ಹಿರಿಯ ಕಲಾವಿದ ಮನೋಹರ ಕುಂದರ್ ಅವರನ್ನು ಕಲಾವಿದರ ನೆಲೆಯಲ್ಲಿ ಸನ್ಮಾನಿಸಲಾಯಿತು
ಕನ್ನಡಪ್ರಭ ವಾರ್ತೆ ಮೂಲ್ಕಿ
ಯಕ್ಷಗಾನ ಶಿಷ್ಟ ಪರಂಪರೆಯ ಕಲಾ ಪ್ರಕಾರವಾಗಿದ್ದು, ತಾಳಮದ್ದಳೆ ಕಾರ್ಯಕ್ರಮದಿಂದ ಯಕ್ಷಗಾನ ಬೆಳೆಯಲು ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿ ಯಕ್ಷಲಹರಿ, ಯುಗಪುರುಷ ಸಂಯೋಜನೆಯಲ್ಲಿ ಕರ್ಣಾಟಕ ಬ್ಯಾಂಕ್ ಹಾಗೂ ನಮ್ಮ ಕುಡ್ಲ ವಾಹಿನಿಯ ಸಹಕಾರದಲ್ಲಿ ಕಿನ್ನಿಗೋಳಿಯ ಯುಗಪುರುಷದಲ್ಲಿ ನಡೆಯುತ್ತಿರುವ ಯಕ್ಷಲಹರಿ ತಾಳಮದ್ದಲೆ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ, ಯಾವುದೇ ಒಂದು ಸಂಸ್ಥೆಯನ್ನು ಕಟ್ಟುವುದು ಸುಲಭ, ಆದರೆ ಅದನ್ನು ಮುಂದುವರಿಸಿಕೊಂಡು ಹೋಗುವುದು ತುಂಬಾ ಕಷ್ಟ. ಯಕ್ಷಲಹರಿ ನಿರಂತರ ೩೪ ವರ್ಷಗಳಿಂದ ಕಾರ್ಯಕ್ರಮಗಳನ್ನು ನಡೆಸುತ್ತಾ ಒಂದು ಸಾಧನೆಯನ್ನೇ ಮಾಡಿದೆ ಎಂದು ಹೇಳಿದರು.
ಹಿರಿಯ ಕಲಾವಿದ ಭಾಗವತ ದೂಜ ಯಾನೆ ಬೂಬ ಶೆಟ್ಟಿ ಕೆಂಚನಕೆರೆ ಅವರ ಸಂಸ್ಮರಣೆಯನ್ನು ಯೋಗ ಶಿಕ್ಷಕ ಜಯ ಎ. ಶೆಟ್ಟಿ ಕೆಂಚನಕೆರೆ ಮಾಡಿದರು.
ಈ ಸಂದರ್ಭ ಹಿರಿಯ ಕಲಾವಿದ ಮನೋಹರ ಕುಂದರ್ ಅವರನ್ನು ಕಲಾವಿದರ ನೆಲೆಯಲ್ಲಿ ಸನ್ಮಾನಿಸಲಾಯಿತು. ಉದ್ಯಮಿ ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ಉದ್ಯಮಿ ಸಂದೀಪ್ ಶೆಟ್ಟಿ ಸಚ್ಚರ ಪರಾರಿ, ಕಿನ್ನಿಗೋಳಿ ದಿನೇಶ್ ಜುವೆಲ್ಲರಿಯ ದಿನೇಶ್ ಆಚಾರ್ಯ ಕಿನ್ನಿಗೊಳಿ, ಉದ್ಯಮಿ ರವಿಶಂಕರ ಮಲ್ಯ ಕಿನ್ನಿಗೋಳಿ, ಯುಗಪುರುಷದ ಕೆ.ಭುವನಾಭಿರಾಮ ಉಡುಪ, ಅಶ್ವಥ ರಾವ್, ಉಮೇಶ್ ನೀಲಾವರ, ದೀಪ್ತಿ ಬಾಲಕೃಷ್ಣ ಭಟ್, ವೇದವ್ಯಾಸ ರಾವ್, ರಾಮ ಹೊಳ್ಳ, ಸುಧಾಕರ ಕುಲಾಲ್, ಶಶಿಧರ ರಾವ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ವಸಂತ ದೇವಾಡಿಗ ವಂದಿಸಿದರು. ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ನೀಲಾವರ ಸನ್ಮಾನ ಪತ್ರ ವಾಚಿಸಿದರು. ಯಕ್ಷಲಹರಿ ಅಧ್ಯಕ್ಷ ರಘುನಾಥ ಕಾಮತ್ ಸ್ವಾಗತಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.