ಕರೆನೀಡಿದೆ.
ಮಹಾನಗರ ಪಾಲಿಕೆಗೆ ತನ್ನ ನಿಲುವು ಪರಾಮರ್ಶಿಸಲು 15 ದಿನಗಳ ಕಾಲಾವಕಾಶ ನೀಡೋಣ. ಒಂದು ವೇಳೆ ಸ್ಪಂದನೆ ಸಿಗದಿದ್ದಲ್ಲಿ ಹುಬ್ಬಳ್ಳಿ- ಧಾರವಾಡ ಬಂದ್ ಮಾಡಿ ಉಗ್ರ ಹೋರಾಟ ಮಾಡಲು ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಲಾಯಿತು.
ತಜ್ಞರ ಸಮಿತಿ ರಚನೆ: ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಕರ ವಿಪರೀತ ಎನ್ನುವಷ್ಟರ ಮಟ್ಟಿಗೆ ವಿಧಿಸಲಾಗುತ್ತಿದೆ. ರಾಜ್ಯ ಸರ್ಕಾರ ಕಾರಣ ಎಂದು ಪಾಲಿಕೆ ಹೇಳುತ್ತಿದೆ. ಆದಕಾರಣ ವಾಣಿಜ್ಯೋದ್ಯಮ ಸಂಸ್ಥೆಯ ನೇತೃತ್ವದಲ್ಲೇ ಹೋರಾಟ ಮಾಡೋಣ. ಸದ್ಯ ಸಂಸ್ಥೆ 7-8 ಜನರ ಸಮಿತಿ ರಚಿಸಲಾಗುವುದು. ಈ ಸಮಿತಿಯೂ ಪೂರ್ವಾಪರ ಯೋಚನೆ ಮಾಡಿ, ತೆರಿಗೆ ಯಾವ ರೀತಿ ಅವೈಜ್ಞಾನಿಕವಾಗಿದೆ ಎಂಬುದನ್ನು ಪರಿಶೀಲಿಸಿ ಸೂಕ್ತವಾದ ಮನವಿ ಪತ್ರ ತಯಾರಿಸಲಿದೆ ಎಂದರು.ಬಳಿಕ ಮೇಯರ್, ಪಾಲಿಕೆ ಆಯುಕ್ತರು, ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಅದಕ್ಕೆ ಅವರು ಸ್ಪಂದಿಸಿದರೆ ಸರಿ ಇಲ್ಲವೆಂದರೆ ಎಲ್ಲರೂ ಸೇರಿಕೊಂಡು ಹುಬ್ಬಳ್ಳಿ-ಧಾರವಾಡ ಬಂದ್ ಮಾಡೋಣ. ಈ ಎಲ್ಲ ಪ್ರಯತ್ನಗಳಿಗೆ 15 ದಿನ ಬೇಕಾಗಬಹುದು. ಆದಕಾರಣ ಈ 15 ದಿನಗಳ ಕಾಲ ಯಾರೊಬ್ಬರು ಆಸ್ತಿ ಕರ ತುಂಬುವುದು ಬೇಡ. ಬೆಂಗಳೂರು, ಮೈಸೂರ ಸೇರಿದಂತೆ ಯಾವುದೇ ಮಹಾನಗರ ಪಾಲಿಕೆಯಲ್ಲಿ ಇಲ್ಲದಿರುವ ಹೆಚ್ಚಿನ ತೆರಿಗೆ ಇಲ್ಲಿ ಯಾಕೆ? ಎಂದು ಪ್ರಶ್ನಿಸಿದರು. ಇದಕ್ಕೆ ಒಪ್ಪಿಗೆ ಇದ್ದರೆ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ತಮ್ಮ ಸಹಮತಿ ಸೂಚಿಸಬೇಕು. ನಾವು ಮುಂದುವರಿಯುತ್ತೇವೆ ಎಂದರು. ಅದಕ್ಕೆ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಸಮ್ಮತಿಸಿದರು.
