ಕನ್ನಡಪ್ರಭ ವಾರ್ತೆ ಅರಸೀಕೆರೆ
ಆಗಸ್ಟ್ 7ರ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಮಾತು ಆರಂಭಿಸಿದ ಡಾ.ಎಚ್ ಆರ್ ಸ್ವಾಮಿ, ಪ್ರಶಸ್ತಿ ಪುರಸ್ಕಾರಗಳು ನಮ್ಮ ಹಿರಿಮೆ- ಗರಿಮೆ ಹೆಚ್ಚಿಸುತ್ತವೆ ಎನ್ನುವುದಕ್ಕಿಂತ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಮತ್ತಷ್ಟು ತೊಡಗಿಕೊಳ್ಳುವಂತೆ ಪ್ರಯತ್ನಿಸುತ್ತವೆ ಎಂಬುದು ನನ್ನ ಭಾವನೆ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
ದೇಶ ಪ್ರಗತಿಪಥದಲ್ಲಿ ಸಾಗುತ್ತಿದೆಯಾದರೂ ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ತೋರದ ಪ್ರಜ್ಞಾವಂತರು, ಹಳ್ಳಿಗಳಲ್ಲಿ ಇನ್ನೂ ಜೀವಂತವಾಗಿರುವ ಮೂಢನಂಬಿಕೆ ಆಚರಣೆಗಳು ವಿಷಾದದ ಸಂಗತಿಗಳಾಗಿವೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಗತಿಪರ ಸಂಘಟನೆಗಳು ಪರಸ್ಪರ ಕೈಜೋಡಿಸಿ ಸಮಾಜವನ್ನು ಶೋಷಿಸುವ ಪಿಡುಗುಗಳ ವಿರುದ್ಧ ಸಮರಸಾರಬೇಕಿದೆ ಎಂದು ಕರೆ ನೀಡಿದರು. ನನ್ನ ಸಾಮಾಜಿಕ ಸೇವೆಯನ್ನು ಗುರುತಿಸಿ ನನ್ನ ನೆಚ್ಚಿನ ಗುರುಗಳಾದ ಕಿರಂ ಸರ್ ಅವರು ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ ಮಾಡಿರುವ ಆಯೋಜಕರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಧನ್ಯವಾದ ಸಮರ್ಪಿಸಿದರು.ಕಿರಂ ಪ್ರಶಸ್ತಿಗೆ ಬಾಜನರಾಗಿರುವ ಡಾ.ಎಚ್ ಆರ್ ಸ್ವಾಮಿಯವರು ನಿಜಕ್ಕೂ ಅರ್ಹರಾಗಿದ್ದು, ಪರಿಸರ ಕ್ಷೇತ್ರದಲ್ಲಿ ಅವರಿಗಿರುವ ಜ್ಞಾನ ಮೂಢನಂಬಿಕೆಗಳ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅವರು ನಡೆಸಿರುವ ಹೋರಾಟಗಳು ರಂಗಭೂಮಿ ಕಲೆಯಲ್ಲಿ ಅವರಿಗಿರುವ ಆಸಕ್ತಿ ಯುವ ಸಮುದಾಯಕ್ಕೆ ಆದರ್ಶವಾಗಿದೆ ಎಂದು ತಾಲೂಕು ದಂಡಾಧಿಕಾರಿಗಳಾದ ಸಂತೋಷ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರಲ್ಲವೇ ಶುಭ ಹಾರೈಸಿದರು.