ತೆರಿಗೆ ಹೆಚ್ಚಿಸಲು 2021ರಲ್ಲೇ ಮಾರ್ಗಸೂಚಿ ಬಂದಿದೆ. ಆದರೆ, ಆಗ ಏಕೆ ಮಾಡಲಿಲ್ಲ. ಈಗ ಏಕಾಏಕಿ ಪಾಲಿಕೆ ನಿರ್ಧಾರ ಕೈಗೊಂಡಿದೆ. ಇಷ್ಟು ದಿನ ಯಾಕೆ ವಿಳಂಬ ಮಾಡಿದರು. ತೆರಿಗೆ ಹಾಗೂ ಇ-ಸ್ವತ್ತು ಸಮಸ್ಯೆ ಪರಿಹರಿಸಲು ಪಾಲಿಕೆ ಆಯುಕ್ತರ ಭೇಟಿ ಮಾಡಿದರೆ ನಮ್ಮ ಹತ್ತಿರ ಏನು ಇಲ್ಲ. ಸರ್ಕಾರ ಕೈಯಲ್ಲಿದೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಪಾಲಿಕೆ ಆಯುಕ್ತರೇ ಸುಪ್ರೀಂ ಆಗಿದ್ದು, ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಾ. ರಘು ಮಾತನಾಡಿ, ಸಬ್ ರಿಜಿಸ್ಟರ್ ವ್ಯಾಲ್ಯೂ ಅನ್ವಯ ತೆರಿಗೆ ಸಂಗ್ರಹಿಸುತ್ತಿದ್ದು, ಇದನ್ನು ಹಿಂಪಡೆಯಬೇಕು. 2023 ರಿಂದ ಸೆಲ್ಫ್ ಅಸೆಸ್ಮೆಂಟ್ ಸ್ಥಗಿತವಾಗಿಲ್ಲ. ತೆರಿಗೆ ಸಂಗ್ರಹಿಸಲು ಮಹಾನಗರ ಪಾಲಿಕೆ ₹80 ಲಕ್ಷ ಖರ್ಚು ಮಾಡಿ ಆಧುನಿಕ ತಂತ್ರಜ್ಞಾನ ಅಳವಡಿಸಿದೆ. ಆದರೆ, ಅದು ಸರಿಯಿಲ್ಲ ಎಂದು ತಿಳಿಸಿದರು.
ಮತ್ತೆ ಕೆಲ ಉದ್ಯಮಿಗಳು, ಸಾರ್ವಜನಿಕರು, ಇದರ ವಿರುದ್ಧ ಕಾನೂನು ಹೋರಾಟವನ್ನೂ ನಡೆಸುವುದು ಸೂಕ್ತ. ಮೊದಲಿಗೆ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದಕ್ಕೆ ರಿಟ್ ಹಾಕಿ ತಡೆಯಾಜ್ಞೆ ತರುವುದು ಬೆಸ್ಟ್. ಆ ಮೇಲೆ ಹೋರಾಟ ಮಾಡೋಣ ಎಂದು ಸಲಹೆ ನೀಡಿದರು.
ಬೇಜವಾಬ್ದಾರಿ ಜನಪ್ರತಿನಿಧಿಗಳು:
ಟ್ಯಾಕ್ಸ್ ಟೆರರಿಸಂ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ವರ್ಷ 20/10 ಸೈಜಿನಲ್ಲಿದ್ದ ಅಂಗಡಿಯೊಂದಕ್ಕೆ ₹3 ಸಾವಿರ ಟ್ಯಾಕ್ಸ್ ಪಾವತಿಸಿದ್ದೇವು. ಈ ವರ್ಷ ಅದು ₹9 ಸಾವಿರ ಆಗಿದೆ. ಇನ್ನು 17 ಸಾವಿರ ಪಾವತಿಸಿದ್ದ ಮನೆಯ ಟ್ಯಾಕ್ಸ್ ಈ ವರ್ಷ ₹41 ಸಾವಿರ ಆಗಿದೆ. ಇದನ್ನೆಲ್ಲ ನೋಡಿದರೆ ಪಾಲಿಕೆಯೂ ಟ್ಯಾಕ್ಸ್ ಟೆರರಿಸಂ (ಭಯೋತ್ಪಾದನೆ) ಮಾಡಿದಂತಾಗುತ್ತಿದೆ ಎಂದು ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದರು.